ತ್ಯಾಗ ಮತ್ತು ಸಮಾನತೆಯ ಸಂದೇಶ ಸಾರುವ ಬಕ್ರೀದ್‌ ಹಬ್ಬ ಏಕೆ

  • ಅಫ್ಸರ್ ಕೊಡ್ಲಿಪೇಟೆ

ಮುಸ್ಲಿಮರ ಅತ್ಯಂತ ಶ್ರೇಷ್ಠ ಮತ್ತು ಮಹತ್ವದ ದಿನಗಳಲ್ಲೊಂದು.?

ದೇವ ನಿಷ್ಠೆಗಾಗಿ ತನಗೆ ಅತ್ಯಂತ ಪ್ರೀತಿಯ ಯಾವುದೇ ವಸ್ತುವನ್ನಾದರೂ ತ್ಯಾಗ ಮಾಡಲು ಮನುಷ್ಯ ಸಿದ್ಧನಿರಬೇಕೆಂಬುದೇ ಈ ಹಬ್ಬದ ಸಂದೇಶ.

ಬಕ್ರೀದ್ ಹಬ್ಬ ಮತ್ತು ಆರ್ಥಿಕತೆಗೆ ಕೊಡುಗೆ: ಒಂದು ಲೆಕ್ಕಾಚಾರದ ಪ್ರಕಾರ, ದೇಶದ 20 ಕೋಟಿ ಮುಸ್ಲಿಮರಲ್ಲಿ ಶೇ.8-10 ಮಂದಿ ಬಕ್ರೀದ್‌ ಹಬ್ಬದ ಸಂದರ್ಭ 10ರಿಂದ 50 ಸಾವಿರ ಆಡು-ಕುರಿ ಬಲಿ ಕೊಡುತ್ತಾರೆ. ಪ್ರತಿ ಪ್ರಾಣಿಗೆ ಸರಾಸರಿ 20 ಸಾವಿರ ರೂ. ತೆಗೆದುಕೊಂಡರೆ, 2 ಕೋಟಿ ಆಡಿನ 20 ಸಾವಿರ ರೂ.ನಂತೆ 4 ಲಕ್ಷ ಕೋಟಿ ರೂ. ಮೊತ್ತದ ವ್ಯವಹಾರ ನಡೆಯುತ್ತದೆ. ಈ ಮೊತ್ತ ಗ್ರಾಮೀಣ ಭಾರತದ ರೈತರಿಗೆ ಸೇರುತ್ತದೆ. ಆಡು ಸಾಕಣೆ ಸುಮಾರು 20 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುತ್ತಿದೆ. ಬಕ್ರೀದ್ ಹಬ್ಬ ರೈತರ ಆದಾಯವನ್ನು ಹೆಚ್ಚಿಸಲು ಸಹ ಸಹಕಾರಿಯಾಗುತ್ತದೆ .

ಹಜ್‌ನಲ್ಲಿ ಬಡವನಿಗೊಂದು, ಶ್ರೀಮಂತನಿಗೊಂದು ಡ್ರೆಸ್‌ ಕೋಡ್‌ ಇಲ್ಲ. ವರ್ಣ, ಕುಲ, ಗೋತ್ರ, ದೇಶ, ಭಾಷೆ, ಸ್ಥಾನಮಾನ ಗಳ ವ್ಯತ್ಯಾಸಗಳಿಲ್ಲದೆ ಎಲ್ಲರೂ ಒಂದೇ ಸಾಲಲ್ಲಿ, ಒಂದೇ ಕಡೆಯಲ್ಲಿ, ಒಂದೇ ದಿಕ್ಕಿಗೆ ಮುಖಮಾಡಿ, ಏಕ ದೇವ ವಿಶ್ವಾಸದ ಶ್ಲೋಕ ಜಪಿಸುತ್ತಾರೆ. ಹಗೆ, ದ್ವೇಷ, ಅಹಂ, ವೈರಾಗ್ಯ, ಶತ್ರುತ್ವವಿಲ್ಲದೇ ಬಾಳಬೇಕೆಂಬ ಸಂದೇಶವನ್ನು ಸಾರುತ್ತಾರೆ.

