ಕಲಬುರಗಿ: ಇಡೀ ಕರ್ನಾಟಕ ಹೆಮ್ಮೆ ಪಡುವ ಕಾರ್ಯಕ್ರಮವಿದು. ಈ ಭಾಗಕ್ಕೆ ಅಗತ್ಯವಾದ ಸಾಹಸವನ್ನು ಬಸವರಾಜ ಕೊನೇಕ್ ಮಾಡುತ್ತಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಮತ್ತು ಸಕಾಲ ಸಚಿವ ಸುರೇಶ ಕುಮಾರ ಹೇಳಿದರು.
ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಸೋಮವಾರ ಜರುಗಿದ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಮತ್ತು ಬಸವ ಪ್ರಕಾಶನದ ೪೩ನೇ ವಾರ್ಷಿಕೋತ್ಸವ ಹಾಗೂ ಹಾಗೂ ೧೦೧ ಪುಸ್ತಕಗಳ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ದೇಶ ಸುತ್ತುವುದು ಹೆಚ್ಚಾಗುತ್ತಿದೆ. ಕೋಶ ಓದುವುದು ಕಮ್ಮಿಯಾಗುತ್ತಿದೆ. ಪುಸ್ತಕಗಳನ್ನು ಹೆಚ್ಚು ಓದಬೇಕು. ಅಂದಾಗ ಮಾತ್ರ ಪರಿಶ್ರಮ ಯಶಸ್ವಿಯಾಗಲು ಸಾಧ್ಯ. ಮೊಬೈಲ್ ಯುಗದಲ್ಲಿ ಪುಸ್ತಕ ಓದುವ ಸಂಸ್ಕೃತಿ ತರಬೇಕಾಗಿದೆ. ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆ ಕಲ್ಯಾಣ ಕರ್ನಾಟಕದಲ್ಲಿ ಮಹತ್ವದ ಕಾರ್ಯ ಮಾಡಿದೆ ಎಂದು ತಿಳಿಸಿದರು.
ಹಿರಿಯ ಸಾಹಿತಿ ರಾಘವೇಂದ್ರ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಆಧುನಿಕತೆಯ ಈ ಕಾಲದಲ್ಲಿ ಇಂದೆಂದಿಗಿಂತಲೂ ಪುಸ್ತಕಗಳಿಗೆ ಬಹಳ ಮಹತ್ವವಿದೆ. ಆಧುನಿಕತೆ ಮೂರು ಪರಿಣಾಮಗಳನ್ನು ತಂದೊಡ್ಡಿದೆ. ಮನುಷ್ಯನನ್ನು ಅವನ ಜವಾಬ್ದಾರಿಯಿಂದ ಬಿಡುಗಡೆ ಮಾಡುತ್ತಿದೆ, ಮಾತೃ ಮೌಲ್ಯ ಕಡಿಮೆ, ಸಂವೇದನೆಗಳನ್ನು ಜಡಗೊಳಿಸುತ್ತದೆ ಎಂದು ಹೇಳಿದರು.
ಈ ಎಲ್ಲ ವೇಗದ ಬದಲಾವಣೆಗಳಿಂದ ವ್ಯವಧಾನದ ಅನುಭವ ಪಡೆದುಕೊಳ್ಳುವುದು ಕಡಿಮೆಯಾಗಿದೆ. ಸಂವೇದನೆಗಳು ಸತ್ತು ಹೋಗಿವೆ. ಈ ಉಪಕ್ರಮಗಳಿಂದ ಬಿಡುಗಡೆಗೊಂಡು ಮತ್ತೆ ಮನಷ್ಯತ್ವ ಜಾಗ್ರಗೊಳಿಸಿಕೊಳ್ಳಬೇಕು ಎಂದರು. ಸಾಹಿತ್ಯ ಮತ್ತು ಸಂಗೀತಕ್ಕೆ ಅಂತಃಕರಣ ಕರಗಿಸುವ ಶಕ್ತಿಯಿದೆ. ಮಾನವ ಕುಲದ ರಕ್ಷಣೆಯ ಸಾಧನವಾಗಿ ಬಳಸಿದಾಗ ಮನುಷ್ಯ ಪುನಃ ಮನುಷ್ಯನಾಗಲು ಸಾಧ್ಯ ಎಂದು ಅವರು ತಿಳಿಸಿದರು.
ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶಕುಮಾರ ಹೊಸಮನಿ, ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಮುಖ್ಯ ಅತಿಥಿಗಳಾಗಿದ್ದರು. ಸೊನ್ನ ವಿರಕ್ತಮಠದ ಡಾ. ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವರಾಜ ಕೊನೇಕ್, ಸಿದ್ಧಲಿಂಗ ಬ. ಕೊನೇಕ್, ಶರಣಬಸವ ಬ.ಕೊನೇಕ್ ಇತರರಿದ್ದರು. ಶಿವರಾಜ ಪಾಟೀಲ ನಿರೂಪಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಗವಿಸಿದ್ಧ ಪಾಟೀಲ ಸ್ವಾಗತಿಸಿದರು.