ಎಲ್ಲ ರೀತಿಯ ಸಮಸ್ಯೆಗಳಿಗೆ ರಾಷ್ಟ್ರಕವಿ ಕುವೆಂಪು ಸಾಹಿತ್ಯದಲ್ಲಿ ಪರಿಹಾರವಿದೆ: ಎಂ.ಎನ್.ನಾಗರಾಜ

0
85

ಕಲಬುರಗಿ: ಕನ್ನಡಕ್ಕೆ ಹೊಸತನ, ಹುರುಪು ತುಂಬಿ ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರ ಸಾಹಿತ್ಯ, ಕವನ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ. ಅವರ ಸಾಹಿತ್ಯದಲ್ಲಿ ಮಾನವತೆ, ದೇಶಪ್ರೇಮ, ವೈಚಾರಿಕತೆ, ಪರಿಸರ ಪ್ರೇಮ ಎದ್ದು ಕಾಣುತ್ತದೆ. ನಮ್ಮ ಇಂದಿನ ಪ್ರಸ್ತುತ ಕಾಲಘಟ್ಟದ ಎಲ್ಲ ರೀತಿಯ ಸಮಸ್ಯೆಗಳಿಗೆ ರಾಷ್ಟ್ರಕವಿ ಕುವೆಂಪು ಸಾಹಿತ್ಯದಲ್ಲಿ ಪರಿಹಾರವಿದೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ ಹೇಳಿದರು.

ನಗರದ ಜೇವರ್ಗಿ ಕಾಲೋನಿಯ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಗಣದಲ್ಲಿ ಇಲ್ಲಿನ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ಮಂಗಳವಾರ ಏರ್ಪಡಿಸಿದ ಕಳಶಪ್ರಾಯದ ಕುವೆಂಪು ಎಂಬ ಜಗದ ಕವಿಗೆ ಜನ್ಮಜೋಗುಳ ಎನ್ನುವ ಸರಣಿ ಸಾಹಿತ್ಯದ ಪಾಠಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡ ಅತ್ಯುತ್ತಮ ಭಾಷೆ, ಕುವೆಂಪು ಕನ್ನಡಕ್ಕೆ ಮೇರು ಕೀರ್ತಿ ತಂದ ಪ್ರತಿಭೆ. ಅವರದ್ದು ಅಪ್ರತಿಮ ವ್ಯಕ್ತಿತ್ವ, ಅವರು ಕನ್ನಡಕ್ಕೆ ಮಾತ್ರವಲ್ಲದೇ ವಿಶ್ವದ ಆಸ್ತಿಯಾಗಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದ ಅವರು, ಈ ನಿಟ್ಟಿನಲ್ಲಿ ಅಕಾಡೆಮಿ ಉತ್ತಮ ಕಾರ್ಯ ಕೈಗೊಂಡಿದೆ ಎಂದು ಮನದುಂಬಿ ಹೇಳಿದರು.

