ನವ್ಯದ ಕಾಲಘಟ್ಟದಲ್ಲೇ ಬರವಣಿಗೆ ಆರಂಭಿಸಿದರೂ ಸಹ ಚಂಪಾರ ಜಾಡು ಬೇರೆಯಾದಂತೆ ಕಾಣುತ್ತದೆ. ಅವರ ಕೊಡೆಗಳು ಹೊರತುಪಡಿಸಿ ಉಳಿದವು ನವ್ಯದ ಆಚೆ ಚಾಚಿಕೊಂಡಂತವು.
‘ ನಿನ್ನ ಹೊಗಳಿಕೆ ಬೇಡ
ನಿನ್ನ ತೆಗಳಿಕೆಯೂ ಬೇಡ
ನಿನ್ನದೆಂಬುದು ನನಗೆ ಯಾವುದೂ ಬೇಡ ‘
– ಎಂದು ಚಂಪಾ ಹೇಳಿದಾಗ ಅವರಿಗಿನ್ನೂ ವಯಸ್ಸು ಇಪ್ಪತ್ತರ ಆಸುಪಾಸಷ್ಟೆ.ಕನ್ನಡದ ಆದಿ ಕವಿ ಪಂಪ, ಅಂತ್ಯಕವಿ ಚಂಪಾ ಎಂದವರು -ಬಹುಷ ಕಿಡಿಗೇಡಿತನದಿಂದ -ಘೋಷಿಸಿಕೊಂಡರೂ ಅದು ಅವರಿಗೇನು ಸಮಸ್ಯೆಯಾಗಲಿಲ್ಲ. ಚಂಪಾ ಇತರ ನವ್ಯದವರಂತೆ ವಿದೇಶಿ ಲೇಖಕರ ವಿಪರೀತ ಪ್ರಭಾವಕ್ಕೆ ಸಿಲುಕಿದವರಲ್ಲ. ಬಂಡಾಯದ ಜೊತೆಗೆ ಸೃಜನಶೀಲತೆಯೂ ಮುಖ್ಯ ಅಂದರು. ಚಂಪಾ ಬರವಣಿಗೆಯ ಜವಾರಿತನ ಇಂಗ್ಲೀಷ್ ಗೆ ಸುಲಭವಾಗಿ ದಾಟಲಾಗಲಿಲ್ಲ ಅನಿಸುತ್ತದೆ. ಅವರು ನಿರಂತರವಾಗಿ ಬರೆದರೆಂಬುದೇ ಮೆಚ್ಚಬೇಕಾದ ವಿಷಯ. ಸಂಕ್ರಮಣದ ಮೂಲಕ ನೂರಾರು ಬರಹಗಾರರನ್ನು ರೂಪಿಸಿದರು.
‘ ನಿನ್ನ ಪಾದದ ಧೂಳು ನನ್ನ ಮೇಲಿರಲಿ,
ಕಣ್ಣೊಳಗೆ ಮಾತ್ರ ಅದು ಬೀಳದಿರಲಿ ‘-ಎಂಬ ಚಂಪಾರ ಮಾತಿನ ತಿವಿತ ವೈಚಾರಿಕತೆ – ಸೃಜನಶೀಲತೆಗಳೆರಡರ ಸೊಗಸಾದ ಬ್ಲೆಂಡ್.
‘ ಧಾರವಾಡ ಯೂನಿವರ್ಸಿಟಿ ,
ಧಾರವಾಡ ಐನೋರ್ ಸಿಟಿ ‘
ಎನ್ನುವ ಮಾತು ಇನ್ನೂ ಮಜವಾದ್ದು. ತುರ್ತು ಪರಿಸ್ಥಿತಿ ಹೇರಿಕೆ ವಿರೋಧಿಸಿ ಚಂಪಾ ಜೈಲಿಗೆ ಹೋದರು. ಆ ರಿಸ್ಕನ್ನು ಅವರ ಸಮಕಾಲೀನ ಸಮಾಜವಾದಿ ಬರಹಗಾರರು ತೆಗೆದುಕೊಂಡದ್ದು ಕಡಿಮೆ. ಕನ್ನಡ ಚಳವಳಿಯು ಚಂಪಾ ಬರುವವರಿಗೂ ತನ್ನ ಹುಡುಗುತನದಿಂದ ಹೊರಬಂದಿರಲಿಲ್ಲ. ಚಂಪಾ ಕನ್ನಡಪರ ಹೋರಾಟಕ್ಕೆ ಒಂದು ಜನಪರ ಹಾಗೂ ಸೈದ್ಧಾಂತಿಕ. ಚೌಕಟ್ಟು ಒದಗಿಸಲು ಶ್ರಮಿಸಿದರು. ಕರ್ನಾಟಕದ. ಜನಪರ ಹೋರಾಟಗಾರರು 80ರ ದಶಕದಲ್ಲಿ ಆರಿಸಿಕೊಂಡ ಜನಜಾಗೃತಿಗಾಗಿನ ಬೀದಿ ನಾಟಕಗಳಲ್ಲೂ ಚಂಪಾರ ಬರಹಗಳಿವೆ.
