ಭಾಲ್ಕಿ: ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪಾಪು-ಚಂಪಾ ವೇದಿಕೆಯಲ್ಲಿ ವಚನ ಪರಂಪರೆ ಗೋಷ್ಠಿಯಲ್ಲಿ ಡಾ.ಸಂಗಮೇಶ ಸವದತ್ತಿಮಠ ಅವರು ಶರಣರು ಹೊಸ ಧರ್ಮ ಹುಟ್ಟುಹಾಕಿಲ್ಲ ಎಂದು ಮಾತನಾಡಿರುವ ವಿಷಯ ಕನ್ನಡದ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಸವದತ್ತಿಮಠ ಅವರ ಈ ಹೇಳಿಕೆ ಸಂಪೂರ್ಣವಾಗಿ ಅನೈತಿಹಾಸಿಕ ಮತ್ತು ಅಪ್ಪಟ ಸುಳ್ಳು ಆಗಿದೆ.
ಭಾರತ ದೇಶದಲ್ಲಿ ಅವೈದಿಕ ಮತ್ತು ವೈದಿಕ ಈ ಎರಡು ಪರಂಪರೆಗಳು ಬೆಳೆದು ಬಂದಿವೆ. ವಚನ ಪರಂಪರೆ ಅವೈದಿಕ ಪರಂಪರೆಗೆ ಸೇರಿದ್ದು. ಬಸವಾದಿ ಶರಣರ ಚಿಂತನೆಗಳಿಂದ ಉದಯಿಸಿದ ಧರ್ಮ ಅದು ಹೊಸ ಧರ್ಮ ಮತ್ತು ಸ್ವತಂತ್ರ ಧರ್ಮವಾಗಿದೆ ಎಂಬುವುದಕ್ಕೆ ಶರಣರ ವಚನಗಳಲ್ಲಿ ನೂರಾರು ಆಧಾರಗಳು ದೊರೆಯುತ್ತವೆ. ವಿಶ್ವಗುರು ಬಸವಣ್ಣನವರು ಹೊಸ ಧರ್ಮದ ವೇದಿಕೆಯಾಗಿ ಅನುಭವಮಂಟಪ ಸ್ಥಾಪಿಸಿದರು. ಅದರಲ್ಲಿ ಸಮಾಜದ ಎಲ್ಲ ಕಾಯಕಜೀವಿ ಶರಣ ಶರಣೆಯರು ಒಗ್ಗೂಡಿ ಅನುಭಾವ ನಡೆಸಿದರು.
ಆ ಅನುಭಾವದ ಮೊಸೆಯಿಂದ ಹೊರಹೊಮ್ಮಿದ ವಚನ ಸಾಹಿತ್ಯದಲ್ಲಿ ವೈಶ್ವಿಕ ಚಿಂತನೆಗಳು ಮೂಡಿಬಂದಿವೆ. ಶರಣರು ಏಕದೇವೋಪಾಸನೆ, ದೇಹವೇ ದೇವಾಲಯ, ದಯವೇ ಧರ್ಮದ ಮೂಲ, ಕಾಯಕವೇ ಕೈಲಾಸ, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ, ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ, ದಾಸಿಪುತ್ರನಾಗಿ ವೇಶ್ಯಪುತ್ರನಾಗಲಿ ಶಿವದೀಕ್ಷೆಯಾದ ಬಳಿಕ ಸಾಕ್ಷಾತ ಶಿವನೆಂದು ವಂದಿಸಿ, ಪೂಜಿಸಿ, ಪಾದೋದಕ, ಪ್ರಸಾದಕ್ಕೊಂಬುವುದೇ ಯೋಗ್ಯ ಎಂಬ ಚಿಂತನೆಗಳು ನವಧರ್ಮ ನಿರ್ಮಾಣಕ್ಕೆ ನಾಂದಿ ಹಾಡಿವೆ.
