ಸೊನ್ನ ಬ್ಯಾರೇಜಿಗೆ 1 ಟಿ.ಎಂ.ಸಿ. ನೀರು ಬಿಡುಗಡೆ: ನೀರು ಪೋಲಾಗದಂತೆ 24×7 ನಿಗಾ ವಹಿಸಿ: ಡಿ.ಸಿ

0
46

‌ಕಲಬುರಗಿ: ಜಿಲ್ಲೆಯ ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ನಾರಾಯಪುರ ಜಲಾಶಯದಿಂದ ಬುಧವಾರ ಸಂಜೆ‌ 4 ಗಂಟೆಗೆ ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜಿಗೆ 1 ಟಿ.ಎಂ.ಸಿ ನೀರು ಬಿಡುಗಡೆ ಮಾಡಿದ್ದು, ಸೊನ್ನ‌ ಬ್ಯಾರೇಜ್ ತಲುಪವವರೆಗೆ ಕಾಲುವೆಗಳ ಮದ್ಯದಲ್ಲಿ ಎಲ್ಲಿಯೂ ನೀರು ಪೋಲಾಗದಂತೆ ತಾಲೂಕಾಡಳಿತ ತೀವ್ರ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಬಿ.ಫೌಜಿಯಾ ತರನ್ನುಮ್ ಹೇಳಿದರು.

ಬುಧವಾರ ತಮ್ಮ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಕೆಸ್ವಾನ್ ಮೂಲಕ ಜಿಲ್ಲೆಯ ತಹಶೀಲ್ದಾರ, ತಾಲೂಕಾ ಪಂಚಾಯತ್, ಇ.ಓ, ನಗರ ಸ್ಥಳೀಯ ಸಂಸ್ಥೆಗಳ ಮಖ್ಯಸ್ಥರು ಹಾಗೂ ಇತರೆ ಸಂಬಂಧಿತ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಮೂಲಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ನಡೆಸಿ ಮಾತನಾಡಿದ ಅವರು, ನಾರಾಯಣಪುರದಿಂದ ಬಿಡುಗಡೆಯಾದ ನೀರು ಸೊನ್ನ ಬ್ಯಾರೇಜು ತಲುಪಲು ಅಂದಾಜು 10-12 ದಿನಗಳು ಬೇಕಾಗುತ್ತದೆ. ಸೊನ್ನ‌ ಬ್ಯಾರೇಜಿಗೆ ನೀರು ತಲುಪುವವರೆಗೆ ಸಂಬಂಧಪಟ್ಟ ತಹಶೀಲ್ದಾರರು ಇದರ‌ ಮೇಲೆ 24×7 ನಿಗಾ ಇಡಲು ಅಧಿಕಾರಿ-ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದರು.

Contact Your\'s Advertisement; 9902492681

ಎಲ್ಲಿಯೂ ನೀರು ಪೋಲಾಗದಂತೆ ಮತ್ತು ಅಕ್ರಮವಾಗಿ ಪಂಪ ಸೆಟ್, ಇತರೆ ಮಾರ್ಗದ ಮೂಲಕ ನೀರು ಪಡೆಯದಂತೆ ಎಚ್ಚರ ವಹಿಸಬೇಕು. ಕಟ್ಟುನಿಟ್ಟಿನ ವಿಜಿಲೆನ್ಸ್ ಇಲ್ಲಿ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳು ಒತ್ತಿ ಹೇಳಿದರು.

ಬರಗಾಲ ಹಿನ್ನೆಲೆಯಲ್ಲಿ ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್ ಅಡಿಯಲ್ಲಿ ಕುಡಿಯುವ ನೀರು ಕಾಮಗಾರಿಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ. ಜಿಲ್ಲಾ ಚುನಾವಣಾಧಿಕಾರಿಗಳ ಅನುಮತಿ ಪಡೆದು ಮುಂದುವರೆಯಬಹುದು. ಅಧಿಕಾರಿಗಳು ಇದನ್ನರಿತು ಕೆಲಸ‌ ಮಾಡಬೇಕು.ಇದಲ್ಲದೆ ಜೆ.ಜೆ.ಎಂ. ಸೇರಿದಂತೆ ಇತರೆ ಕುಡಿಯುವ ನೀರಿನ ಯೋಜನೆ ಸಂಬಂಧಪ್ಟಂತೆ ಮಾಹಿತಿ ನೀಡಿದಲ್ಲಿ ಅದನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ‌ ಸ್ಕ್ರೀನಿಂಗ್ ಕಮಿಟಿಗೆ ಕಳುಹಿಸಲಾಗುವುದು. ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ ನಮ್ಮ‌ ಮೊದಲ ಆದ್ಯತೆಯಾಗಬೇಕು ಎಂದರು.

ಜಿಲ್ಲೆಯಲ್ಲಿ ತೀವ್ರ ಬರ ಎದುರಾಗಿದೆ. ಕುಡಿಯುವ ನೀರು ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಅನುದಾನದ ಯಾವುದೆ ಕೊರತೆಯಿಲ್ಲ. ಈಗಾಗಲೆ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಅನುದಾನ ಬಿಡುಗಡೆ ಮಾಡಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಕುಡಿಯುವ ನೀರಿನ ಬಿಲ್ಲು ಪಿ.ಡಿ.ಓ, ಆರ್.ಐ, ವಿ.ಎ ಅವರ ಸಹಿ ಮತ್ತು ತಾಲೂಕ ಪಂಚಾಯತ್ ಇ.ಓ ಅವರ ಒಪ್ಪಿಗೆ ಪಡೆದು ಬಿಲ್ಲು ತೀರ್ಣಗೊಳಿಸಬೇಕು ಎಂದು ತಹಶೀಲ್ದಾರರಿಗೆ ಖಡಕ್ ಸೂಚನೆ ನೀಡಿದರು.

