ಕಲಬುರಗಿ: ಉಡುಪಿಯ ಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ನಮ್ಮ ರಾಷ್ಟ್ರಕಂಡ ಅಪರೂಪದ ಸಂತರಾಗಿದ್ದರು. ಅವರ ಅಗಲುವಿಕೆಯ ನೋವು ನಮ್ಮನ್ನು ನಿರಂತರ ಬಾಧಿಸದೇ ಇರದು ಎಂದು ಗದುಗಿನ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕಂಬನಿ ಮಿಡಿದಿದ್ದಾರೆ.
ಇಂದು ಮಾಧ್ಯಮಗಳಿಗೆ ಪ್ರಕಟನೆ ಬಿಡುಗಡೆ ಮಾಡಿದ ತಮ್ಮ ಶೋಕಸಂದೇಶ ತಿಳಿಸಿ, ಇಡೀ ರಾಷ್ಟ್ರದ ಜನರ ಮೇಲೆ ಅವರಷ್ಟು ಪ್ರಭಾವವನ್ನು ಬೀರಿದ ಸಂತರು ಬಹಳ ವಿರಳ. ಸಂಪ್ರದಾಯಬದ್ಧ ಮಠಾಧೀಶರಾಗಿದ್ದೂ ಅವರು ಪ್ರಗತಿಪರ ವಿಚಾರಧಾರೆಯನ್ನು ಮೈಗೂಡಿಸಿಕೊಂಡಿದ್ದರು. ಸಂಪ್ರದಾಯಗಳನ್ನು ಮೀರಿ ಎಲ್ಲ ಸಮುದಾಯದ ಮಠಗಳಿಗೆ ಆಗಮಿಸಿ ಧರ್ಮ-ಧರ್ಮಗಳಲ್ಲಿ ಸಾಮರಸ್ಯವನ್ನು ಸಾಧಿಸುವ ನಿರಂತರ ಪ್ರಯತ್ನ ಅವರದಾಗಿತ್ತು. ರಾಷ್ಟ್ರದ ಸಮಗ್ರತೆ ಹಾಗೂ ಐಕ್ಯತೆಯ ವಿಷಯದಲ್ಲಿ ಅವರ ಕಾಳಜಿ ಅನನ್ಯವಾಗಿತ್ತು. ಹಾಗಾಗಿ ರಾಷ್ಟ್ರಸಂತರೆಂಬ ಅಭಿದಾನಕ್ಕೆ ಅವರು ಅನ್ವರ್ಥಕವಾಗಿದ್ದರು. ಇಂತಹ ಮಹಾನ್ ಸಂತರನ್ನು ಕಳೆದುಕೊಂಡ ನಮ್ಮ ರಾಷ್ಟ್ರವು ಬಡವಾದಂತಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.
ಉಡುಪಿಯ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದಂಗಳವರ ಸಂಬಂಧವನ್ನು ಮೆಲುಕು ಹಾಕಿದ ಶ್ರೀಗಳು ಜಾತಿ ಮತ ಪಂಥಗಳ ಭೇದವಿಲ್ಲದೆ ಎಲ್ಲರನ್ನೂ ಪ್ರೀತಿಸುವ, ಸಮರಸಗೊಳಿಸುವ ಅವರ ಔದಾರ್ಯ ಇತರ ಮಠಾಧೀಶರಿಗೆ ಆದರ್ಶಪ್ರಾಯವಾದುದು. ಎಂದಿದ್ದಾರೆ.
ಇತರ ಸಂಪ್ರದಾಯಬದ್ಧ ಮಠಾಧೀಶರ ವಿರೋಧದ ಮಧ್ಯೆಯೂ ಅವರು ತಮ್ಮ ಸಂಪ್ರದಾಯವನ್ನು ಬದಿಗಿರಿಸಿ, ಪ್ರಪ್ರಥಮವಾಗಿ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಕಾರ್ಯಕ್ರಮಕ್ಕೆ ಆಗಮಿಸಿ ಶ್ರೀಮಠ ಮಾಡುತ್ತಿರುವ ಸೇವಾ ಕಾರ್ಯಗಳನ್ನು ಮೆಚ್ಚಿಕೊಂಡು ಪ್ರಶಂಸಿಸಿರುವುದು ಅವರು ಸದಾ ಒಳ್ಳೆಯದನ್ನು ಗೌರವಿಸುತ್ತಿದ್ದರೆಂಬುದಕ್ಕೆ ನಿದರ್ಶನವಾಗಿದೆ. ಲಿಂಗಾಯತ ಮಠಗಳು ಮತ್ತು ಮಠಾಧೀಶರು ಬಸವಾದಿ ಶರಣರ ಕಾಯಕ-ದಾಸೋಹ-ಸಮಾನತೆಯ ತತ್ತ್ವಗಳನ್ನು ಅಳವಡಿಸಿಕೊಂಡು ತಮ್ಮ ತಮ್ಮ ಮಠಗಳಲ್ಲಿ ಜಾತಿ ಮತ ಪಂಥ ಪ್ರದೇಶಗಳ ಭೇದವಿಲ್ಲದೆ ಬಡವಿದ್ಯಾರ್ಥಿಗಳಿಗೆ ಅನ್ನ-ಆಶ್ರಯ ನೀಡಿ ಶೈಕ್ಷಣಿಕ ಅಭಿವೃದ್ಧಿ ಸಾಧಿಸುತ್ತಿರುವುದನ್ನು ಅವರು ಬಹುವಾಗಿ ಮೆಚ್ಚಿಕೊಂಡಿದ್ದರು. ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿರುವ ಈ ಕ್ರಮದಿಂದಾಗಿ ಲಿಂಗಾಯತ ಮಠಗಳು ದೇಶದ ಎಲ್ಲ ಮಠ-ಮಠಾಧೀಶರಿಗೆ ಮಾದರಿಯಾಗಿವೆ ಎಂದು ಅಭಿಮಾನದಿಂದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು.
ಹಿಂದೂ ಧರ್ಮದ ವರ್ಣಾಶ್ರಮ ಭೇದಗಳ ಮಧ್ಯೆಯೂ ಉಡುಪಿಯ ಶ್ರೀ ಪೇಜಾವರ ಮಠಾಧೀಶರು ದೇಶದ ಜನರ ಐಕ್ಯತೆ ಹಾಗೂ ಸಮಗ್ರತೆಯನ್ನು ಉಳಿಸಿಕೊಳ್ಳುವುದಕ್ಕಾಗಿ ನಿರಂತರ ಶ್ರಮಿಸಿರುವುದನ್ನು ಈ ರಾಷ್ಟ್ರವು ಎಂದೂ ಮರೆಯಲು ಸಾಧ್ಯವಿಲ್ಲ. ಧರ್ಮದ ಸಂವಿಧಾನದ ಜೊತೆಗೆ ರಾಷ್ಟ್ರದ ಸಂವಿಧಾನವನ್ನು ಗೌರವಿಸಿ ರಾಷ್ಟ್ರದ ಜನತೆಗೆ ಉದಾತ್ತ ಸಂದೇಶ ನೀಡಿದ ಮಹಾನ್ ಸಂತರಾಗಿದ್ದರು . ಅವರ ನೆನಪು ಚಿರಸ್ಮರಣೀಯ. ಭಗವಂತನು ಅವರಿಗೆ ಚಿರಶಾಂತಿಯನ್ನು ದಯಪಾಲಿಸಲಿ ಎಂದು ಶ್ರೀಗಳು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…