ಪವಿತ್ರ ಮಕ್ಕಾ ಭೂಮಿಯಲ್ಲಿ ಲಕ್ಷಾಂತರ ಮಂದಿ ಹಜ್‌ ಕರ್ಮದಲ್ಲಿ ತೊಡಗಿಕೊಳ್ಳುವಾಗ ಜಾಗತಿಕ ಮಟ್ಟದಲ್ಲಿ ಮುಸ್ಲಿಮರು ಈದ್‌ ಆಚರಿಸುತ್ತಾರೆ. ಪ್ರವಾದಿಗಳಲ್ಲೊಬ್ಬರಾದ ಇಬ್ರಾಹಿಂ (ಅ. ಸ.)ಹಾಗೂ ಅವರ ಪುತ್ರ ಇಸ್ಮಾಯಿಲ್‌ (ಅ. ಸ) ರ ದೇವನಿಷ್ಠೆ ಹಾಗೂ ತ್ಯಾಗೋಜ್ವಲ ಜೀವನದ ಸ್ಮರಣೆಯಾಗಿದೆ ಈದುಲ್‌ ಅಝ್ಹಾ . ದೇವ ನಿಷ್ಠೆಗಾಗಿ ತನಗೆ ಅತ್ಯಂತ ಪ್ರೀತಿಯ ಯಾವುದೇ ವಸ್ತುವನ್ನಾದರೂ ತ್ಯಾಗ ಮಾಡಲು ಮನುಷ್ಯ ಸಿದ್ಧನಿರಬೇಕೆಂಬುದೇ ಈ ಹಬ್ಬದ ಸಂದೇಶ.

ಸತ್ಯ ವಿಶ್ವಾಸಿಯು ಜೀವನದಲ್ಲಿ ಪಾಲಿಸಬೇಕಾದ 5 ಕಡ್ಡಾಯ ಕಾರ್ಯಗಳಲ್ಲಿ ಹಜ್‌ ಕೂಡಾ ಒಂದು. ಇಸ್ಲಾಮಿಕ್‌ ಕ್ಯಾಲೆಂಡರ್‌ನ ಕೊನೆ ತಿಂಗಳಾದ ದುಲ್ಹಜ್‌ನ 9ನೇ ದಿನ ಮಕ್ಕಾದ ‘ಅರಫಾ’ ಎಂಬ ಬೃಹತ್‌ ಮೈದಾನದಲ್ಲಿ ಲಕ್ಷಾಂತರ ಮಂದಿ ಹಜ್‌ಗಾಗಿ ಒಂದುಗೂಡುತ್ತಾರೆ. ಅದೇ ದಿನ ಜಗತ್ತಿನೆಲ್ಲೆಡೆ ಮುಸ್ಲಿಮರು ಉಪವಾಸ ಕೈಗೊಂಡು, ತಿಂಗಳ 10ರಂದು ಅಂದರೆ ಮರುದಿನ ಈದ್‌ ಅಥವಾ ಹಬ್ಬ ಆಚರಿಸುತ್ತಾರೆ. ಅನೇಕರು ಒಂದನೇ ತಾರೀಕಿನಿಂದಲೇ ಆರಂಭಿಸಿ 9ನೇ ತಾರೀಕಿನ ತನಕ ಪ್ರತಿದಿನ ಉಪವಾಸ ಕೈಗೊಳ್ಳುವುದೂ ಇದೆ. ಮಕ್ಕಾದಲ್ಲಿರುವ ಹಜ್‌ ಯಾತ್ರಿಕರು ಅರಫಾ ಮೈದಾನದಲ್ಲಿ ಒಗ್ಗೂಡಿ ಒಕ್ಕೊರಲಿನಿಂದ ಅಲ್ಲಾಹನ ಮಹಿಮೆಯನ್ನು ಕೊಂಡಾಡುತ್ತಾರೆ. ಬಡವ ಶ್ರೀಮಂತನೆಂಬ ಭೇದಭಾವವಿಲ್ಲದೇ ಏಕತೆ, ಸಮಾನತೆಯನ್ನು ಜಗತ್ತಿಗೆ ಸಾರುತ್ತಾರೆ.

