ಕಲಬುರಗಿ: ಬ್ರಿಟೀಷರ ಆಡಳಿತದಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಏಕೀಕರಣ ಮಾಡುವಲ್ಲಿ ನಮ್ಮ ಪೂರ್ವಜರು ತೋರಿದ ಒಗ್ಗಟ್ಟಿನ ಮಾದರಿಯಲ್ಲಿಯೇ ನಾಡಿನ ಪ್ರಗತಿ ಮತ್ತು ಸಮೃದ್ಧಿಗೆ ನಾವೆಲ್ಲರೂ ಕೈಜೋಡಿಸುವ ಅವಶ್ಯಕತೆವಿದೆ ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅಭಿಪ್ರಾಯಪಟ್ಟರು.
ನಾಡಿನ ಏಕೀಕರಣಕ್ಕೆ ಲಕ್ಷಾಂತರ ಕನ್ನಡಿಗರು ಹೋರಾಡಿದ್ದಾರೆ. ಕರ್ನಾಟಕ ಏಕೀಕರಣದ ಕನಸನ್ನು ಕಂಡಿದ್ದ ಡೆಪ್ಯೂಟಿ ಚೆನ್ನಬಸಪ್ಪ ಅವರು 1856ರಲ್ಲಿ ಬಿತ್ತಿದ ಚಳವಳಿಯ ಬೀಜ ಹೆಮ್ಮರವಾಗಿ ಬೆಳೆದು ಒಂದು ನೂರು ವರ್ಷಗಳ ನಂತರ ಅಂದರೆ ನವೆಂಬರ್ 1, 1956 ರಂದು ಏಕೀಕೃತ “ಮೈಸೂರು” ರಾಜ್ಯ ಉದಯವಾಯಿತು. ಮುಂದೆ 1973ರಲ್ಲಿ ಅಂದಿನ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸರು ಮೈಸೂರು ರಾಜ್ಯಕ್ಕೆ ವಿಶಾಲಾರ್ಥದಲ್ಲಿ ‘ಕರ್ನಾಟಕ’ ಎಂದು ಮರುನಾಮಕರಣ ಮಾಡಿದರು ಎಂದರು.
ಮಂಗಳವಾರ ಕಲಬುರಗಿ ನಗರದ ಗಂಜ್ ಪ್ರದೇಶದಲ್ಲಿ ಶ್ರೀ ನಗರೇಶ್ವರ ಪ್ರೌಢ ಶಾಲೆ ಆವರಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ 67ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ರಾಷ್ಟ್ರಧ್ವಜರೋಹಣ ನೆರವೇರಿಸಿದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕನ್ನಡ ನಾಡಿನ ಏಕೀಕರಣಕ್ಕಾಗಿ ಹೋರಾಡಿದ ಆಚಾರ್ಯ ಬಿ.ಎಂ. ಶ್ರೀಕಂಠಯ್ಯ, ಅ.ನ.ಕೃಷ್ಣರಾಯರು, ಆಲೂರು ವೆಂಕಟರಾಯರು, ಪಂಜೆ ಮಂಗೇಶರಾಯರು, ಹುಯಿಲಗೋಳ ನಾರಾಯಣರಾವ್, ಕಾರ್ನಾಡ್ ಸದಾಶಿವರಾಯರು, ಮುದವಿಡು ಕೃಷ್ಣರಾಯರು, ಮಂಗಳವೇಡೆ ಶ್ರೀನಿವಾಸರಾಯರು, ಎಸ್. ನಿಜಲಿಂಗಪ್ಪ, ಉತ್ತಂಗಿ ಚನ್ನಪ್ಪನವರು, ಕೆ.ಎಫ್. ಪಾಟೀಲ, ಗೋರೂರು ರಾಮಸ್ವಾಮಿ ಅಯ್ಯಂಗಾರ, ಹಾರನಹಳ್ಳಿ ರಾಮಸ್ವಾಮಿ, ಕಡಿದಾಳ್ ಮಂಜಪ್ಪ, ಕೆಂಗಲ್ ಹನುಮಂತಯ್ಯ, ಕುವೆಂಪು, ಕಾರಂತರು, ಎಚ್.ಎಸ್. ದೊರೆಸ್ವಾಮಿ, ಬಳ್ಳಾರಿ ಸಿದ್ದಮ್ಮ, ಪಾಟೀಲ ಪುಟ್ಟಪ್ಪ, ಡಾ.ರಾಜಕುಮಾರ್ ಮೊದಲಾದ ಮಹಾನ್ ವ್ಯಕ್ತಿಗಳನ್ನು ಸ್ಮರಿಸಿದ ಅವರು, ಈ ಮಹಾನ್ ಹೋರಾಟಗಾರರ ಹಾದಿಯಲ್ಲಿ ನಾಡು-ನುಡಿ, ನೆಲ-ಜಲ ರಕ್ಷಣೆಗೆ ಪ್ರತೊಯೊಬ್ಬ ಕನ್ನಡಿಗ ಮುಂದಾಗಬೇಕು ಎಂದು ಕರೆ ನೀಡಿದರು.