ಮುಂದಿನ ದಿನದಲ್ಲಿ ಸಮಸ್ಯಾತ್ಮಕ ಹಳ್ಳಿ, ಬಡವಟಣೆಗಳ ಪಟ್ಟಿ ಈಗಿನಿಂದಲೆ ಸಿದ್ಧತೆ ಮಾಡಿಕೊಂಡು ಟ್ಯಾಂಕರ್, ಬೋರವೆಲ್ ಬಾಡಿಗೆ ಮೇಲೆ ಪಡೆದು ಕುಡಿಯುವ ನೀರು ಪೂರೈಸಬೇಕು ಎಂದರು.

ಯಾದಗಿರಿ-ವಿಜಯಪುರ ಡಿ.ಸಿ. ಜೊತೆ ಚರ್ಚೆ: ಇದೇ ಸಂದರ್ಭದಲ್ಲಿ ಬಿ.ಫೌಜಿಯಾ ತರನ್ನುಮ್ ಅವರು ವಿಜಯಪುರ ಡಿ.ಸಿ ಟಿ.ಭೂಬಾಲನ್ ಮತ್ತು ಯಾದಗಿರಿ ಅಪರ‌ ಜಿಲ್ಲಾಧಿಕಾರಿ ಶರಣಬಸಪ್ಪ ಕೊಟೆಪ್ಪಗೊಳ ಹಾಗೂ ಎಸ್.ಪಿ. ಅವರೊಂದಿಗೆ ವಿಡಿಯೋ ಸಂವಾದ‌ ನಡೆಸಿ ಯಾದಗಿರಿಯ ನಾರಾಯಣಪುರದಿಂದ ಬಿಡುಗಡೆಯಾಗುವ ನೀರು ಕೆಂಭಾವಿ-ಯಡ್ರಾಮಿ-ಹೊನ್ನಳ್ಳಿ-

ಬಳಗಾನೂರ ಕೆರೆ ಮಾರ್ಗವಾಗಿ ಭೀಮಾ ನದಿಗೆ ಸೇರಿ ಅಲ್ಲಿಂದ ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜಿಗೆ ನೀರು ತಲುಪಲಿದೆ. ಈ ಮಾರ್ಗದಲ್ಲಿ ವಿವಿಧ ತಂಡಗಳನ್ನು ನಿಯೋಜಿಸಿ ನೀರು ಕೃಷಿಗೆ ಬಳಕೆಯಾಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ತಮ್ಮ ಸಹಕಾರ ಅಗತ್ಯವಾಗಿದೆ ಎಂದರು.

ಶುದ್ಧ ಕುಡಿಯುವ ನೀರು ಪೂರೈಸಿ: ಕಲಬುರಗಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು ನಗರಕ್ಕೆ ನೀರು ಪೂರೈಕೆ ಮಾಡುವ ಜಲಮೂಲಗಳಲ್ಲಿ ಲಭ್ಯ ನೀರಿನ ಪ್ರಮಾಣ ಕುರಿತು ಮಾಹಿತಿ ಪಡೆದುಕೊಂಡ ಅವರು ಕಲಬುರಗಿ‌ ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ ಎಂಬ ದೂರು ಸರ್ವೆ ಸಾಮನ್ಯವಾಗಿದ್ದು, ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂದು ಪಾಲಿಕೆ, ಜಲ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು. ಇದಲ್ಲದೆ ಆಗಾಗ ಕುಡಿಯುವ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ತಪಾಸಣೆ ಮಾಡಬೇಕು ಎಂದರು.

*ಉಷ್ಣ ಅಲೆಯ ಎಚ್ಚರಿಕೆ:*

ಮುಂದಿನ 3 ದಿನಗಳಲ್ಲಿ ಅಂದರೆ ಮಾ. 27 ರಿಂದ 29ರ ವರೆಗೆ ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಉಷ್ಣ ಅಲೆ ಮತ್ತು ಗರಿಷ್ಠ ತಾಪಮಾನ ಹೆಚ್ಚಾಗುವ ಬಗ್ಗೆ ಹವಾಮಾನ ಇಲಾಖೆಯಿಂದ ಮುನ್ಸೂಚನೆ ಬಂದಿದ್ದು, ಇಂತಹ ಬಿಸಲಿನ ಪ್ರಖರತೆ ಸಂದರ್ಭದಲ್ಲಿ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಿಲ್ಲಾ ಮತ್ತು ತಾಲೂಕಾ ಆರೋಗ್ಯಾಧಿಕಾರಿಗಳು ಆರೋಗ್ಯ ಸಲಹೆ ಮಾರ್ಗಸೂಚಿ ಹೊರಡಿಸಬೇಕು ಮತ್ತು ಇದನ್ನು ವ್ಯಾಪಕವಾಗಿ ಪ್ರಚಾರಗೊಳಿಸಬೇಕು ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಡಿ.ಎಚ್.ಓ ಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಎಸ್.ಪಿ ಅಕ್ಷಯ್ ಹಾಕೈ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಜೆಸ್ಕಾಂ ಎಂ.ಡಿ. ರವೀಂದ್ರ, ಸಹಾಯಕ ಆಯುಕ್ತೆ ರೂಪಿಂದರ್‌ ಸಿಂಗ್ ಕೌರ್‌, ಡಿ.ಯು.ಡಿ.ಸಿ ಯೋಜನಾ ನಿರ್ದೇಶಕ ಮುನಾವರ ದೌಲಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕಾ ತಹಶೀಲ್ದಾರ, ತಾಲೂಕಾ ಪಂಚಾಯತ್ ಇ.ಓ ಮತ್ತಿತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here