ಜಗತ್ತಿನ ಶಾಂತಿ, ಎಲ್ಲರ ಸುಖ, ಸುಭಿಕ್ಷೆಗಾಗಿ ಪ್ರಾರ್ಥಿಸುತ್ತಾರೆ. ಹಜ್‌ನಲ್ಲಿ ಭಾಗವಹಿಸಲು ಸಾಧ್ಯವಾಗದ, ಜಗತ್ತಿನ ಎಲ್ಲಾ ಭಾಗಗಳ ಮುಸ್ಲಿಮರು ಅರಫಾದಲ್ಲಿ ಒಟ್ಟು ಸೇರುವ ಜಾಗತಿಕ ಹಾಜಿಗಳ ಜೊತೆ ಭಾವೈಕ್ಯ ಪ್ರದರ್ಶಿಸುತ್ತಾ ಆ ದಿನ ಉಪವಾಸ ಆಚರಿಸುತ್ತಾರೆ. ಹಬ್ಬದ ದಿನ ಸೂರ್ಯೋದಯದ ಬಳಿಕ ವಿಶೇಷ ಸಾಮೂಹಿಕ ನಮಾಜ್‌ ಕೂಡಾ ನಡೆಯುತ್ತದೆ. ಪರಸ್ಪರ ಶುಭ ಹಾರೈಕೆ, ಹಸ್ತಲಾಘವ, ಆಲಿಂಗನ, ನೆರೆಹೊರೆ-ಕುಟುಂಬ ಸಂದರ್ಶನದ ಮೂಲಕ ಹಬ್ಬದ ದಿನವನ್ನು ಅವಿಸ್ಮರಣೀಯಗೊಳಿಸುತ್ತಾರೆ.

ಸಹೋದರತೆಯ ಉಜ್ವಲ ಸಂದೇಶ: ಹಜ್‌ಗಾಗಿ ವಿಶ್ವದ ನಾನಾ ದಿಕ್ಕುಗಳಿಂದ ಬಂದು ಅರಫಾದಲ್ಲಿ ಒಂದುಗೂಡುವ ಜನರ ವಿಶೇಷತೆ ಏನೆಂದರೆ ಎಲ್ಲರೂ ಶುಭ್ರ ಶ್ವೇತ ವಸ್ತ್ರವನ್ನಷ್ಟೇ ಧರಿಸುವುದು. ಅಲ್ಲಿ ಬಡವನಿಗೊಂದು, ಶ್ರೀಮಂತನಿಗೊಂದು ಡ್ರೆಸ್‌ಕೋಡ್‌ ಇಲ್ಲ. ಕಾರಿದ್ದವನಿಗೂ ಬರಿಗಾಲಲ್ಲೇ ನಡೆಯುವವನ ಮಧ್ಯೆಯೂ ವ್ಯತ್ಯಾಸ ಗುರುತಿಸಲು ಸಾಧ್ಯವಿಲ್ಲ. ವರ್ಗ, ವರ್ಣ, ಕುಲ, ಗೋತ್ರ, ದೇಶ, ಭಾಷೆ, ಸ್ಥಾನಮಾನ, ಪದವಿ ಇತ್ಯಾದಿಗಳ ಯಾವುದೇ ವ್ಯತ್ಯಾಸಗಳಿಲ್ಲದೆ ಬಡವ, ಶ್ರೀಮಂತನೋ, ನಿರ್ಗತಿಕನೋ ಒಂದೇ ಸಾಲಲ್ಲಿ, ಒಂದೇ ಕಡೆಯಲ್ಲಿ, ಒಂದೇ ದಿಕ್ಕಿಗೆ ಮುಖಮಾಡಿ, ಏಕದೈವ ವಿಶ್ವಾಸದ ಶ್ಲೋಕಗಳನ್ನು ಜಪಿಸುತ್ತಾರೆ . ಹಗೆ, ದ್ವೇಷ, ಅಹಂ, ವೈರಾಗ್ಯ, ಶತ್ರುತ್ವವಿಲ್ಲದೇ ಮನುಷ್ಯರೆಲ್ಲರೂ ಸಹೋದರರು ಮತ್ತು ಸಮಾನರು ಎಂಬ ಸಂದೇಶವನ್ನು ಜಗತ್ತಿಗೆ ಹಜ್‌ ಮೂಲಕ ಸಾರಲಾಗುತ್ತದೆ.

