ಅಂಕಣ ಬರಹ

ಸಿರಿಗೆರೆಯ ರಂಗ ಜಂಗಮ ಶ್ರೀ.ಪಂಡಿತಾಧ್ಯರು ನಿಜ ಜಂಗಮರಾದರು

ಸಿರಿಗೆರೆ ಸಾಣೆಹಳ್ಳಿ ಮಠದ ಸಿರಿಗೆರೆಯ ಪೂಜ್ಯ ಶ್ರೀ.ಪಂಡಿತಾರಾಧ್ಯ ಸ್ವಾಮೀಜಿಯವರು ಈ ಹಿಂದೆ ರಂಗಭೂಮಿ ನಾಟಕಗಳಿಗೆ, ವೈಚಾರಿಕ ಚಿಂತನೆಗಳಿಗೆ ಹೆಸರಾಗಿದ್ದವರು. ಸಿರಿಗೆರೆಯಲ್ಲಿದ್ದುಕೊಂಡೆ ಇಡೀ ನಾಡನ್ನು ಗ್ರಹಿಸಿ ಬರವಣಿಗೆಯ, ನಾಟಕದ ಮೂಲಕ ಜನ ಮಾನಸವನ್ನು ಸೂರೆಗೊಂಡಿದ್ದರು.

ಬಸವಾದಿ ಶರಣರ ವಚನಗಳನ್ನು ಓದಿದ , ಅವುಗಳನ್ನು ಅಳವಡಿಸಿಕೊಳ್ಳಲು ಯತ್ನಿಸಿದ ಯಾರೂ ಸ್ಥಾವರವಾಗಲು ಸಾಧ್ಯವೆ ಇಲ್ಲ. ಯಾರೊಳಗೆ ಬಸವಣ್ಣ ಪ್ರವೇಶ ಪಡೆಯುತ್ತಾರೋ ಅವರು ನಿತ್ಯ ನಿತ್ಯ , ಕ್ಷಣ ಕ್ಷಣ ಚಲನಶೀಲಗೊಳ್ಳಲು ತೊಡಗುತ್ತಾರೆ. ಸಿರಿಗೆಯ ಮಠ ಹಾಗೂ ಮಠದ ಭಕ್ತರೆಂದು ಅಲ್ಲಿಯೆ ಕುಳಿತುಕೊಂಡಿದ್ದರೆ ಪಂಡಿತಾರಾಧ್ಯರು ಅಲ್ಲಷ್ಟೇ ಚಲನಶೀಲವಾಗುತ್ತಿದ್ದರು. ಆದರೆ ಅವರೊಳಗೆ ಹೊಕ್ಕ ಬಸವಾದಿ ಶರಣರು ಅವರನ್ನು ಸುಮ್ಮನೆ ಕೂಡಲು ಬಿಡಲಿಲ್ಲ. ಚಲನಶೀಲವಾಗುವಂತೆ ಜ್ಯೋತಿಯ ಮುಟ್ಟಿದ ಜ್ಯೋತಿಯಾಗುವಂತೆ ಪ್ರೇರೇಪಿಸಿ ಇಡೀ ತಿಂಗಳು ಬಸವಣ್ಣನವರ ಕನ್ನಡ ನಾಡಿನಲ್ಲಿ ಸಂಚರಿಸುವ ಸಂಕಲ್ಪವನ್ನು ಮಾಡಿಸಿದವು. ಇದರ ಫಲವೇ ಮತ್ತೆ ಕಲ್ಯಾಣ.

