ಬಿಸಿ ಬಿಸಿ ಸುದ್ದಿ

ವಚನಗಳಲ್ಲಿ ಅಡಗಿರುವ ಬೀಜಗಣಿತ

ಕನ್ನಡ ಭಾಷೆಯಲ್ಲಿ ಹೇಳಿಕೊಳ್ಳುವಂತಹ ವಿಶೇಷವೇನೂ ಇಲ್ಲ! ಕನ್ನಡ ಸಾಹಿತ್ಯದಲ್ಲಿ ವಿಜ್ಞಾನವಿದೆಯೇ? ವೈಚಾರಿಕತೆ ಅಡಗಿದೆಯೇ? ಎಂದು ಮುಂತಾಗಿ ಮೂಗು ಮುರಿಯುವ ಕಾಲವೊಂದಿತ್ತು. ಕನ್ನಡ ಕುರಿತು ಅನ್ಯ ಭಾಷಿಕರು ಕೆಲವು ಕೊಂಕು ಮಾತುಗಳನ್ನು ಸಹ ಆಡುತ್ತಿದ್ದರು. ಇಂತಹ ಅಪಾದನೆಗಳಿಗೆ ಸವಾಲು ಎಸೆಯುವವರಿಗೆ ಉತ್ತರ ಎಂಬಂತೆ ಕನ್ನಡದಲ್ಲಿ ಏನಿಲ್ಲ. ಯಾಕಿಲ್ಲ. ನಿಮಗೆ ಏನು ಬೇಕು? ಎಂದು ಅದನ್ನು ಅತ್ಯಂತ ಸಮರ್ಥವಾಗಿ ರುಜುವಾತುಪಡಿಸಿದ ವಚನ ಸಾಹಿತ್ಯ ವಿಶ್ವ ಸಾಹಿತ್ಯಕ್ಕೆ ತನ್ನದೇ ಆದ ಶ್ರೇಷ್ಠ ಕೊಡುಗೆ ನೀಡಿದೆ.

ನಾವು ಹಗಲು ರಾತ್ರಿ ದುಡಿಯುತ್ತೇವೆ. ಆದರೂ ಬದುಕಿನಲ್ಲಿ ಸುಖ, ಶಾಂತಿಯಿಲ್ಲ. ಅದಕ್ಕಾಗಿ ಮಾಡುವುದು, ನೀಡುವುದು ಮಾಡುತ್ತೇವೆ. ಆದರೆ ನೀಡಿದ ಧರ್ಮ ನಮ್ಮನ್ನು ಪ್ರಾಪಂಚಿಕ ಮೋಹ ಬಂಧನದಿಂದ ಮೇಲೆತ್ತಲಿಲ್ಲ. ಇದೆಲ್ಲ ಏಕೆ? ಹೇಗೆ? ಎಂಬುದು ಇನ್ನೂ ನಿಗೂಢವಾದ ವಿಷಯ. ಆದರೆ ಕರ್ಮಯೋಗಿಗಳಾಗಿದ್ದ ಬಸವಾದಿ ಶರಣರು ಲೋಕದ ಹಿತಕ್ಕಾಗಿ ಸಮಾಜದಲ್ಲಿ ಜಾಗೃತಿ ತುಂಬುವ ಕೆಲಸ ಮಾಡಿದರು. ಅಂತೆಯೇ ಅವರು ಸುಖದ ಜೀವನವನ್ನು ಕಂಡರು. ಸಮಾಜೋದ್ಧಾರ್ಮಿಕ ಚಿಂತಕರಾಗಿದ್ದ ಅವರು, ಆತ್ಮ ಜ್ಞಾನದ ದೀವಟಿಗೆಯನ್ನು ಉರಿಸಿದರು.