ಬಕ್ರೀದ್‌ಗೆ ಕುರಿ ಬಲಿ ಏಕೆ ಗೊತ್ತೆ?: ಪ್ರವಾದಿ ಇಬ್ರಾಹಿಂ ಅವರು ತಮ್ಮ ಮಗ ಇಸ್ಮಾಯಿಲ್‌ರನ್ನೇ ದೇವನಿಗೆ ಬಲಿಯರ್ಪಿಸಲು ಮುಂದಾಗುವ ರೋಚಕ ಘಟನೆಯೇ ಬಲಿದಾನ ಅಥವಾ ಕುರ್ಬಾನಿಯ ಹಿಂದಿರುವ ಇತಿಹಾಸ. ಸುದೀರ್ಘ ಕಾಲದ ಬಳಿಕ ಜನಿಸಿದ ಮಗ ಇಸ್ಮಾಯಿಲ್‌ ಜೊತೆ ಸಂತೋಷಭರಿತ ಜೀವನವನ್ನು ನಡೆಸುತ್ತಿರುವ ಇಬ್ರಾಹಿಮರಿಗೆ ಒಂದಿನ ವಿಶೇಷ ಕನಸು. ಮಗನನ್ನೇ ಬಲಿಯರ್ಪಿಸುವ ಕನಸೊಂದನ್ನು ಕಾಣುವ ಇಬ್ರಾಹಿಮರು ಅದನ್ನು ಪುತ್ರ ಇಸ್ಮಾಯಿಲರಿಗೂ ತಿಳಿಸಿತ್ತಾರೆ. ಪರಸ್ಪರ ಒಪ್ಪಿಗೆಯೊಂದಿಗೆ ಸ್ವಂತ ಪುತ್ರನನ್ನೇ ಬಲಿಯರ್ಪಿಸಲು ಪ್ರವಾದಿ ಇಬ್ರಾಹಿಂ ತಯಾರಾಗುತ್ತಾರೆ. ದೇವನ ಆದೇಶ ಅಲ್ಲದಿದ್ದರೂ ಕನಸಲ್ಲಿ ಕಂಡಿದ್ದು ದೇವನ ಆದೇಶ ಎಂದುಕೊಂಡು ಅದರ ಅನುಷ್ಠಾನಕ್ಕೆ ಮುಂದಾಗುತ್ತಾರೆ. ಆದರೆ ಅಲ್ಲಾಹನಿಗೆ ಬೇಕಿದ್ದದ್ದು ಪ್ರವಾದಿ ಇಬ್ರಾಹಿಮರ ದೇವನಿಷ್ಠೆ ಮಾತ್ರವಾಗಿತ್ತು. ಅದಕ್ಕಾಗಿಯೇ ಆಡೊಂದನ್ನು ಇಬ್ರಾಹಿಮರಿಗೆ ನೀಡುವ ಅಲ್ಲಾಹನು, ಅದನ್ನೇ ಬಲಿಯರ್ಪಿಸಲು ಆದೇಶಿಸುತ್ತಾನೆ.