Contact Your\'s Advertisement; 9902492681

ಉಪನ್ಯಾಸ ನೀಡಿದ ಸಾಹಿತಿ-ಪತ್ರಕರ್ತ ಜಗನ್ನಾಥ ತರನಳ್ಳಿ ಸೇಡಂ, ಜಗತ್ತಿಗೆ ಹೊಸ ಬೆಳಕು ನೀಡಿದ ವಿಶ್ವಗುರು ಬಸವಣ್ಣ ಹಾಗೂ ರಾಷ್ಟ್ರಕವಿ ಕುವೆಂಪು ವಿಚಾರಧಾರೆಯಲ್ಲಿ ಸಾಮ್ಯತೆ ಇದೆ. ಇವರಿಬ್ಬರೂ ಜಾತಿ, ಧರ್ಮ, ಭಾಷೆ, ವರ್ಣ ಮೀರಿದ ವಿಶ್ವ ಮಾನವ ಪರಿಕಲ್ಪನೆ ಕಟ್ಟಿಕೊಟ್ಟಿದ್ದಾರೆ. ಇವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಇಡೀ ವಿಶ್ವವೇ ಸರ್ವಜನಾಂಗದ ಶಾಂತಿಯ ತೋಟವಾಗುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಶೂದ್ರ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿ, ಕನ್ನಡದ ಅಸ್ಮಿತೆಯನ್ನು ನಮ್ಮೆಲ್ಲರಿಗೆ ತೋರಿಸಿಕೊಟ್ಟ ನಾಡಿನ ಶ್ರೇಷ್ಠ ಕವಿ ಕುವೆಂಪು ಅವರಾಗಿದ್ದಾರೆ. ಇಲ್ಲಿ ಯಾರೂ ಮೇಲಲ್ಲ, ಕೀಳಲ್ಲ, ಎಲ್ಲರೂ ಸಮಾನರೆಂಬ ಭಾವನೆಯನ್ನು ಕುವೆಂಪುರರವರ ಕೃತಿಗಳಲ್ಲಿ ಕಾಣಬಹುದಾಗಿದೆ. ಅಂಥ ಶ್ರೇಷ್ಠ ಕನ್ನಡ ಸಾಹಿತ್ಯದ ಋಷಿ ಕುವೆಂಪು ಅವರ ಬರಹದ ಪರಿಚಯವನ್ನು ಇಂದಿನ ಯುವ ಸಮೂಹಕ್ಕೆ ಮಾಡಿಕೊಡುವ ಮೂಲಕ ಸತ್ಪ್ರಜೆಗಳನ್ನಾಗಿ ಮಾಡಲಾಗುತ್ತಿದೆ ಎಂದರು.

ಕಾಲೇಜಿನ ಪ್ರಾಚಾರ್ಯ ಡಾ.ಸುಜಾತಾ ಎಂ.ಬಂಡೇಶರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಪ್ರೇಮಿ ಜಗದೀಶ ಮರಪಳ್ಳಿ ಚಿಮ್ಮನಚೋಡ, ಹಿರಿಯ ಸಾಹಿತಿ ಭೀಮಣ್ಣಾ ಬೋನಾಳ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಡಾ.ಸಂದೀಪ ಬಿ., ಹಿರಿಯ ಲೇಖಕಿ ಶಕುಂತಲಾ ಪಾಟೀಲ ಜಾವಳಿ, ಸಂಗೀತಾ ಕಲಾವಿದೆ ಗಿರೀಜಾ ಕರ್ಪೂರ ಮಾತನಾಡಿದರು.

ಉಪನ್ಯಾಸಕರಾದ ಸವಿತಾ ನಾಸಿ ಮಾಡಿಯಾಳ, ನಸೀಮ್ ಬಾನು, ದೇವೇಂದ್ರಪ್ಪ ಅವರನ್ನು ಸಹ ಇದೇ ಸಂದರ್ಭದಲ್ಲಿ ವಿಶೇಷವಾಗಿ ಗೌರವಿಸಲಾಯಿತು.

ಪ್ರಮುಖರಾದ ಎಸ್.ಎಂ.ಪಟ್ಟಣಕರ್, ಶಿವಾನಂದ ಮಠಪತಿ, ಶ್ರೀಕಾಂತ ಪಾಟೀಲ ತಿಳಗೂಳ, ನಾಗಲಿಂಗಯ್ಯಾ ಮಠಪತಿ, ಸುರೇಶ ಡಿ.ಬಡಿಗೇರ, ಅಣಿವೀರಯ್ಯಾ ಸ್ವಾಮಿ ಕೋಡ್ಲಿ, ವಿಜಯಲಕ್ಷ್ಮೀ ಅಲ್ದಿ, ಶರಣಪ್ಪ, ಶ್ರೀದೇವಿ ಅನಂತಪುರ , ಜಮೀರ್ ಅಹ್ಮದ್, ಸುನೀತಾ, ಪುಷ್ಪಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here