ಶಹಾಬಾದ: ಸತ್ಯ, ಅಹಿಂಸೆ, ಶಾಂತಿಯ ಮೂಲಮಂತ್ರದ ಮೂಲಕ ಇಡೀ ಜಗತ್ತಿಗೆ ಹೆಸರುವಾಸಿಯಾದ ಮಹಾತ್ಮ ಗಾಂಧೀಜಿ ಹಾಗೂ ಪ್ರಾಮಾಣಿಕತೆಯ ಮೂಲಕ ಎಲ್ಲರಿಗೂ ಮಾದರಿಯಾದ ಲಾಲಾಬಹಾದ್ದೂರ್ ಶಾಸ್ತ್ರಿ ಅವರು ಈ ನಾಡು ಕಂಡ ಮಹಾನ್ ವ್ಯಕ್ತಿಗಳು ಎಂದು ಸಿಎ ಇಂಗಿನಶೆಟ್ಟಿ ಕಾಲೇಜಿನ ಪ್ರಾಂಶುಪಾಲ ರಾಜಗೋಪಾಲ ಜೂಜಾರೆ ಹೇಳಿದರು.
ಅವರು ರವಿವಾರ ನಗರದ ರಾಷ್ಟ್ರಭಾಷಾ ಶಿಕ್ಷಣ ಸಮಿತಿಯಲ್ಲಿ ಆಯೋಜಿಸಲಾದ ಗಾಂಧೀ ಜಯಂತಿ ಹಾಗೂ ಲಾಲಾಬಹಾದ್ದೂರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಗಾಂಧೀಜಿಯವರು ಯಾವತ್ತಿಗೂ ಸ್ವಚ್ಛತೆ ಬಗ್ಗೆ ಒತ್ತು ನೀಡಿದವರು. ಎಲ್ಲಿ ಸ್ವಚ್ಛತೆ ಇದೆ ಅಲ್ಲಿ ದೇವರು ಇರುತ್ತಾನೆ ಎಂದು ನಂಬಿದವರು. ಪ್ರಧಾನಿ ಮೋದಿಯವರು ಸ್ವಚ್ಛ ಭಾರತ ಅಭಿಯಾನ ಯೋಜನೆ ಮೂಲಕ ಮಹಾತ್ಮ ಗಾಂಧೀಜಿಯವರ ಕಂಡ ಕನಸನ್ನು ನನಸು ಮಾಡುತ್ತಿದ್ದಾರೆ.ಅವರ ಆದರ್ಶವನ್ನೇ ಅಳವಡಿಸಿಕೊಂಡು ಪ್ರಧಾನಿಯವರು ಸ್ವಚ್ಛ ಭಾರತ ಅಭಿಯಾನ ಹಾಗೂ ಪ್ಲಾಸ್ಟಿಕ್ ಮುಕ್ತ ಭಾರತದ ಆದೇಶವನ್ನು ನೀಡಿದ್ದಾರೆ. ಗಾಂಧೀಜಿಯವರು ತಾಳ್ಮೆ,ಸಂಯಮ ಹಾಗೂ ಬದ್ಧತೆಯಿಂದ ಈ ದೇಶವನ್ನು ದಾಸ್ಯದಿಂದ ಮುಕ್ತಗೊಳಿಸಲು ಹೋರಾಟ ನಡೆಸಿದರು.ಅದೇ ರೀತಿ ಪರಿಸರ ಸ್ವಚ್ಛತೆ ಕಾಪಾಡುವುದು ಸಹ ಅವರ ಮಂತ್ರವಾಗಿತ್ತು. ಸತ್ಯ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಬದುಕುವುದೇ ನಾವು ಗಾಂಧೀಜಿ ಅವರಿಗೆ ಸಲ್ಲಿಸುವ ದೊಡ್ಡ ಗೌರವವಾಗಿದೆ ಎಂದು ಹೇಳಿದರು.
ಎಸ್.ಜಿ.ವರ್ಮಾ ಪ್ರೌಢಶಾಲೆಯ ಮುಖ್ಯಗುರುಗಳಾದ ಬಾಬಾಸಾಹೇಬ ಸಾಳುಂಕೆ ಮಾತನಾಡಿ, ಬಾಪೂಜಿ ಹಾಗೂ ಲಾಲಬಹಾದ್ದೂರ್ ಶಾಸ್ತ್ರಿ ಅವರ ಚಿಂತನೆ ಸಾರ್ವಕಾಲಿಕ ಸತ್ಯವಾಗಿರುವ ಮೌಲ್ಯವನ್ನು ಒಳಗೊಂಡಿದೆ . ಆದ್ದರಿಂದ ನಾವೆಲ್ಲರೂ ಗಾಂಧೀ ಮಾರ್ಗದಲ್ಲಿ ನಡೆದು ಆದರ್ಶರಾಗಿ ಬೆಳೆಯೋಣ ಎಂದು ಹೇಳಿದರು.
ಎಸ್.ಜಿ.ವರ್ಮಾ ಪ್ರಾಥಮಿಕ ಶಾಲೆಯ ಮುಖ್ಯಗುರುಮಾತೆ ಅನಿತಾ ಶರ್ಮಾ, ಎಸ್.ಎಸ್.ನಂದಿ ಪ್ರೌಢಶಾಲೆಯ ಪ್ರಭಾರಿ ಮುಖ್ಯಗುರುಮಾತೆ ಗೀತಾ ಸಿಪ್ಪಿ ವೇದಿಕೆಯ ಮೇಲಿದ್ದರು. ಉಪನ್ಯಾಸಕರು,ಶಿಕ್ಷಕರು, ಶಿಕ್ಷಕೇತರ ವರ್ಗ ಹಾಗೂ ಶಾಲಾ ಮಕ್ಕಳು ಹಾಜರಿದ್ದರು.