ಈ ಕುರಿತು ಕುರ್‌ಆನ್‌ ಹೇಳುವುದು ನೋಡಿ, ‘ನಿಶ್ಚಯವಾಗಿಯೂ ಅದೊಂದು ಪ್ರತ್ಯಕ್ಷ ಪರೀಕ್ಷೆಯಾಗಿತ್ತು. ಆ ಬಾಲಕನಿಗೆ ಬದಲಾಗಿ ನಾವು ಒಂದು ಮಹತ್ತರ ಬಲಿದಾನವನ್ನು ಪರಿಹಾರವಾಗಿ ಅವರಿಗೆ ಕೊಟ್ಟೆವು. ಆ ಘಟನೆಯ ನೆನಪನ್ನು ಮುಂದಿನ ಜನಾಂಗದಲ್ಲೂ ಉಳಿಸಿದೆವು. (ಕುರ್‌ಆನ್‌- 37:106 -108). ಇಂದು ಬಕ್ರೀದ್‌ ಸಂದರ್ಭ ಜಗತ್ತಿನ ಎಲ್ಲೆಡೆ ನೀಡಲಾಗುವ ಪ್ರಾಣಿ ಬಲಿಯು ಇಬ್ರಾಹಿಂ ಮತ್ತವರ ಪುತ್ರನ ತ್ಯಾಗದ ಸಂದೇಶವನ್ನಷ್ಟೇ ಸಾರುತ್ತದೆ. ‘ಅವುಗಳ ಮಾಂಸವಾಗಲಿ ರಕ್ತವಾಗಲಿ ಅಲ್ಲಾಹನಿಗೆ ತಲುಪುವುದಿಲ್ಲ. ನಿಮ್ಮಿಂದ ಅವನಿಗೆ ತಲುಪುವುದು ಧರ್ಮನಿಷ್ಠೆ ಮಾತ್ರ’ ಎಂದು ಕುರ್‌ಆನ್‌ ಸ್ಪಷ್ಟವಾಗಿ ಮಾನವನ ದೇವನಿಷ್ಠೆಯನ್ನೇ ಹೇಳುತ್ತದೆ. ಇದನ್ನೇ ಅನುಸರಿಸಿ ತ್ಯಾಗದ ಸಂಕೇತವಾಗಿ ಮುಸ್ಲಿಮರು ಬಕ್ರೀದ್‌ ದಿನ ಪ್ರಾಣಿ ಬಲಿ ನೀಡುತ್ತಾರೆ.

ಬಲಿ ನೀಡಲಾದ ಪ್ರಾಣಿಯ ಮಾಂಸವನ್ನು ಮೂರು ಪಾಲುಗಳಾಗಿಸಿ, ಒಂದನ್ನು, ಬಲಿ ಕೊಟ್ಟವರ ಕುಟುಂಬದವರಿಗೆ, ಇನ್ನೊಂದನ್ನು ಬಂಧು ಮಿತ್ರರಿಗೆ ಮತ್ತು ಮೂರನೆಯದನ್ನು ಬಡವರಿಗೆ ಹಂಚಲಾಗುತ್ತದೆ. ಹಬ್ಬ ಉಳ್ಳವರ ಮನೆಯ ಸಂಭ್ರಮ ಮಾತ್ರವಾಗದೆ ಬಡವನ ಮನೆಯ ಒಲೆಯೂ ಉರಿಯಬೇಕೆಂಬುದೇ ಇದರ ಉದ್ದೇಶ. ಹಂಚಿ ತಿನ್ನಬೇಕೆಂಬ ಪಾಠ ಇಲ್ಲಿ ಮತ್ತೆ ಅನಾವರಣಗೊಳ್ಳುತ್ತದೆ.