ಚಂಪಾರ ಬರಹ ಮತ್ತು ವೃಕ್ತಿತ್ವದಲ್ಲಿ ವಿಡಂಬನೆ ಎದ್ದು ಕಾಣುತ್ತಿತ್ತು. ವೈಯಕ್ತಿಕ ವಿಡಂಬನೆ,ಧಾರ್ಮಿಕ ವಿಡಂಬನೆ ಸಾಮಾಜಿಕ ವಿಡಂಬನೆ……ಹೀಗೆ ಅವರ ಮಾತೂ-ಬರಹದ ಚಾಟಿಯೇಟು ಸದಾ ಅವರ ವ್ಯಾಪ್ತೀ ಪ್ರದೇಶದ ಒಳಗಿರುತ್ತಿತ್ತು. ಒಮ್ಮೆ ಚಂಪಾ ರಷ್ಯಾಗೆ ಹೋಗಿ ಬಂದರೆಂದು ಸುದ್ದಿ ಹಬ್ಬಿದ ಕಾರಣ ಗೆಳೆಯರೊಂದು ಗೋಷ್ಟಿ ಏರ್ಪಾಡು ಮಾಡಿ ಚಂಪಾರ ಪ್ರವಾಸದ ಅನುಭವ ಕೇಳಲು ಸೇರಿದರು.ಅವರಿಗೆ ಕಮ್ಯೂನಿಷ್ಟ್ ರಶ್ಯಾ ಬಗ್ಗೆ ಚಂಪಾ ಬಾಯಲ್ಲಿ ಮೆಚ್ಚಿಗೆಯ ಮಾತು ಕೇಳುವ ಆತುರ.
( ಅಶೋಕ್ ಶೆಟ್ಟರ್ ಸರ್ ರವರು ತಿಳಿಸಿರುವ ಪ್ರಕಾರ ಚಂಪಾ ರಶ್ಯಾಗೆ ಹೋಗಿರಲಿಲ್ಲ..ಹಾಗಾಗಿ ಈ ಘಟನೆಯೊಂದು ಕವಿಸಮಯವಿದ್ದಿರಲಿಕ್ಕೂ ಸಾಕು )
…ಅದೆಲ್ಲ ಯಾವ ಸ್ಕೀನೂ ಅಲ್ಲ ವಿಸ್ಕಿ..ವಿಸ್ಕೀನ್ರೆಪಾ ನಾ ಹೇಳಾಕೊಂಟಿದ್ದು ‘ ಅಂದು ಎಲ್ಲರನ್ನೂ ಬೇಸ್ತು ಬೀಳಿಸಿದ್ದರಂತೆ. ಚಂಪಾರ ನಾಟಕಗಳಲ್ಲಿ ಗೋಕರ್ಣದ ಗೌಡಶಾನಿ ಅದರ ವಾಚ್ಯತೆಯಿಂದಾಗಿ ಮತ್ತು ಎ ಸರ್ಟಿಫಿಕೇಟ್ ನಿರೂಪಣಿಗಾಗಿ ನನಗಿಷ್ಟವಾಗಲಿಲ್ಲ . ಆದರೆ ಕೊಡೆಗಳು ಅದರ ಎರಡೇ ಪಾತ್ರಗಳಿಗಾಗಿ ಗಮನ ಸೆಳೆಯುತ್ತದೆ. ಸ್ಯಾಮುಯೆಲ್ ಬೆಕೆಟ್ ನ ‘ವೈಯ್ಟಿಂಗ್ ಫಾರ್ ಗೋಡೊ ‘. ತರ.
Two is company
Three is crowd
ಎಂಬಂತೆ ಕೆಲವೊಮ್ಮೆ ಚಂಪಾರ ಬರಹಗಳು ಅವರ ಬಳಗವನ್ನು ಹಿರಿದು-ಕಿರಿದಾಗಿಸುತ್ತಿದ್ದವು. ಚಂಪಾರಿಗೆ 70 ವರ್ಷ ತುಂಬುವಾಗ ಬಹುಷ 2009 ರ ಜೂನ್ ನಲ್ಲಿ , ಗೌರಿ ಲಂಕೇಶ್ ಪತ್ರಿಕೆಯಲ್ಲಿ ನಾವೊಂದು ವಿಶೇಷ ಸಂಚಿಕೆ ರೂಪಿಸಿ ಗೌರವಿಸಿದ್ದೆವು. ಕಳೆದ ದಶಕದಲ್ಲೊಮ್ಮೆ ಸಿಪಿಐ ಅಥವಾ ಸಿಪಿಎಂನವರಿರಬೇಕು ಕಾಶ್ಮೀರದ ವಿಷಯ ಕುರಿತು ಭಾಷಣಕ್ಕೆ ನನ್ನನ್ನು ಕರೆದಿದ್ದರು.
