ಕಲಬುರಗಿ: ಜಿಲ್ಲೆಯಲ್ಲಿ ಹೆಚ್ಐವಿ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ ಎಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜಶೇಖರ ಮಾಲಿ ಅವರು ತಿಳಿಸಿದ್ದಾರೆ.
ಮಂಗಳವಾರದಂದು ಜಿಲ್ಲಾ ಆರೋಗ್ಯ ನಿರೀಕ್ಷಕರ ಸಭಾ ಕೋಣೆಯಯಲ್ಲಿ ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿ, ಬೆಂಗಳೂರು, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರೆಡ್ ರಿಬ್ಬನ ಕ್ಲಬಗಳ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಎನ್.ಎಸ್.ಎಸ್. ಘಟಕ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ “ಹೆಚ್.ಐ.ವಿ. ಸೋಂಕಿನ ತಡೆಗಾಗಿ ಜಾಗತಿಕ ಒಗ್ಗಟ್ಟು ಹಾಗೂ ಜವಾಬ್ದಾರಿ ಹಂಚಿಕೆ”ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
2010ರಲ್ಲಿ ಶೇ.4.42 ಇದ್ದ ಸೋಂಕಿತರು ಪ್ರಸ್ತುತ ಶೇ.4.04 ರಷ್ಟಕ್ಕೆ ಇಳಿಕೆ ಕಂಡಿದೆ. ಸಕ್ರಿಯವಾಗಿ ಜಿಲ್ಲೆಯಲ್ಲಿ 4880 ಜನ ಹೆಚ್ಐವಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯರಲ್ಲೂ ಗಣನೀಯವಾಗಿ ಇಳಿಕೆ ಕಂಡುಬಂದಿದ್ದು ಇದು ಒಳ್ಳೆಯ ವಿಚಾರವಾಗಿದೆ. ಮತ್ತು ಸರಕಾರದ ಎಲ್ಲಾ ಸೌಲಭ್ಯಗಳನ್ನು ಫಲಾನುಭವಿಗಳು ಪಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸ ನೀಡಿ ಮಾತನಾಡಿದ ನಿವೃತ್ತ ಹಿರಿಯ ವೈದ್ಯಾಧಿಕಾರಿ ಡಾ.ದೇವಿಂದ್ರ ಮೈನಾಳೆ ಅವರು, ಏಡ್ಸ್ಸ್ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಅಸಾಧ್ಯ. ಆದರೆ, ನಿಯಂತ್ರಣದಲ್ಲಿ ಇಡಬಹುದು. ಜಾಥಾ, ಸುದ್ದಿವಾಹಿನಿ, ದಿನಪತ್ರಿಕೆಗಳು, ನಾಟಕ, ಬಿತ್ತಿ ಪತ್ರ ಮುಂತಾದವುಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳು ಆಗಬೇಕು ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧಿಶರು ಮತ್ತು ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಜಿ.ಆರ್. ಶೆಟ್ಟರ್ ಅವರು ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಏಡ್ಸ ನಿಯಂತ್ರಣ ಮಾಡುವುದರಲ್ಲಿ ಅತ್ಯುತ್ತಮ ಕೆಲಸ ನಿರ್ವಹಿಸಿದ 5ಜನ ಸಿಬ್ಬಂದಿಗಳಾದ ಸರಕಾರಿ ಸಾರ್ವಜನಿಕ ಆಸ್ಪತ್ರೆ ಚಿತ್ತಾಪೂರ ಆಪ್ತ ಸಮಾಲೋಚಕರಾದ ಸುಜ್ಞಾನಿ ಪಾಟೀಲ್, ಸರಕಾರಿ ಆಸ್ಪತ್ರೆ ಕೇಂದ್ರ ನರೋಣ ಪ್ರಯೋಗಶಾಲೆ ತಂತ್ರಜ್ಞರಾದ ರವಿ, ಕಲಬುರಗಿಯ ಜಿಲ್ಲಾ ಆಸ್ಪತ್ರೆ ಎ.ಆರ್.ಟಿ. ಕೇಂದ್ರದ ಸುಜಾತಾ ಪಾಟೀಲ್, ಜಿಲ್ಲಾ ಆಸ್ಪತ್ರೆ ವಾಹನ ಚಾಲಕರಾದ ಬಾಬುರಾವ ಮತ್ತು ಕಲಬುರಗಿ ಸ್ನೇಹಾ ಸೊಸೈಟಿಯ ಓ.ಆರ್.ಡಬ್ಲೂ. ಜ್ಯೋತಿ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅತಿಹೆಚ್ಚು ರಕ್ತದಾನ ಮಾಡಿದ ಕು.ಮಾಲಾ, ಸಿದ್ದಲಿಂಗ ಹಾಗೂ ಸಿದ್ದು ಪಾಟೀಲ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹೆಚ್ಐವಿ ಸಮುದಾಯಕ್ಕೆ ಬೆಂಬಲ ನೀಡಿದ ಸಂಘ-ಸಂಸ್ಥೆಗಳು, ದಾನಿಗಳಾದÀ ಅಜಿಂ ಪ್ರೇಮ್ಜಿ ಫೌಂಡೇಷನ್ ಕಲಬುರಗಿ ಸಂಯೋಜಕರಾದ ಮಹಾದೇವ, ಚೈಲ್ಡ್ ಲೈನ್ ಡೈರೆಕ್ಟರ್ ಡಾನ್ ಬಾಸ್ಕೊ ಪ್ಯಾರೆ ಸೊಸೈಟಿ ಕಲಬುರಗಿಯ ಫಾದರ್ ಸಾಜಿ ಜೊರ್ಜ ಮತ್ತು ಝೋನಲ್ ಕೋ-ಆರ್ಡಿನೇಟರ್ ಸಂಗಮ ಬೆಂಗಳೂರು ಮಹೇಶ ಪಾಟೀಲ್ ಅವರಿಗೂ ಸಹ ಸನ್ಮಾನಿಸಿ ಗೌರವಿಸಲಾಯಿತು.