ಅರಫಾದಲ್ಲೇ ಪ್ರವಾದಿಯ ವಿದಾಯ ಭಾಷಣ: ಆದಂರ ಮೂಲಕ ಆರಂಭಗೊಳ್ಳುವ ಪ್ರವಾದಿ ಪರಂಪರೆ ಮುಹಮ್ಮದ್‌ ಅವರ ಮೂಲಕ ಕೊನೆಗೊಳ್ಳುತ್ತದೆ. ಜಗತ್ತಿನ ಎಲ್ಲ ಮುಸಲ್ಮಾನರು ಪ್ರವಾದಿ ಮುಹಮ್ಮದರ ಅನುಯಾಯಿಗಳು. ಪವಿತ್ರ ಮಕ್ಕಾದಲ್ಲಿ ಜನಿಸಿದ್ದರೂ ಶತ್ರುಗಳ ಉಪಟಳ ತಾಳಲಾರದೆ ಮದೀನಾ ಪಟ್ಟಣಕ್ಕೆ ತೆರಳುವ ಪೈಗಂಬರ್‌ ಮುಹಮ್ಮದ್‌, ಬಳಿಕ ತಮ್ಮ ಜೀವನದ ಏಕೈಕ ಮತ್ತು ಕೊನೆಯ ಹಜ್‌ ಕರ್ಮ ನಿರ್ವಹಿಸಲು ಮಕ್ಕಾಗೆ ಮರಳುತ್ತಾರೆ. ಇದೇ ಸಂದರ್ಭ ಅರಫಾ ಮೈದಾನದಲ್ಲಿ ನಿಂತು ತಮ್ಮ ಅನುಯಾಯಿಗಳನ್ನುದ್ದೇಶಿಸಿ ಅವರು ಮಾಡಿದ ಭಾಷಣ ಇಂದಿಗೂ ಚರಿತ್ರೆಯಲ್ಲಿ ದಾಖಲಾದ ಅದ್ವಿತೀಯ ಭಾಷಣ.

ಪ್ರವಾದಿತ್ವದ ಬಹುದೊಡ್ಡ ಜವಾಬ್ದಾರಿಯನ್ನು ನಿಭಾಯಿಸಿದ ತೃಪ್ತಿಯೊಂದಿಗೆ ಅಲ್ಲಿ ನೆರೆದಿರುವ ಜನಸ್ತೋಮವನ್ನು ಕುರಿತು ಅವರು ಹೀಗೆ ಹೇಳುತ್ತಾರೆ: ‘ಜನರೇ, ಅಲ್ಲಾಹನು ಈ ರೀತಿ ಹೇಳಿರುವನು: ಮಾನವರೇ, ನಿಮ್ಮನ್ನು ನಾನು ಒಂದು ಗಂಡು ಮತ್ತು ಒಂದು ಹೆಣ್ಣಿನಿಂದ ಸೃಷ್ಟಿಸಿರುವೆನು. ನಾನು ನಿಮ್ಮನ್ನು ವಿವಿಧ ಕುಲ-ಗೋತ್ರಗಳಾಗಿ ಮಾಡಿರುವುದು ನೀವು ಪರಸ್ಪರ ಪರಿಚಯ ಇಟ್ಟುಕೊಳ್ಳಲು. ಖಂಡಿತವಾಗಿಯೂ ಅಲ್ಲಾಹನ ಬಳಿ ನಿಮ್ಮ ಪೈಕಿ ಅತ್ಯ​ಕ ಭಯ ಭಕ್ತಿಯುಳ್ಳವನೇ ಗೌರವಾರ್ಹ.