ಬಹುತೇಕ ಮಠಾಧೀಶರಿಗೆ ಪ್ರತಿಷ್ಠೆ ಕಾಡುತ್ತಿರುತ್ತದೆ. ನಾನು ದೊಡ್ಡವನು , ಉಳಿದವರೆಲ್ಲ ಸಣ್ಣವರು ಎಂಬ ಅಹಂಕಾರ ಅವರ ತಲೆಗೆ ಏರಿರುತ್ತದೆ. ಅಹಂಕಾರದ ವಿಷ ತಲೆಗೆ ಏರಿಸಿಕೊಂಡ ಮನುಷ್ಯ ಸಹಜವಾಗಿ ಎಲ್ಲರೊಂದಿಗೆ ಬೆರೆಯುವುದು ಕಷ್ಟ. ನಮ್ಮ ನಾಯಕ ಬಸವಣ್ಣ, ನಮ್ಮ ಗುರು ಬಸವಣ್ಣ ಎಂದು ಅರಿತುಕೊಂಡವರಿಗೆ ಇದು ಕಷ್ಟವಾಗಲಾರದು. ನಮ್ಮ ಧರ್ಮ ಗುರು ಬಸವಣ್ಣ ಎಂದು ತಿಳಿದುಕೊಂಡರೆ, ಆ ಗುರುವೇ ‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’ ಎಂದು ಹೇಳಿದ ಮೇಲೆ ‘ನಾವೆಲ್ಲ ಯಾವ ಗಿಡದ ತೊಪ್ಪಲು ?’ ಎಂಬ ಸತ್ಯ ಅರ್ಥವಾಗಿ ಬಿಡುತ್ತದೆ. ‘ಬಿಡು ಬಾಹ್ಯದೊಳು ಡಂಬವ’ ಎಂಬ ನುಡಿ ಮನನವಾಗುತ್ತದೆ ಆಗ ನಡವಳಿಕೆಗಳು ಸಹಜವಾಗುತ್ತವೆ.

ನುಡಿದರೆ ಗುರುವಾಗಿ ನುಡಿಯಬೇಕು,
ನಡೆದರೆ ಪರವಾಗಿ ನಡೆಯಬೇಕು.
ಕುಳಿತರೆ ಲಿಂಗವಾಗಿ ಕುಳಿತಿರಬೇಕು,
ಇದ್ದರೆ ಜಂಗಮವಾಗಿ ಇರಬೇಕು.
ಈ ನಾಲ್ಕರ ಹೊಂದಿಗೆಯನರಿಯದವರು
ಎಷ್ಟು ದಿನವಿದ್ದರೂ ಫಲವೇನು ಹೇಳಾ,
ಬಸವಪ್ರಿಯ ಕೂಡಲ ಚೆನ್ನಬಸವಣ್ಣಾ ?

ಎಂಬ ಹಡಪದ ಅಪ್ಪಣ್ಣನವರ ಇಂಗಿತದಂತೆ ಪಂಡಿತಾರಾಧ್ಯರು ಸಿರಿಗೆರೆಯ ಮಠ ಬಿಟ್ಟು ಹೊರ ನಡೆದು ಗುರುವಾಗಿ ಬಿಟ್ಟರು. ಬಹುಶಃ ಲಿಂಗವಾಗಿ ಕುಳಿತಿದ್ದರೆ ಅವರಷ್ಟಕ್ಕೆ ಅವರೆ ಸುಖವನ್ನು ಹೊಂದಬಹುದಾಗಿತ್ತು. ಲಿಂಗಗುಣಗಳನ್ನು ಅಳವಡಿಸಿಕೊಂಡು ಜಂಗಮವಾಗಿ ರಾಜ್ಯದ ತುಂಬಾ ಸಂಚರಿಸತೊಡಗಿದ್ದಾರೆ. ಜೀವನ ಎನ್ನುವುದು ಪದೆ ಪದೆ ಘಟಿಸುವ ಮಾತಲ್ಲ. ಒಂದು ಸಲ ಬಂದು ಹೋದ ಮೇಲೆ ಇನ್ನೇನೋ ? ಯಾರೂ ಅರಿಯರು ! ಈ ಸತ್ಯವನ್ನು ಅರಿತುಕೊಂಡು ಚರ ಜಂಗಮರಾಗಿ ಹೊರಟವರು ಮಠಾಧೀಶರಿಗೆ ಮಾದರಿಯಾಗಿದ್ದಾರೆ.

