ರಾಯಚೂರು: ಕಾರ್ಮಿಕ ಚಳುವಳಿಗಳನ್ನು ಸಫಲಗೊಳಿಸಿಕೊಳ್ಳಲು ವರ್ಗ ಸಂಘರ್ಷವನ್ನು ತೀವ್ರಗೊಳಿಸಿಕೊಳ್ಳಲು ಮುಂದಾಗಬೇಕಿದೆ ಎಂದು ಟಿಯುಸಿಐ ಪ್ರಧಾನ ಕಾರ್ಯದರ್ಶಿ ಆರ್.ಮಾನಸಯ್ಯ ಕಾರ್ಯಕರ್ತರಿಗೆ ಕರೆ ನೀಡಿದರು.
ಅವರಿಂದು ರಾಯಚೂರು ಆಶಾಪೂರ ರಸ್ತೆಯ ವಿಜಯನಗರ ಕಾಲೋನಿಯಲ್ಲಿ ಆರಂಭಿಸಿದ ಟಿಯುಸಿಐ ರಾಜ್ಯ ಕಾರ್ಯಾಲಯ “ಮಾರ್ಕ್ಸ್ ಭವನ” ಉದ್ಘಾಟಿಸಿ ಮಾತನಾಡಿದರು. ರಾಜ್ಯ ಕಾರ್ಯಾಲಯವನ್ನು ನಿರಂತರಗೊಳಿಸಿಕೊಂಡು ಕ್ರೀಯಾಶೀಲತೆಯೊಂದಿಗೆ ಮುನ್ನಡೆಸಿ ಎಲ್ಲಾ ವೃತ್ತಿ ಸಂಘಗಳೊಂದಿಗೆ ಕಾರ್ಮಿಕ ವರ್ಗದ ಹೋರಾಟಗಳನ್ನು ಗಟ್ಟಿಗೊಳಿಸಿಕೊಳ್ಳಲು ಕರೆ ನೀಡಿದರು.
ರಾಜ್ಯ ಉಪಾಧ್ಯಕ್ಷರಾದ, ಎಂ.ಗಂಗಾಧರ ಮಾತನಾಡಿ ದುಡಿಯುವ ವರ್ಗದ ಸಿದ್ದಾಂತದ ಕೊಡುಗೆ ನೀಡಿದ ಕಾರ್ಲ್ ಮಾರ್ಕ್ಸ್ ರ ಹೆಸರನ್ನು ಇಟ್ಟುಕೊಂಡು ಆರಂಭಿಸಿದ ಮಾರ್ಕ್ಸ್ ಭವನದ ಮೂಲಕ ರಾಜ್ಯಾದ್ಯಂತ ಕಾರ್ಮಿಕ ಚಳುವಳಿಗಳನ್ನು ಮುನ್ನಡೆಸಲು ಸನ್ನದ್ದರಾಗೋಣ ಎಂದು ಕರೆ ನೀಡಿದರು.
ರಾಜ್ಯ ಖಜಾಂಚಿ ಡಿ.ಕೆ.ಲಿಂಗಸೂಗೂರು ಮಾತನಾಡಿ ಮಾರ್ಕ್ಸ್ ಭವನದ ನಿಯಮಗಳನ್ನು ಪಾಲಿಸುತ್ತಾ ಅಧ್ಯಯನಗಳೊಂದಿಗೆ ನಿರಂತರತೆಯನ್ನು ಕಾಯ್ದುಕೊಂಡು ವರ್ಗ ಚಳುವಳಿಗೆ ಹೆಗಲೊಡ್ಡೋಣ ಎಂದರು.
ರಾಜ್ಯ ಕಾರ್ಯದರ್ಶಿ ಚಿನ್ನಪ್ಪ ಕೊಟ್ರಿಕಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸಮಾರೋಪವನ್ನು ನೇರವೇರಿಸಿದರು. ಜಿಲ್ಲಾಧ್ಯಕ್ಷರಾದ, ಜಿ.ಅಮರೇಶ, ರಾಜ್ಯ ಸಮಿತಿಯ ದೇವಮ್ಮ, ನಸ್ರೀನಾ ಬೇಗಂ, ತಿಪ್ಪರಾಜ, ಅಜೀಜ್ ಜಾಗೀರದಾರ, ನಿರಂಜನ, ಬಸವರಾಜ, ಎಚ್.ಆರ್.ಹೊಸಮನಿ, ಲಕ್ಷ್ಮಣ ಮುಂತಾದ ಮುಖಂಡರೊಂದಿಗೆ ಜಿಲ್ಲೆಯ ನೂರಾರು ಕಾರ್ಮಿಕರು ಮಾರ್ಕ್ಸ್ ಭವನ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು. ಆರಂಭದಲ್ಲಿ ಟಿಯುಸಿಐ ಪ್ರಧಾನ ಕಾರ್ಯದರ್ಶಿ ಆರ್.ಮಾನಸಯ್ಯ ದ್ವಜಾರೋಹಣ ನೆರವೇರಿಸಿದರು.