ಕಲಬುರಗಿ: ಒಳ ಮೀಸಲಾತಿ ನೀಡುವ ಮೂಲಕ ಮುಖ್ಯಮಂತ್ರಿಗಳು ಭಯದಿಂದ ಮುಕ್ತ ಮಾಡಿದ್ದಾರೆ ಎಂದು ಸಂಸದ ಡಾ.ಉಮೇಶ ಜಾಧವ್ ಹೇಳಿದರು.
ಸುಮಾರು ನಾ.ಸದಾಶಿವ ಆಯೋಗದ ವರದಿ ಜಾರಿ ಮಾಡಿದರೆ ನಮ್ಮ ಸಮುದಾಯದ ಪ್ರತಿಯೊಬ್ಬರು ಪರಿಶಿಷ್ಟ ಮೀಸಲಾತಿ ಹೋಗುತ್ತದೆ ಎಂಬ ಭಯದಲ್ಲಿದ್ದರು. ಯುವಕರು ಈ ಬಗ್ಗೆ ಜನ ಪ್ರತಿನಿಗಳಿಗೆ ಪ್ರಶ್ನೆ ಕೇಳುತ್ತಿದ್ದರು. 2006ರಿಂದ ಸಕ್ರಿಯ ರಾಜಕರಣದಲ್ಲಿರುವ ನಾನು ಈ ಬಗ್ಗೆ ಹಲವು ಸಭೆ ನಡೆಸಿದ್ದೇವು. ಆದರೆ ಇದಕ್ಕೆಲ್ಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತಿಶ್ರೀ ಹಾಡಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಒಳ ಮೀಸಲಾತಿಯಲ್ಲಿ ವರ್ಗಿಕರಣ ಮಾಡುವ ಮೂಲಕ ಲಂಬಾಣಿ, ಕೊರಮ, ಕೊರಚ, ಭೋವಿ ಸಮುದಾಯಕ್ಕೆ ಶೇ.4.5ರಷ್ಟು ಒಳ ಮೀಸಲಾತಿ ನೀಡಿ ರಾಜ್ಯ ಸರಕಾರ ಆದೇಶ ನೀಡುವ ಮೂಲಕ, ಲಂಬಾಣಿಗರಲ್ಲಿ ಬೇರೂರಿದ್ದ ಭಯವನ್ನು ಕಿತ್ತು ಹಾಕಿದ್ದಾರೆ. ಅದಕ್ಕಾಗಿ ಅವರಿಗೆ ಸಮಾಜದ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದು ಹೇಳಿದರು.
ಸಮಾಜದ ಮುಖಂಡ ವಿಠಲ ಜಾಧವ್ ಮಾತನಾಡಿ, ಈ ಮೀಸಲಾತಿ ಬಗ್ಗೆ ಹಲವು ರೀತಿಯ ಗೊಂದಲ ಜನರಲ್ಲಿ ಮೂಡಿದೆ. ಅದನ್ನು ಹೊಗಲಾಡಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ. ಪ್ರತಿ ತಾಂಡಾಗಳಿಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ 25 ಜನರ ತಂಡ ಮಾಡುತ್ತಿದೆ. ಒಳ ಮೀಸಲಾತಿ ಬಗ್ಗೆ ಗೊಂದಲ ಇರುವವರು ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಧ್ಯ ಕೇಂದ್ರದಲ್ಲಿ ಪ್ರಭಾವಿ ನಾಯಕರು ಬಂಜಾರ ಸಮುದಾಯ ಶೇ.3ರಷ್ಟು ಇದ್ದು, ಆದ್ದರಿಂದ ಸ್ಪರ್ಧೆಗೆ ಮೂರು ಕ್ಷೇತ್ರಗಳನ್ನು ನೀಡಿದ್ದರು. ಆದರೆ ಬಿಜೆಪಿ ಸರಕಾರ ಎಂದಿಗೂ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಿಲ್ಲ. ಕಳೆದ 70 ವರ್ಷಗಳಲ್ಲಿ ಆಗದ ಕೆಲಸಗಳನ್ನು ಇದೀಗ ಮಾಡುತ್ತಿದೆ. ಅದಕ್ಕಾಗಿ ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸುವೆ ಎಂದು ಬಿಜೆಪಿ ಮುಖಂಡ ನಾಮದೇವ ರಾಠೋಡ ಹೇಳಿದರು.