ಕಳೆದ 200 ವರ್ಷಗಳಲ್ಲಿ ರಾಷ್ಟ್ರೀಯತೆಯ (Nationality Question )ವಿಚಾರ ವಿಶ್ವಾದ್ಯಂತ ಯಾವಯಾವ ರೂಪ ತಾಳಿದೆ ಎಂದು ನಾನು ವಿವರಿಸಿ ಹೇಳುತ್ತಾ ಅದೇ ನೆಲೆಯಲ್ಲಿ ಕಾಶ್ಮೀರದ ಜನರ ಹೋರಾಟವನ್ನು ಗ್ರಹಿಸಬೇಕು ಅಂದೆ. ಲೆಫ್ಟಿಸ್ಟರು ಅದು ದೇಶದ್ರೋಹವೆಂದು ಭಾವಿಸಿ, ವಿಪರೀತ ಸಿಟ್ಟಿಗೆದ್ದು ನನ್ನ ಮೇಲೆ ಅಲ್ಲೇ ಜಗಳಕ್ಕಿಳಿದರು.
ನಾನು ಜಗ್ಗಲಿಲ್ಲ, ಕೊನೆಗೆ ಅವತ್ತು ಅಧ್ಯಕ್ಷತೆ ವಹಿಸಿದ್ದ ಚಂಪಾ ನನ್ನ ಕೈ ಬಿಡದೆ ಸಭಿಕರನ್ನು ಸಮಾಧಾನಪಡಿಸಿದರು. ಶಿಮೊಗ್ಗೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಕಲ್ಕುಳಿ ವಿಠಲ್ ಹೆಗ್ಡೆ ಮತ್ತು ಗೌರಿಗಿದ್ದ ಭಾಷಣದ ಆಹ್ವಾನವನ್ನು ಭಜರಂಗಿ ಗುಂಪು ವಿರೋಧಿಸಿದಾಗಲೂ ಚಂಪಾ ಎದುರಿಸಿ ನಿಂತರು. ಅದು ಅವರಿಗಿದ್ದ ಗಟ್ಟಿತನ. ಬಂದೂಕುಧಾರಿ ಅಂಗರಕ್ಷಕರ ಜೊತೆ ಚಂಪಾ ಬದುಕಿದರೆಂಬುದು ನನಗವರ ಬಗ್ಗೆ ಹೆಮ್ಮೆ ಎನಿಸುತ್ತಿದೆ. ಏಕೆಂದರೆ ಜೀವ ಬೆದರಿಕೆ ಇದ್ದಾಗಲೂ, ಸಹಚರರು ಕೆಲವರೂ ಗುಂಡೇಟು ಬಿದ್ಧು ಸಾವಿಗೀಡಾದರೂ ಸಹ ಚಂಪಾ ತಮ್ಮ ವೈಚಾರಿಕ ನಿಲುವುಗಳಿಂದ ಹಿಂದೆ ಸರಿಯಲಿಲ್ಲ.
ಲಿಂಗಾಯತ ಧರ್ಮವು ಅವೈದಿಕವೆಂದು ಸಮರ್ಥವಾಗಿ ತಿಳಿಹೇಳಬಲ್ಲ ಶಕ್ತಿ ಚಂಪಾರಿಗಿತ್ತು. ಅವರನ್ನೊಮ್ಮೆ ಕಂಡು ಬರುವ ಅಪೇಕ್ಷೆಯು ನಮ್ಮ ಮಿತ್ರ ಬಳಗದಲ್ಲಿತ್ತು. ಕೋವಿಡ್ ಆತಂಕದಿಂದ ಅವರ ಕುಟುಂಬದವರು ಒಪ್ಪಿರಲಿಲ್ಲ. ಅವರೊಂದು ರೋಚಕ ಯುಗದಲ್ಲಿ ಸಾಗಿ ಬಂದರು. ತಮ್ಮದೇ ಚಾಪು ಮೂಡಿಸದೆ ಬಿಡಲಿಲ್ಲ.
ಚಂಪಾರವರಿಗೆ ಗೌರವದ, ಪ್ರೀತಿಯ ವಿದಾಯ.
ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…
ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…
ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…
ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…
ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…