ವಚನ ಸಾಹಿತ್ಯ ಆಳವಾಗಿ ಅಧ್ಯಾಯನ ಮಾಡಿದ ಅನೇಕ ಸಂಶೋಧಕರು, ಚಿಂತಕರು, ಮಠಾಧೀಶರು, ಶರಣರು ಹೊಸ ಧರ್ಮ ಹುಟ್ಟು ಹಾಕಿದ್ದಾರೆಂದು ಸಂಶೋಧನೆಯಿಂದ ಸಿದ್ಧಪಡಿಸಿದ್ದಾರೆ. ಅದಲ್ಲದೆ ಬ್ರಿಟಿಷ ಕಾಲದ ಅನೇಕ ಗ್ರಂಥಗಳಲ್ಲಿ, ನ್ಯಾಯಾಲಯದ ತೀರ್ಪುಗಳಲ್ಲಿ ಶರಣರು ಹೊಸ ಧರ್ಮದ ಸ್ಥಾಪಕರೆಂದು ಸಿದ್ಧವಾಗಿದೆ. ಇತ್ತೀಚೆಗೆ ಕರ್ನಾಟಕ ಸರಕಾರ ವತಿಯಿಂದ ನ್ಯಾಯಮೂರ್ತಿ ನಾಗಮೋಹನದಾಸ ಅವರ ಅಧ್ಯಕ್ಷತೆಯಲ್ಲಿ ರಚನೆಗೊಂಡ ಸಮಿತಿಯು ಈ ವಿಷಯವನ್ನು ಎತ್ತಿ ಹಿಡಿದು ಬಸವಸ್ಥಾಪಿತ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವೆಂದು ಪರಿಗಣಿಸಿ, ಅದಕ್ಕೆ ಸಂವಿಧಾನಾತ್ಮಕ ಮಾನ್ಯತೆ ನೀಡಬೇಕೆಂದು ವರದಿ ಸಲ್ಲಿಸಿರುವ ವಿಷಯ ಜಗಜಾಹಿರವಾಗಿದೆ.
ಸರ್ವೋಚ್ಚ ನ್ಯಾಯಾಲಯವು ಒಂದು ತೀರ್ಪಿನಲ್ಲಿ ಹಿಂದೂ ಎಂಬುದು ಒಂದು ಧರ್ಮವಲ್ಲ. ಅದು ಒಂದು ಜೀವನ ಪದ್ದತಿ ಎಂದು ಹೇಳುತ್ತದೆ. ಹೀಗಾದರೆ ಸವದತ್ತಿಮಠ ಹೇಳುವ ಹಿಂದೂ ಧರ್ಮ ಯಾವುದು? ಶರಣರು ಹಿಂದೂ ಧರ್ಮ ಪರಂಪರೆ ವಿರೋಧಿಸಿಲ್ಲ ಅಂದ ಮೇಲೆ ಶರಣರಿಗೆ ಎಳೆಹೂಟಿ ಶಿಕ್ಷೆ ನೀಡಿದವರು ಯಾರು? ವಚನ ಸಾಹಿತ್ಯ ಸುಟ್ಟು ಹಾಕಿದವರು ಯಾರು? ಶರಣರ ಹತ್ಯಾಕಾಂಡ ಮಾಡಿದವರು ಯಾವ ಧರ್ಮದವರು? ಈ ಪ್ರಶ್ನೆಗಳಿಗೆ ಸವದತ್ತಿಮಠ ಅವರು ಉತ್ತರಿಸಬಹುದೆ? ಈ ವಿಷಯದಲ್ಲಿ ಅವರು ಏನಾದರೂ ಸಂಶೋಧನೆ ಮಾಡಿದದಾರೆಯೇ? ಮಾಡಿಲ್ಲ ಆದರೆ ಶರಣರ ಹೊಸ ಧರ್ಮದ ಕುರಿತು ಮಾತನಾಡುವ ನೈತಿಕತೆ ಸವದತ್ತಿಮಠ ಅವರ ಮನಸಾಕ್ಷಿಗೆ ಒಪ್ಪುತ್ತದೆಯೆ?
ಡಾ.ಸವದತ್ತಿಮಠ ಅವರು ಶರಣರ ಕುರಿತು ನಿರಂತರವಾಗಿ ಅಪ್ಪಟ ಸುಳ್ಳು ಮತ್ತು ವಿವಾದಾತ್ಮಕ ಹೇಳಿಕೆ ನೀಡುವುದು ರೂಢಿ ಮಾಡಿಕೊಂಡಿದ್ದಾರೆ. ಅವರು ಇಂತಹ ಸುಳ್ಳು ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಪದೇ ಪದೇ ಶರಣರ ತಂಟೆಗೆ ಬರುವ ಚಾಳಿ ಬಿಡಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಅಧ್ಯಕ್ಷರಾದ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…