ಹಾಗೆ ನೋಡಿದರೆ ಮಠೀಯ ಪರಂಪರೆಯೆ ನಮ್ಮ ಧರ್ಮದಲ್ಲಿ ಇಲ್ಲ. ಮಠಗಳೆ ಇಲ್ಲವೆಂದ ಮೇಲೆ ಪೀಠಾಧಿಪತಿಯ ಪ್ರಶ್ನೆ ಎಲ್ಲಿಂದ ಬಂತು ? ನಮ್ಮಲ್ಲಿ ಸ್ವಾಮಿ ಅಂದರೆ ಆತ ಒಬ್ಬನೆ ಒಬ್ಬ.

ಸ್ವಾಮಿ ನೀನು ಶಾಶ್ವತ ನೀನು,
ಎತ್ತಿದೆ ಬಿರಿದ ಜಗವೆಲ್ಲರಿಯಲು
ಮಹಾದೇವ ಮಹಾದೇವ, ಇಲ್ಲಿಂದ ಮುಂದೆ ಶಬ್ಧವಿಲಲ
ಜಗಕ್ಕೇಕೋದೇವ ಸ್ವರ್ಗ ಮತ್ರ್ರ್ಯ ಪಾತಾಳದೊಳಗೆ ಒಬ್ಬನೆ ದೇವ
ಕೂಡಲಸಂಗಮದೇವ.

ಮಠವೇಕೋ ಪರ್ವತವೇಕೋ
ಜನವೇಕೋ ನಿರ್ಜನವೇಕೋ
ಚಿತ್ತ ಸಮಾಧಾನವುಳ್ಳ ಶರಣಂಗೆ ?
ಮತ್ತೆ ಹೊರಗಣ ಚಿಂತೆ
ಧ್ಯಾನ ಮೌನ ಜಪತಪವೇಕೊ
ತನ್ನ ತಾನರಿದ ಶರಣಂಗೆ ಗುಹೇಶ್ವರಾ ?

ಎಂಬ ಅಂತಿಮ ಸತ್ಯವನ್ನು ಅರಿತು ನಾಡಿನ ಮಕ್ಕಳಿಗೆ ಬಸವಾದಿ ಶರಣರ ವಚನ ಸಿಂಚನ ಮಾಡಲು ಹೊರಟ ಕಾರ್ಯ ನಿಜಕ್ಕೂ ಶ್ಲಾಘನೀಯವಾದುದು. ಚಿಕ್ಕ ಚಿಕ್ಕ ಮಕ್ಕಳ ಪ್ರಶ್ನೆಗಳಿಗೆ ತನ್ನನ್ನು ತಾನು ಒಡ್ಡಿಕೊಳ್ಳುವುದು ನಿಜಕ್ಕೂ ಗಟ್ಟಿಯಾದ ಮನೋಸ್ಥೈರ್ಯ ಇರಬೇಕಾಗುತ್ತದೆ. ಯಾವುದೆ ಪ್ರಜ್ಞಾಪೂರ್ವ ಸಿದ್ದತೆಗಳಿಲ್ಲದೆ ಮಕ್ಕಳು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವವ ಸ್ಪಟಿಕದಷ್ಟು ಸ್ಪಷ್ಟವಾಗಿ ಇರಬೇಕಾಗುತ್ತದೆ. ಇಲ್ಲದೆ ಹೋದರೆ ಎಲ್ಲಿಯಾದರೂ ನಗೆಪಾಟಲಿಗೆ ಗುರಿಯಾಗುವ ಸಂದರ್ಭ ಇದಿರಾಗಬಹುದು. ಗುಡಿಗಳನ್ನು ತಿರಸ್ಕರಿಸಿ ದೇವಹವೇ ದೇವಾಲಯ ಎಂದು ಹೇಳಿದ ಬಸವಣ್ಣನವರ ಮಾತನ್ನು ನಗಣ್ಯ ಮಾಡಿ ತಾವು ದೇವರ ಗುಡಿಯ ಉದ್ಘಾಟನೆಗೆ ಯಾಕೆ ಹೋಗಿದ್ದೀರಿ ? ಎಂದು ಕೇಳಿದರೆ ಮಠಾಧೀಶರ ಜಂಘಾಬಲವೆ ಉಡುಗಿ ಹೋಗುತ್ತದೆ. ಕೋಮುವಾದದ ವಿರುದ್ಧ ಇಷ್ಟೊಂದು ಗುಡುಗುವ ನೀವು ಕೋಮುವಾದಿ ಶಕ್ತಗಳೊಂದಿಗೆ ಜೊತೆಗೂಡಿ ಅದೆಂತಹ ಸಾಮರಸ್ಯದ ನಡಿಗೆ ನಿಮ್ಮದು ? ಎಂದು ಕೇಳಿದರೆ ಕೊರಳ ಪಟ್ಟಿಯೆ ಹಿಡಿದಂತೆ ಆಗುತ್ತದೆ. ಕಾವಿ ಕಾಷಾಂಬರವ ಹೊದ್ದು ತಿರುಗುವ ಗಾವಿಲರ ಮುಖವ ನೋಡಲಾಗದು ಎಂದು ಅಮ್ಮುಗೆಯ ರಾಯಮ್ಮ ಹೇಳಿರುವಾಗ ತಾವು ಕಾವಿಯನ್ನು ಏಕೆ ಧರಿಸುತ್ತೀರಿ ? ಎಂದು ಕೇಳಿ ಮುಜುಗರವನ್ನು ಉಂಟು ಮಾಡಬಹುದಾದ ಸಾಧ್ಯತೆ ಇದೆ.

