ಬಿಸಿ ಬಿಸಿ ಸುದ್ದಿ

ಕೃಷಿ ಕಾಯ್ದೆ ವಿರೋಧಿಸಿ ನಿರಂತರ ಧರಣಿ ನಿರತ ಹೋರಾಟಗಾರರಿಂದ ಧ್ವಜಾರೋಹಣ

ಕಲಬುರಗಿ: ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ರೈತರು ನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ‘ಗಣರಾಜ್ಯೋತ್ಸವ ಜನತಾ ಪರೇಡ್’ ನಿಮಿತ್ತ ಧ್ವಜಾರೋಹಣ ನೆರವೇರಿಸಲಾಯಿತು.

ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ ಕಮರಡಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ರೈತ ದೇಶದ ಬೆನ್ನೆಲುಬು. ರೈತರ ಬೇಡಿಕೆ ಈಡೇರಿಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದು ಒತ್ತಾಯಿಸಿದ ಅವರು, ಕಾರ್ಪೊರೇಟ್ ಕಂಪನಿಗಳು ಕೇಂದ್ರ ಸರ್ಕಾರದ ಮೂಲಕ ಹೇರಿರುವ ರೈತ ವಿರೋಧಿ ಕಾನೂನುಗಳನ್ನು ದೇಶದಾದ್ಯಂತ ರೈತ ಸಮುದಾಯ ವಿರೋಧಿಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೂರು ಮಾರಕ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿ ಅನ್ನದಾತನ ಬದುಕನ್ನು ಅತಂತ್ರಗೊಳಿಸಲು ಮುಂದಾಗಿವೆ. ವ್ಯತಿರಿಕ್ತ ಹವಾಮಾನದ ನಡುವೆಯೂ ಮಸೂದೆಗಳ ವಿರುದ್ಧ ಎರಡು ತಿಂಗಳಿಂದ ದೆಹಲಿ ಗಡಿಯಲ್ಲಿ ರೈತರು ಪ್ರತಿಭಟಿಸುತ್ತಿದ್ದಾರೆ. ಈ ಹೋರಾಟದಲ್ಲಿ ಈಗಾಗಲೇ 130ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಕೃಷಿ ಕ್ಷೇತ್ರದ ಹಿತದೃಷ್ಟಿಯಿಂದ ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂಬ ರೈತರ ನ್ಯಾಯಯುತ ಬೇಡಿಕೆಗಳಿಗೆ ಈಡೇರಿಸಬೇಕೆಮದು ಆಗ್ರಹಿಸಿದರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿಶ್ರಮದಿಂದ ಸಂವಿಧಾನ ಅಸ್ತಿತ್ವಕ್ಕೆ ಬಂದಿದೆ. ವಿಶ್ವದ ಅತಿ ಶ್ರೇಷ್ಠ ಸಂವಿಧಾನ ನಮ್ಮದಾಗಿದೆ. ಇದರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು. ತೊಗರಿಗೆ 8750 ರೂ. ಬೆಂಬಲ ಬೆಲೆ ನೀಡಬೇಕು, ರೈತರು ಬೆಳೆದಷ್ಟು ತೊಗರಿ ಖರೀದಿಸಬೇಕೆಂದು ರೈತ ಮುಖಂಡ ಸುನೀಲ ಮಾನಪಡೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಪೌರ ಕಾರ್ಮಿಕರನ್ನು ಸೇವಾ ಹೀರಿತನದ ಅದಾರ ಮೇಲೆ ಖಾಯಂ ಮಾಡಬೇಕು ಮತ್ತು ಹಿಂದೆ ನಿರ್ಧರಿಸಿದಂತೆ 272 ಪೌರ ಕಾರ್ಮಿರಿಗೆ 30×40 ನಿವೇಶನ ಹಂಚಿಕೆ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಸುನೀಲ ಮಾನಪಡೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಅಶೋಕ ಮ್ಯಾಗೇರಿ, ಶಾಂತಪ್ಪ ಪಾಟೀಲ, ಸುನೀಲ ಮಾನಪಡೆ, ಮಲ್ಲಣಗೌಡ ಬನ್ನೂರು, ಎಸ್.ಎಫ್.ಐ. ಮುಖಂಡ ಸಿದ್ದು ಪಾಳಾ, ಅಹಿಂದ ಚಿಂತಕರ ವೇದಿಕೆಯ ಸಾಯಬಣ್ಣ ಜಮಾದಾರ, ಕಾಂಗ್ರೆಸ್ ಯುವ ಮುಖಂಡ ಪ್ರಜ್ಞಾನಂದ, ಮಕ್ಕಳ ಹಕ್ಕುಗಳ ಹೋರಾಟಗಾರ ವಿಠ್ಠಲ ಚಿಕಣಿ, ನೀರು ಸರಬರಾಜು ಗುತ್ತಿಗೆ ನೌಕರರ ಸಂಘದ ನಾಗರಾಜ, ಪೌರ ಕಾರ್ಮಿಕರ ಸಂಘದ ಕಮಲಾಬಾಯಿ, ಸಿದ್ದಪ್ಪ ಪುಟಗಿ, ಅಂಬಾರಾಯ, ಸೋನುಬಾಯಿ, ಕಾಂತಮ್ಮ, ಮರೆಮ್ಮ, ಲಕ್ಷ್ಮೀಬಾಯಿ, ಪಾರ್ವತಿ ಹಾಜರಿದ್ದರು.

emedialine

Share
Published by
emedialine