ಜನಭಾಷೆಯನ್ನು ದೇವಭಾಷೆಯನ್ನಾಗಿಸಿದ ವಚನಕಾರರು ಬದುಕಿಗೆ ಸಂಬಂಧಿಸಿದ ಎಲ್ಲ ಕ್ಷೇತ್ರಗಳ ಬಗ್ಗೆ ಮಾತನಾಡಿದ್ದಾರೆ. ಶರಣರು ಬದುಕು ಹಾಗೂ ಬದುಕಿನಾಚೆಗೂ ಇರುವ ಲೋಕಗಳ ಬಗ್ಗೆ ಮಾತನಾಡಿದ್ದಾರೆ. ಭೂತ, ಭವಿಷ್ಯದ ಬಗ್ಗೆ ಮಾತನಾಡಿದ ಅವರು ವರ್ತಮಾನಕ್ಕೆ ಬಹಳ ಹತ್ತಿರವಾಗಿದ್ದಾರೆ. ವಿಜ್ಞಾನ, ಗಣಿತದಂತಹ ಕ್ಲೀಷ್ಟ ವಿಷಯಗಳ ಕುರಿತು ಸಹ ಹೌದೌದು ಎನ್ನುವಂತೆ ಮಾತನಾಡಿದ್ದಾರೆ. ಜನರ ಕಷ್ಟ ಕಾರ್ಪಣ್ಯಗಳ ಅರಿವಿದ್ದ ಬಸವಣ್ಣನವರು ದೀನ, ದಲಿತ, ಬಡವರ ಪಾಲಿನ ಸೂರ್ಯ. ಅವರಿವರಂತೆ ಏಕಾಂತದ ಗುಹೆಗಳಲ್ಲಾಗಲಿ, ಗಿಡದ ನೆರಳಿನಲ್ಲಾಗಲಿ ತಪಗೈಯದೆ ಜನರ ನಡುವೆಯೇ ಬಾಳಿ ಬದುಕುವ ಮೂಲಕ ಲೋಕಜ್ಞಾನವನ್ನು ಪಡೆದ ಮಹಾನ್ ಜ್ಞಾನಿ. ಎಲ್ಲೋ ಕುಳಿತು ಧ್ಯಾನ, ತಪ್ಪಸ್ಸು ಮಾಡುವುದರಿಂದ ಜನರ ಸಂಕಷ್ಟಗಳಿಗೆ ಪರಿಹಾರ ದೊರೆಯುವುದಿಲ್ಲ. ಜೀವನ ಒಂದು ರಣರಂಗ. ಅದನ್ನು ಜೀವಿಸುವ ಮೂಲಕ ಗೆಲ್ಲಬೇಕು ಎಂಬ ಗಟ್ಟಿಯಾದ ನಿಲುವು ಬಸವಣ್ಣನವರದಾಗಿತ್ತು.

ನಾವು ಮಾಡುವ ಕಾಯಕ ಸತ್ಯಶುದ್ಧವಾಗಿರಬೇಕು. ಸತ್ಯಶುದ್ಧ ಕಾಯಕದಿಂದ ಮಾತ್ರ ದೇವರ ಒಲವು ಕಟ್ಟಿಟ್ಟ ಬುತ್ತಿ ಎಂಬದನ್ನು ಅರಿತಿದ್ದ ಅವರು, ನಾವು ಯಾವ ಕಾರ್ಯವನ್ನು ಮಾಡಿದರೂ ಒಮ್ಮನಸ್ಸಿನಿಂದ ಮಾಡಬೇಕು. ನಾವು ಮಾಡುವ ಕಾಯಕದಲ್ಲಿ ಒಂದುವೇಳೆ ಮನಸ್ಸು ಚಂಚಲತೆಗೆ ಒಳಗಾದರೆ ಆ ಕಾಯಕ ಫಲ ನೀಡುವುದಿಲ್ಲ. “ಮನಸ್ಸಿದ್ದಲ್ಲಿ ಮಾರ್ಗ ಉಂಟು” ಎಂಬುದನ್ನು ಅವರು ಅರಿತಿದ್ದರು. ಬಿಜ್ಜಳನ ಆಸ್ಥಾನದಲ್ಲಿ ಅರ್ಥ ಮಂತ್ರಿಯಾಗಿದ್ದ ಅವರು ಸೂಕ್ಷ್ಮ ಸಂವೇದನಾಶೀಲರಾಗಿದ್ದರು.

ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ
ಮಾಡುವ ನೀಡುವ ನಿಜಗುಣವುಳ್ಳೊಡೆ
ಕೂಡಿಕೊಂಬ ನಮ್ಮ ಕೂಡಲಸಂಗಮದೇವ

ನಾವು ಮಾಡುವ, ನೀಡುವ ಕೆಲಸ ಮನಸ್ಸಿನಿಂದ ನಿಜೈಕ್ಯವಾಗಿರಬೇಕು. ಅಂದಾಗ ಮಾತ್ರ ಕೂಡಲಸಂಗಮನ ಸನ್ನಿಧಾನ ಸಾಧ್ಯ ಎಂದು ಮೇಲ್ನೋಟಕ್ಕೆ ತಿಳಿಸುವಂತಿರುವ ಈ ವಚನದಲ್ಲಿ ಸಂಕಲನ, ವ್ಯವಕಲನದಂತಹ ಗಣಿತ ಭಾಷೆ ಅಡಗಿದೆ ಎಂದು ಹೇಳಿದರೆ ಥಟ್ಟನೆ ನಮಗೆ ಹೊಳೆಯವುದೇ ಇಲ್ಲ. ಯಾರೂ ಇದನ್ನು ಒಪ್ಪುವುದಿಲ್ಲ ಕೂಡ. ಆದರೆ ಸೂಕ್ಷ್ಮವಾಗಿ ಗ್ರಹಿಸಿದರೆ ಇದರಲ್ಲಿನ ಗಣಿತ ಭಾಷೆ ಅರ್ಥವಾಗಬಲ್ಲುದು.