ಮಕ್ಕಳ ಪ್ರಶ್ನೆಗಳಿಗೆಲ್ಲ ಮುಕ್ತವಾದ ಉತ್ತರ ನೀಡಬೇಕಾದ ಅನಿವಾರ್ಯತೆ ಆಗ ಉಂಟಾಗುತ್ತದೆ. ಈಗಾಗಲೆ ಇಂಥ ಸವಾಲುಗಳನ್ನು ಮಕ್ಕಳಿಂದ ಪಡೆದ ಪಂಡಿತಾರಾಧ್ಯರು ಚಿನ್ನದಂತೆ ಹೊಳೆಯುತ್ತ ಹೊರಟಿದ್ದಾರೆ. ಜೊತೆಗೆ ಹನ್ನೆರಡನೆಯ ಶತಮಾನದ ವಚನಗಳು ಇಂದಿನ ಜನ ಜೀವನಕ್ಕೆ ಹೇಗೆ ಹೊಂದಿಕೆಯಾಗುತ್ತವೆ ? ವಚನಗಳನ್ನು ಓದುತ್ತ ಬದುಕಿನಲ್ಲಿ ಅವನ್ನು ಅಳವಡಿಸಿಕೊಂಡರೆ ಜೀವನ ಎಂಥ ಸುಗಮವಾಗುತ್ತದೆ ? ಎಂಬ ಚಿಂತನೆ ಹೊಳೆಯಾಗಿ ಹರಿಯುತ್ತಿದೆ.

ಕರಿಯನಿತ್ತಡೆ ಒಲ್ಲೆ,
ಸಿರಿಯನಿತ್ತಡೆ ಒಲ್ಲೆ
ಹಿರಿಪ್ಪ ರಾಜ್ಯವನಿತ್ತಡೆ ಒಲ್ಲೆ
ನಿಮ್ಮ ಶರಣರ ಸೊಳ್ನುಡಿಯ
ಒಂದರೆ ಘಳಿಗೆಯಿತ್ತಡೆ
ನಿಮ್ಮನಿತ್ತೆ ಕಾಣಾ ರಾಮನಾಥ