ಕನ್ನಡಕ್ಕೆ ಮೊದಲ ಗ್ರಂಥ ನೀಡಿದ್ದು ಕಲಬುರಗಿ ಜಿಲ್ಲೆ ಎಂಬುದು ಹೆಮ್ಮೆಯ ವಿಷಯ. ಕವಿ ಅಮೋಘವರ್ಷ ನೃಪತುಂಗನು “ಕವಿರಾಜ ಮಾರ್ಗ” ಕೃತಿಯಲ್ಲಿ “ಕಾವೇರಿಯಿಂದ ಗೋದಾವರಿವರೆಗೆ” ಕನ್ನಡ ನಾಡಿನ ವೈಭವವನ್ನು ವರ್ಣಿಸಿದ್ದಾರೆ. ಕಲ್ಯಾಣದ ಹೆಬ್ಬಾಗಿಲೆಂದು ಕರೆಸಿಕೊಳ್ಳುವ ಕಲಬುರಗಿ ಜಿಲ್ಲೆ ವಚನ, ದಾಸ, ಜನಪದ ಮತ್ತು ತ್ವಪದ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯ. ಸೂಫಿ-ಸಂತರ ಸಾಹಿತ್ಯಗಳ ಸಮನ್ವಯದ ಸಂಪದ್ಭರಿತ ತವರೂರು ಇದಾಗಿದೆ. ಬಹುಧರ್ಮ, ಬಹುಭಾಷೆಗಳ ಭಾವೈಕ್ಯದ ಬೀಡು ಕಲಬುರಗಿ ಹಲವು ಸಂಸ್ಕøತಿ-ಉಪ ಸಂಸ್ಕøತಿಯ ಸಮನ್ವಯದ ನೆಲವೂ ಎಂದರೆ ತಪ್ಪಾಗಲಾರದು ಎಂದು ಇಲ್ಲಿನ ಸಿರಿವಂತ ಸಂಸ್ಕøತಿಯನ್ನು ಕೊಂಡಾಡಿದರು.
ಕಲಬುರಗಿ ಜಿಲ್ಲೆಯಲ್ಲಿ ಮೆಗಾ ಟೆಕ್ಟೈಲ್ಸ್ ಪಾರ್ಕ್ ಸ್ಥಾಪನೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಜಿಲ್ಲೆಗೆ ಮಂಜೂರಾಗುವ ಸಂಪೂರ್ಣ ಆಶಾಭಾವನೆ ಹೊಂದಿದ್ದೇವೆ. ಇದರಿಂದ ಸಾವಿರಾರು ಸಂಖ್ಯೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಲಭಿಸಲಿದೆ. ಕಲಬುರಗಿಯ ಐತಿಹಾಸಿಕ ಕೋಟೆಯನ್ನು ಭಾರತೀಯ ಪುರಾತತ್ವ ಇಲಾಖೆಯ ಸಹಯೋಗದೊಂದಿಗೆ ಅಭಿವೃದ್ಧಿಗೆ ಕೆ.ಕೆ.ಆರ್.ಡಿ.ಬಿ. ಮಂಡಳಿ ಅನುದಾನ ನೀಡಲು ಮುಂದೆ ಬಂದಿದೆ. ಅಫಜಲಪೂರ ತಾಲೂಕಿನ ನೀಲೂರು ಗ್ರಾಮದ ಶ್ರೀ ಶಿವಶರಣೆ ನೀಲೂರು ನಿಂಬೆಕ್ಕರವರ ಜನ್ಮ ಸ್ಥಳವನ್ನು 1 ಕೋಟಿ ರೂ.ಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಉದ್ಯೋಗಸ್ಥ ಮಹಿಳೆಯರಿಗೆ ಕಲಬುರಗಿ ನಗರದಲ್ಲಿ 2 ವಸತಿ ನಿಲಯ ಪ್ರಾರಂಭಿಸಲಾಗಿದೆ. ಜಿಲ್ಲೆಯ 3,140 ಅಂಗನವಾಡಿಗಳಲ್ಲಿ 6 ತಿಂಗಳಿನಿಂದ 6 ವರ್ಷದ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಮತ್ತು ಕಿಶೋರಿಯರು