ಮಾಡಿ+ ಮಾಡಿ-ಮನವಿಲ್ಲದೆ= ಕೆಟ್ಟರು
ನೀಡಿ+ ನೀಡಿ-ನಿಜವಿಲ್ಲದೆ= ಕೆಟ್ಟರು
ಮಾಡುವ+ನೀಡುವ+ನಿಜಗುಣವುಳ್ಳೊಡೆ= ಕೂಡಿಕೊಂಬ ಕೂಡಲಸಂಗಮದೇವ

ಕೂಡಿಸುವ, ಕಳೆಯುವ ಲೆಕ್ಕದ ಜೊತೆಗೆ ಕೂಡಲಸಂಗಮದೇವ ಯಾರಿಗೆ ಒಲಿಯುತ್ತಾನೆ? ಎಂಥವರನ್ನು ಆತ ಕೂಡುತ್ತಾನೆ ಎಂದು ಹೇಳುತ್ತಾರೆ. ಅದಕ್ಕಾಗಿ ನಾವು ನಿರ್ಮಲ ಮನಸ್ಸಿನಿಂದ ಮಾಡುವುದನ್ನು, ನೀಡುವುದನ್ನು ಕೈಗೊಳ್ಳಬೇಕು ಎಂದು ಹೇಳುತ್ತಾರೆ. ಬಸವಣ್ಣನವರ ಈ ವಚನ ಅವರಲ್ಲಿನ ಒಬ್ಬ ಗಣಿತಜ್ಞನನ್ನು ನಮಗೆ ಪರಿಚಯ ಮಾಡಿಸುತ್ತದೆ. ಕೂಡಿಸುವುದು, ಕಳೆಯುವುದು ಒತ್ತಟ್ಟಿಗಿರಲಿ ಗಣಿತ ಎಂಬುದು ಏನೆಂಬುದೇ ನಮಗೆ ಗೊತ್ತಾಗದೆ ಇರುವ ಕಾಲದಲ್ಲಿ ಬೀಜಗಣಿತದ ಅಂಶಗಳನ್ನು ಸೇರಿಸಿ ವಚನ ರಚನೆ ಮಾಡಿರುವುದು ಬಸವಣ್ಣನವರ ವಿಶೇಷ ಎಂದು ಹೇಳಬಹುದು.

ಕೂಡಿಸಿ, ಕಳೆದಾಗ ಬರುವ ಉತ್ತರವೇ ನಾವು ಜೀವನದಲ್ಲಿ ಪಡೆದುಕೊಳ್ಳುವ ಉತ್ತರ ಎಂಬುದನ್ನು ಅತ್ಯಂತ ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದ್ದಾರೆ. ಮಾಡಿದೆನೆಂಬುದು, ನೀಡಿದೆನೆಂಬುದು ಮನದಲ್ಲಿ ಹೊಳೆದರೆ ಅಂಥವರ ಬಳಿ ಕೂಡಲಸಂಗಮದೇವ ನೆಲೆ ನಿಲ್ಲಲು ಸಾಧ್ಯವಿಲ್ಲ ಎಂದು ಹೇಳಿದ ಬಸವಣ್ಣನವರು ಅಂಥವರನ್ನು ಶಿವನ ಡಂಗುರ ಏಡಿಸಿ ಕಾಡುತ್ತದೆ ಎಂಬ ಎಚ್ಚರಿಕೆಯನ್ನು ಸಹ ನೀಡಿದ್ದಾರೆ. ದೇವರು ಅನ್ನ, ವಸ್ತ್ರ, ಒಡವೆ, ವೈಭವ ಏನೆಲ್ಲ ಕೊಟ್ಟರೆ ಮಾತ್ರ ನಾವು ಸಂತುಷ್ಟರಾಗಿರುತ್ತೇವೆ. ಆದರೆ ಕೊಡದಿದ್ದರೆ ದುಃಖಿತರಾಗುತ್ತೇವೆ. ಆದರೆ ನಾವು ಮಾಡುವ, ನೀಡುವ ಕಾಯಕದಲ್ಲಿ ತಪ್ಪಿದ್ದೆಲ್ಲಿ ಎಂಬುದನ್ನು ಯೋಚಿಸುವುದೇ ಇಲ್ಲ.

emedialine

Recent Posts

ಕಾಳಗಿ; ರಟಕಲ್ ಗ್ರಾಮದಲ್ಲಿ ವಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

24 mins ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

1 hour ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

4 hours ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

6 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

19 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

19 hours ago