ಕ್ಷಯರೋಗ ಕುರಿತು ಆಂದೋಲನ ಕಾರ್ಯಕ್ರಮ: ಇದೇ ಕಾರ್ಯಕ್ರಮದಲ್ಲಿ ಕ್ಷಯರೋಗ ಕುರಿತ ಆಂದೋಲನ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ವಿಭಾಗೀಯ ಅಧಿಕಾರಿ ಡಾ. ಸತೀಶ ಘಾಟ್ಗೆ ಮಾತನಾಡಿ, ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವ ಕಾರ್ಯಕ್ರಮ ಡಿ.1ರಿಂದ 31ರವರೆಗೆ ನಡೆಯಲಿದೆ. ಕ್ಷಯರೋಗ ಮೈಕ್ರೋ ಬ್ಯಾಕ್ಟೀರಿಯಾ ಟ್ಯುಬರ್ ಕ್ಯೂಲೋಸಿಸ್ ಎಂಬ ಸೂಕ್ಷ್ಮ ರೋಗಾಣುವಿನಿಂದ ಬರುತ್ತದೆ. ಕೆಮ್ಮಿದಾಗ ಅಥವಾ ಸೀನಿದಾಗ ಈ ರೋಗಾಣುಗಳು ಗಾಳಿಯ ಮೂಲಕ ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶ ಸೇರಿ ಅವನಿಗೆ ಸೋಂಕು ಉಂಟು ಮಾಡುತ್ತದೆ. ಕ್ಷಯರೋಗದ ಚಿಕಿತ್ಸೆ ಎಲ್ಲಾ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ದೊರೆಯುತ್ತದೆ ಎಂದು ಮಾಹಿತಿ ನೀಡಿದರು.
ಎರಡು ವಾರ ಅಥವಾ ಅದಕ್ಕಿಂತ ಮೇಲ್ಪಟ್ಟು ಸತತವಾದ ಕೆಮ್ಮು ಇದ್ದರೆ, ಬೇಗನೆ ವೈದ್ಯರ ಸಲಹೆ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು. ಮನೆ ಮನೆಗೆ ತೆರಳಿ ಆಶಾ ಕಾರ್ಯಕರ್ತೆಯರು ಕ್ಷಯರೋಗದ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಲಿದ್ದಾರೆ. ಇದಕ್ಕೆ ಜನಸಾಮಾನ್ಯರು ಸಹಕರಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧೀಕ್ಷಕರು ಡಾ. ಎ.ಎಸ್ ರುದ್ರವಾಡಿ, ಎಐಟಿ ವೈದ್ಯಾಧಿಕಾರಿ ರೇಣುಕಾ ಪ್ರಸಾದ, ತಾಲೂಕ ಆರೋಗ್ಯ ಅಧಿಕಾರಿ ಶರಣಬಸಪ್ಪ ಕ್ಯಾತ್ನಾಳ್, ಕಾಲರಾ ನಿರ್ಮೂಲನಾ ಅಧಿಕಾರಿ ಶರಣಬಸಪ್ಪ ಗಣಜಲಖೇಡ್, ಡೆಪ್ಕೋ ಜಿಲ್ಲಾ ಮೇಲ್ವಿಚಾರಕ ಸೋಮಶೇಖರ ಮಾಲಿ ಪಾಟೀಲ, ಜಿಲ್ಲಾ ಕ್ಷಯರೋಗ ಆಪ್ತ ಸಮಾಲೋಚಕ ಮಂಜುನಾಥ ಕಂಬಳಿಮಠ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ವಿವೇಕಾನಂದ ರೆಡ್ಡಿ ಸ್ವಾಗತಿಸಿದರು, ಇಎಸ್ಐ ಆಸ್ಪತ್ರೆಯ ಆಪ್ತ ಸಮಲೋಚಕಿ ಸುಗಲಾ ರಾಣಿ ಕಾರ್ಯಕ್ರಮ ನಿರೂಪಿಸಿದರು, ಎಆರ್ಟಿ ಆಪ್ತ ಸಮಾಲೋಚಕ ಮಲ್ಲಿಕಾರ್ಜುನ ವಂದಿಸಿದರು. ಪ್ರಯೋಗಶಾಲಾ ತಂತ್ರಜ್ಞರು, ಆಪ್ತ ಸಮಾಲೋಚಕರು ಹಾಗೂ ಎನ್ಜಿಓ ಸಂಸ್ಥೆಯ ಪ್ರತಿನಿಧಿಗಳು ಭಾಗಿಯಾಗಿದ್ದರು.
ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…
ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…
ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್ನ ದಾಸ್ನಾ…
ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…
ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…
ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…