ಹೀಗೆ ಒಟ್ಟು 2,99,129 ಫಲಾನುಭವಿಗಳಿಗೆ ಪ್ರಸಕ್ತ 2022-23ನೇ ಸಾಲಿನಲ್ಲಿ ಪೂರಕ ಪೌಷ್ಠಿಕ ಆಹಾರ ಒದಗಿಸಲು 3,070 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಜಿಲ್ಲೆಗೆ ಕಳೆದ 2 ವರ್ಷದ ಅವಧಿಯಲ್ಲಿ 203 ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ದೊರಕಿದೆ. ಇದಕ್ಕಾಗಿ 2,409 ಲಕ್ಷ ರೂ. ಅನುದಾನ ಬಿಡುಗಡೆಯಾಗಿ, ಕಟ್ಟಡಗಳು ಪ್ರಗತಿಯಲ್ಲಿವೆ ಎಂದು ಡಿ.ಸಿ. ಯಶವಂತ ವಿ. ಗುರುಕರ್ ತಿಳಿಸಿದರು.
ಆಯುಷ್ಮಾನ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ ಸೆಪ್ಟೆಂಬರ್-2022 ಅಂತ್ಯಕ್ಕೆ 1,71,581 ಫಲಾನುಭವಿಗಳ ಆರೋಗ್ಯ ವೆಚ್ಚವಾಗಿ ರಾಜ್ಯ ಸರ್ಕಾರ 199 ಕೋಟಿ ರೂ. ಖರ್ಚು ಮಾಡಿದೆ.
ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ಜಿಲ್ಲೆಯ 48,525 ವಿದ್ಯಾರ್ಥಿಗಳಿಗೆ 21 ಕೋಟಿ ರೂ. ವಿದ್ಯಾರ್ಥಿ ವೇತನ ನೀಡಲಾಗಿದೆ. ಅದೇ ರೀತಿ ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆಯಡಿ 2019-20ನೇ ಸಾಲಿನಿಂದ ಇಲ್ಲಿಯವರೆಗೆ 2.71 ಲಕ್ಷ ರೈತರಿಗೆ 776 ಕೋಟಿ ರೂ. ಆರ್ಥಿಕ ನೆರವು ಕಲ್ಪಿಸಿದೆ. ಪ್ರಸಕ್ತ 2022-23 ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ 1.70 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಇದೂವರೆಗೆ ಜಿಲ್ಲೆಯ 2,48,624 ರೈತರಿಗೆ 224.80 ಕೋಟಿ ರೂ. ದಾಖಲೆಯ ಪರಿಹಾರ ತ್ವರಿತವಾಗಿ ನೀಡಲಾಗಿದೆ. ಜಾನುವಾರುಗಳಲ್ಲಿ ಇತ್ತೀಚೆಗೆ ಚರ್ಮಗಂಟು ರೋಗ ಪತ್ತೆಯಾದ ಹಿನ್ನೆಲೆಯಲ್ಲಿ ರೋಗ ನಿಯಂತ್ರಣಕ್ಕೆ ಲಸಿಕೆ ನೀಡುವ ಕಾರ್ಯ ನಡೆಯುತ್ತಿದೆ. ಜಿಲ್ಲೆಯಲ್ಲಿ 4.40 ಲಕ್ಷ ಜಾನುವಾರುಗಳಿದ್ದು, ಇದೂವರೆಗೆ 74,738 ಡೋಸ್ ಲಸಿಕೆ ನೀಡಲಾಗಿದೆ ಎಂದರು.
ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕಾರ್ಖಾನೆ ಮತ್ತು ರೈತರ ನಡುವೆ ಕಬ್ಬು ಕಟಾವು, ದರ, ಪಾವತಿ ಹೀಗೆ ಎಲ್ಲದರ ಕುರಿತು ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳುವ ನೂತನ ವಿಧಾನ ಜಿಲ್ಲೆಯಲ್ಲಿ ಜಾರಿಗೆ ತಂದಿದ್ದು, ಕಬ್ಬು ಬೆಳೆಯುವ ರೈತರಿಗೆ ವರದಾನವಾಗಲಿದೆ. ರೈತರು ಒಪ್ಪಂದಕ್ಕೆ ಸಹಿ ಹಾಕಬೇಕು. ಇದಲ್ಲದೆ “ಕಬ್ಬು ಮಿತ್ರ” ಎಂಬ ಮೊಬೈಲ್ ತಂತ್ರಾಂಶ ಜಾರಿಗೆ ತರಲಾಗಿದೆ ಎಂದರು.
ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗಕ್ಕೆ 5,000 ಶಿಕ್ಷಕರ ನೇಮಕಾತಿಗೆ ಸರ್ಕಾರ ಚಾಲನೆ ನೀಡಿದೆ. “ವಿವೇಕ” ಯೋಜನೆಯಡಿ ಕಲಬುರಗಿ ಸೇರಿದಂತೆ ಪ್ರದೇಶದಲ್ಲಿ 2,000 ಶಾಲಾ ಕೊಠಡಿ ನಿರ್ಮಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾರಿಗೆ ವ್ಯವಸ್ಥೆ ಮತ್ತಷ್ಟು ಉತ್ತಮಗೊಳಿಸಲು 316 ಬಸ್ ಖರೀದಿಗೆ ಸಾರಿಗೆ ಇಲಾಖೆಯಿಂದ ಕೆ.ಕೆ.ಆರ್.ಟಿ.ಸಿ. ಸಂಸ್ಥೆಗೆ 84 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಜಿಲ್ಲೆಯ ಅಭಿವೃದ್ಧಿ ಕಾರ್ಯಗಳನ್ನು ಬಿಚ್ಚಿಟ್ಟರು.
ಜಿಲ್ಲೆಯ ಸೇಡಂ ತಾಲೂಕಿನ 1,920 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ 68.70 ಕೋಟಿ ರೂ. ವೆಚ್ಚದ ಯಡ್ಡಳ್ಳಿ ಏತ ನೀರಾವರಿ ಯೋಜನೆ ಮತ್ತು 2,185 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ 84 ಕೋಟಿ ರೂ. ವೆಚ್ಚದ ತೆರನಳ್ಳಿ ಏತ ನೀರಾವರಿ ಯೋಜನೆಗೆ ಈಗಾಗಲೆ ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆ ಅನುಮೋದನೆ ದೊರಕಿರುವ ಹಿನ್ನೆಲೆಯಲ್ಲಿ ಶೀಘ್ರವೇ ಟೆಂಡರ್ ಕರೆಯಲಾಗುವುದು. ಈ ಎರಡು ಯೋಜನೆಗಳಿಂದ ತಲಾ 7 ಗ್ರಾಮಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದರು.
ಕಲಬುರಗಿ-ಯಾದಗಿರಿ ಡಿ.ಸಿ.ಸಿ. ಬ್ಯಾಂಕಿನಿಂದ ಪ್ರಸಕ್ತ 2022-23ನೇ ಸಾಲಿಗೆ 2.60 ಲಕ್ಷ ರೈತರಿಗೆ 1,000 ಕೋಟಿ ರೂ. ಬಡ್ಡಿ ರಹಿತ ಸಾಲ ನೀಡುವ ಗುರಿ ಹೊಂದಲಾಗಿದೆ.