ಅರಬನಿಗೆ ಅರಬೇತರನಿಗಿಂತ ಯಾವುದೇ ಶ್ರೇಷ್ಠತೆ ಇಲ್ಲ. ಅರಬೇತರನಿಗೆ ಅರಬನ ಮೇಲೆ ಯಾವುದೇ ಶ್ರೇಷ್ಠತೆ ಇಲ್ಲ. ಕರಿಯನಿಗಿಂತ ಬಿಳಿಯನೂ, ಬಿಳಿಯನಿಗಿಂತ ಕರಿಯನೂ ಇಲ್ಲಿ ಶ್ರೇಷ್ಠನಲ್ಲ, ಧರ್ಮನಿಷ್ಠೆ ಮತ್ತು ದೇವಭಕ್ತಿಯ ಹೊರತು. ಮನುಷ್ಯರೆಲ್ಲರೂ ಆದಮರ ಮಕ್ಕಳು. ಆದಮರಾದರೋ ಮಣ್ಣಿನಿಂದ ಸೃಷ್ಟಿಸಲ್ಪಟ್ಟವರು. ರಕ್ತ ಅಥವಾ ಸಂಪತ್ತಿನ ಆಕಾರದಲ್ಲಿರುವ ಎಲ್ಲ ಶ್ರೇಷ್ಠತೆಗಳನ್ನು ನಾನು ಕಾಲಿನಿಂದ ತುಳಿದಿದ್ದೇನೆ. ನಿರ್ಣಾಯಕ ದಿನದಂದು ನಿಮ್ಮ ಪ್ರಭುವಿನ ಮುಂದೆ ನಿಮ್ಮ ಕೊರಳ ಮೇಲೆ ಈ ಲೋಕದ ಭಾರವನ್ನು ಹೊತ್ತು ಹಾಜರಾಗದಿರಿ. ಇತರ ಜನರಾದರೋ ಅಂದು ಪರಲೋಕದ ಪುಣ್ಯಗಳನ್ನು ಹೊತ್ತು ಹಾಜರಾಗುವರು. ಅಂತಹ ಪರಿಸ್ಥಿತಿಯಲ್ಲಿ ಖಂಡಿತ ನಾನು ಅಲ್ಲಾಹನ ಮುಂದೆ ನಿಮಗೆ ನೆರವಾಗಲಾರೆ’.

ಸಮಾನತೆಯ ಸಂದೇಶ ಸಾರುವ ದಿನ: ಆಧುನಿಕ ಮಾನವ ಮಂಗಳನ ಅಂಗಳಕ್ಕೆ ಮುಟ್ಟಿದ್ದರೂ ಇಂದಿಗೂ ಶ್ರೇಷ್ಠ-ಕನಿಷ್ಠ, ಕರಿಯ-ಬಿಳಿಯ, ಸವರ್ಣೀಯ-ಅವರ್ಣೀಯ ಮನೋಭಾವದಿಂದ ಮುಕ್ತವಾಗಿಲ್ಲ. ಆದರೆ ಪ್ರವಾದಿ ಮುಹಮ್ಮದರು 6ನೇ ಶತಮಾನದಲ್ಲಿಯೇ ಈ ಪದ್ಧತಿಯ ವಿರುದ್ಧ ಸಮರ ಸಾರಿದ್ದರು. ತಮ್ಮ ಅಂತಿಮ ವಿದಾಯ ಭಾಷಣದಲ್ಲೂ ಇದನ್ನು ಸ್ಪಷ್ಟವಾಗಿ ಘೋಷಿಸಿದ್ದರು. ಮಾನವ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಘೋಷಣೆ. ಆ ಘೋಷಣೆಗೆ ಸಾಕ್ಷಿಯಾದ ಅದೇ ಅರಫಾ ಮೈದಾನದಲ್ಲಿ ಇಂದು ಮುಸ್ಲಿಮರು ಪವಿತ್ರ ಹಜ್‌ ಕರ್ಮಕ್ಕಾಗಿ ಒಂದುಗೂಡುತ್ತಾರೆ. ಮತ್ತೆ ಮತ್ತೆ ಸಮಾನತೆ, ಸಹೋದರತೆಯ ಸಂದೇಶವನ್ನು ಜಗತ್ತಿನೆಲ್ಲೆಡೆ ಸಾರುತ್ತಾರೆ.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

9 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

11 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

12 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

12 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

12 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

12 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420