ಭಕ್ತಿಯೆಂಬುದ ಮಾಡಬಾರದು ಅದು ಹೋಗುತ್ತ ಕೊಯ್ಯುತ್ತದೆ. ಬರುತ್ತ ಕೊಯ್ಯುತ್ತದೆ ಎಂಬಂತೆ ಬಸವಣ್ಣನವರ ವಚನ ಭಕ್ತಿಯ ಹಿಂದೆ ಹೊರಟ ಪಂಡಿತಾರಾಧ್ಯರು ಸಹ ಇಲ್ಲಿ ಪ್ರಶ್ನೆಗೊಳಪಟ್ಟು ಚೊಕ್ಕವಾಗುತ್ತಿದ್ದಾರೆ. ಎಷ್ಟೋ ಜನ ಮಠಾಧೀಶರು ಸಾಯುವ ತನಕ ಮಠದಲ್ಲಿಯೆ ಕುಳಿತುಕೊಳೆತು ಹೋಗಿದ್ದಾರೆ. ಸಮಾಜಕ್ಕೆ ದುರ್ನಡತೆ, ದುರಾಚಾರ ಎಂಬ ಮೌಢ್ಯಗಳ ಸರಮಾಲೆಯನ್ನು ಕೊರಳಿಗೆ ಕಟ್ಟಿಸಿದ್ದಾರೆ. ಜನರನ್ನು ಪ್ರಶ್ನೆ ಮಾಡುವುದೆ ತಪ್ಪು. ಪ್ರಶ್ನೆ ಮಾಡಿದವನೆ ದೇಶ ದ್ರೋಹಿ, ಧರ್ಮ ವಿರೋಧಿ ಎಂದು ತಪ್ಪು ನಂಬಿಕೆ ಇರುವಾಗ ಇವನ್ನು ಮುರಿದಿಕ್ಕಿ ನಿಲ್ಲಲು ಸಾತ್ವಿಕವಾದ, ಗಟ್ಟಿ ಮನಸ್ಸು ಬೇಕಾಗುತ್ತದೆ.

ಅರಿವಿನ ಪಥವನರಿಯದಿರ್ದಡೆ
ಮುಂದೆ ಹೆರರಿಗೆ ದೀಕ್ಷೆಯ ಮಾಡಲೇಕೆ ?
ತೊರೆಯಲದ್ದವನ ಇಸಲರಿಯದವ
ತೆಗೆಯ ಹೋದಂತಾಯಿತ್ತನೆಂದ ನಂಬಿಗರ ಚೌಡಯ್ಯ

ಅರಿವಿನ ಮಾರ್ಗದತ್ತ ಕನ್ನಡದ ಮಕ್ಕಳನ್ನು ಕರೆದುಕೊಂಡು ಹೋಗಲು ಸನ್ನದ್ಧರಾಗಿ ಹೊರಟ ಪಂಡಿತಾರಾಧ್ಯರು ಹಾಗೂ ಸಹಮತ ವೇದಿಕೆಯ ಮುಖ್ಯರೆಲ್ಲರಿಗೂ ಗೌರವದ ಪ್ರಣಾಮಗಳು. ಮತ್ತೆ ಕಲ್ಯಾಣ ಶ್ರಾವಣ ಮಾಸಕ್ಕೆ ಸೀಮಿತವಾಗದಿರಲಿ. ಮತ್ತೆ ಕಲ್ಯಾಣ. ಮತ್ತೆ ಮತ್ತೆ ಕಲ್ಯಾಣವಾಗಲಿ. ನಿತ್ಯ ನಿತ್ಯ ಕ್ಷಣ ಕ್ಷಣವೂ ಕಲ್ಯಾಣವಾಗಲಿ. ಹೊರಗೂ ಕಲ್ಯಾಣವಾಗಲಿ, ಒಳಗೂ ಕಲ್ಯಾಣವಾಗಲಿ.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

1 hour ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

2 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

2 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

2 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

3 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

4 hours ago