ಜಿಲ್ಲೆಯ ಕಾರ್ಮಿಕ ಇಲಾಖೆಯಲ್ಲಿ ಇದೂವರೆಗೆ 3,05,969 ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ನೊಂದಾಯಿತರಾಗಿದ್ದಾರೆ. ಈ ಪೈಕಿ 2022-23ನೇ ಸಾಲಿನಲ್ಲಿ 2,250 ಕಾರ್ಮಿಕರ ಮಕ್ಕಳ ಮದುವೆಗೆ 11.25 ಕೋಟಿ ರೂ., 6,895 ಕಾರ್ಮಿಕ ಮಕ್ಕಳ ಶೈಕ್ಷಣಿಕ ಧನಸಹಾಯವಾಗಿ 4.65 ಕೋಟಿ ರೂ., 285 ಮಹಿಳಾ ಕಾರ್ಮಿಕರ ಹೆರಿಗೆ ಧನ ಸಹಾಯವಾಗಿ 72 ಲಕ್ಷ ರೂ. ಹೀಗೆ ಒಟ್ಟಾರೆ 10,048 ಕಾರ್ಮಿಕರಿಗೆ ಮಂಡಳಿಯ ವಿವಿಧ ಸೌಲಭ್ಯ ಕಲ್ಪಿಸಲು 18.94 ಕೋಟಿ ರೂ. ಖರ್ಚು ಮಾಡಲಾಗಿದೆ.
ಶೋಷಿತ ವರ್ಗಕ್ಕೆ ನ್ಯಾಯ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ದಶಕಗಳ ಬೇಡಿಕೆಗೆ ಸ್ಪಂದಿಸಿದ ರಾಜ್ಯ ಸರ್ಕಾರವು, ಇತ್ತೀಚೆಗೆ ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ.15 ರಿಂದ 17ಕ್ಕೆ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಶೇ.3 ರಿಂದ ಶೇ.7ಕ್ಕೆ ಹೆಚ್ಚಿಸುವ ಮೂಲಕ ಶೋಷಿತ ವರ್ಗಕ್ಕೆ ನ್ಯಾಯ ಒದಗಿಸಲಾಗಿದೆ. ಕಲಬುರಗಿಯಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ, ಹಿಂದುಳಿದ ಹಾಗೂ ಆರ್ಥಿಕವಾಗಿ ಹಿಂದುಳಿದ ಇತರೆ ವರ್ಗದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ 1,000 ಸಂಖ್ಯೆಯ ಸಾಮಥ್ರ್ಯದ “ದೀನದಯಾಳ ಉಪಾಧ್ಯಾಯ ಸೌಹಾರ್ಧ ವಿದ್ಯಾರ್ಥಿ ನಿಲಯ” ಸಮುಚ್ಛಯವನ್ನು 50 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.
ಸಮಾಜ ಕಲ್ಯಾಣ ಇಲಾಖೆಯಿಂದ ಕಳೆದ 2021-22ನೇ ಸಾಲಿನಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ 3,353 ಎಸ್.ಸಿ-ಎಸ್.ಟಿ ವಿದ್ಯಾರ್ಥಿಗಳಿಗೆ 670.70 ಲಕ್ಷ ರೂ. ಪ್ರೋತ್ಸಾಹಧನ. 2021-22ನೇ ಸಾಲಿನಿಂದÀ ಇಲ್ಲಿಯವರೆಗೆ ಅಂತರ ಜಾತಿ, ಮರು ವಿಧವಾ ವಿವಾಹ, ಸರಳ ಮತ್ತು ಸಾಮೂಹಿಕ ಹಾಗೂ ದೇವದಾಸಿಯರ ಮಕ್ಕಳ ವಿವಾಹ ಯೋಜನೆಯಡಿ 94 ದಂಪತಿಗಳಿಗೆ 295 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 128 ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಪಡೆದ 8,819 ವಿದ್ಯಾರ್ಥಿಗಳ ಉಚಿತ ಊಟ, ವಸತಿ ಇನ್ನಿತರ ಮೂಲಸೌಲಭ್ಯಕ್ಕಾಗಿ 2022-23ನೇ ಸಾಲಿಗೆ 2,069.36 ಲಕ್ಷ ರೂ. ಖರ್ಚು ಮಾಡಲಾಗಿದೆ. ಅದೇ ರೀತಿ ಅಲಸಂಖ್ಯಾತ ಕಲ್ಯಾಣ ಇಲಾಖೆಯಡಿ 45 ವಿದ್ಯಾರ್ಥಿ ನಿಲಯಗಳಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಸಿಖ್ ಹಾಗೂ ಪಾರ್ಸಿ ಸಮುದಾಯದ 2,950 ವಿದ್ಯಾರ್ಥಿಗಳ ವಸತಿಗೆ 707.39 ಲಕ್ಷ ರೂ. ವ್ಯಯ ಮಾಡಲಾಗಿದೆ ಎಂದು ತಿಳಿಸಿದರು.
