ಸುರಪುರ: ಶಹಾಪುರ ತಾಲೂಕಿನ ಹೋತಪೇಟ ಗ್ರಾಮದ ಅಂಚೆ ಪ್ರತಿನಿಧಿಯಾಗಿದ್ದ ಯಲ್ಲಣ್ಣ ತಿಮ್ಮಣ್ಣ ಮಾಳೂರ ಎನ್ನುವವರನ್ನು ಸುರಪುರ ಅಂಚೆ ಉಪ ವಿಭಾಗದ ಅಧಿಕಾರಿಗಳು ಅಮಾನತುಗೊಳಿಸಿದ್ದು,ಇಂದು ಯಲ್ಲಣ್ಣ ತುಂಬಾ ತೊಂದರೆಯಲ್ಲಿದ್ದಾರೆ.ಮರು ಕರ್ತವ್ಯಕ್ಕೆ ನಿಯೋಜನೆ ಮಾಡಿಕೊಳ್ಳಲು ಅನೇಕ ಬಾರಿ ಮನವಿ ಸಲ್ಲಿಸಿದರು ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ನೇತೃತ್ವದಲ್ಲಿ ನಗರದ ಅಂಚೆ ಉಪ ವಿಭಾಗದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೆಂಕೋಬ ದೊರೆ,ಕೂಡಲೇ ಹೋತಪೇಟದ ಅಂಚೆ ಪ್ರತಿನಿಧಿ ಯಲ್ಲಣ್ಣನನ್ನು ಮರು ಕರ್ತವ್ಯಕ್ಕೆ ನಿಯೋಜನೆ ಮಾಡಬೇಕು ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ನಂತರ ಹೋರಾಟದ ಸ್ಥಳಕ್ಕೆ ಅಂಚೆ ಇಲಾಖೆ ಅಧಿಕಾರಿಗಳು ಆಗಮಿಸಿ ಯಲ್ಲಣ್ಣನ ಮರು ನೇಮಕಕ್ಕೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಮನವಿ ಸಲ್ಲಿಸಿ ಪ್ರತಿಭಟನೆ ನಿಲ್ಲಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ರಮೇಶಗೌಡ,ತಾಲುಕು ಅಧ್ಯಕ್ಷ ಹಣಮಂತ್ರಾಯ,ದವಲಸಾಬ,ಕೇಶವ ನಾಯಕ,ಮೌನೇಶ,ಹಣಮಂತ್ರಾಯ ಬಿಚಗತ್ತಿ,ವೆಂಕಟೇಶ,ನಂದಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.