ಸ್ತಬ್ಧಚಿತ್ರಗಳ ಮೆರವಣಿಗೆ: ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕಲಾ ತಂಡಗಳ ಜೊತೆಗೆ ಪ್ರವಾಸೋದ್ಯಮ, ಸಾರಿಗೆ ಇಲಾಖೆ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆಗಳ ಸಾಧನೆ ಬಿಂಬಿಸುವ ಸ್ತಬ್ಧಚಿತ್ರಗಳ ಮೆರವಣಿಗೆಗೆ ಕೆ.ಕೆ.ಆರ್.ಟಿ.ಸಿ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ಸಂಸದ ಡಾ.ಉಮೇಶ ಜಾಧವ ಅದಿಯಾಗಿ ಎಲ್ಲಾ ಗಣ್ಯರು ಡೊಳ್ಳು ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಡಾ.ಎಸ್.ಎಂ.ಪಂಡಿತ ರಂಗಮಂದಿರ ವರೆಗೆ ಸಾಗಿತು.
ಬೊಂಬೆ ಹೇಳುತೈತೆ ಹಾಡಿದ ಮಕ್ಕಳು: ಮೆರವಣಿಗೆಯಲ್ಲಿ ಭಾಗವಹಿಸಿದ ಶಾಲಾ ಮಕ್ಕಳು ಬಾರಿಸುವ ಕನ್ನಡ ಡಿಂಡಿಮವ ಜೊತೆಗೆ ಡಾ.ಪುನೀತ ರಾಜಕುಮಾರ ಅಭಿನಯದ ರಾಜಕುಮಾರ ಚಿತ್ರದ “ಬೊಂಬೆ ಹೇಳುತೈತೆ, ಮತ್ತೆ ಹೇಳುತೈತೆ ನೀನೇ ರಾಜಕುಮಾರ” ಹಾಡು ಹಾಡುವ ಮೂಲಕ ಅಗಲಿದ ತಮ್ಮ ನೆಚ್ಚಿನ ನಟ, ಕರ್ನಾಟಕದ ರತ್ನನನ್ನು ಸ್ಮರಿಸಿದರು.
ಕಲಬುರಗಿ ಉತ್ತರ ಶಾಸಕಿ ಖನೀಜ್ ಫಾತಿಮಾ, ವಿಧಾನ ಪರಿಷತ್ ಶಾಸಕ ಶಶೀಲ ಜಿ. ನಮೋಶಿ, ಸಾಬಣ್ಣಾ ತಳವಾರ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಣ ಧರ್ಮಣ್ಣ ದೊಡ್ಡಮನಿ, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ ಡಿ.ಬದೋಲೆ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಎಸ್.ಪಿ.ಇಶಾ ಪಂತ್, ಡಿ.ಸಿ.ಪಿ.ಅಡ್ಡೂರು ಶ್ರೀನಿವಾಸಲು, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತೆ ಗರಿಮಾ ಪನ್ವಾರ್, ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಎ.ಸಿ.ಪಿ. ಡಾ.ಎಂ.ಎನ್.ದೀಪನ್, ಸಹಾಯಕ ಆಯುಕ್ತೆ ಪಾರ್ವತಿ, ತಹಶೀಲ್ದಾರ ಪ್ರಕಾಶ ಕುದರಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಮುಖಂಡರು, ಶಿಕ್ಷಕರು, ಮಕ್ಕಳು, ಸಾರ್ವಜನಿಕರು ಭಾಗವಹಿಸಿದ್ದರು. ಜಿಮ್ಸ್ ಉಪನ್ಯಾಸಕ ಶ್ರೀಕಾಂತ ಫುಲಾರಿ ನಿರೂಪಣೆ ಮಾಡಿದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…