ಸಮಾಜದಲ್ಲಿ ಬಸವ ಪ್ರಜ್ಞೆ ನೆಲೆಗೊಳ್ಳುವುದು ಇಂದಿನ ಅಗತ್ಯ: ಸತ್ಯಂಪೇಟೆ

0
189

ಜೇವರ್ಗಿ: ಸ್ವಾತಂತ್ರ್ಯ, ಸಮಾನತೆ, ಜ್ಞಾನ, ತಿಳಿವಳಿಕೆ ಎನ್ನುವುದು ಕೇವಲ ಕೆಲವರ ಸ್ವತ್ತಾಗಿರುವುದನ್ನು ಒಡೆದು ಹಾಕಿ, ಧರ್ಮ, ದೇವರು, ನಂಬಿಕೆ ಆಚರಣೆಗಳ ಬಗೆಗೆ ನಿಜವಾದ ಅರಿವು ಮೂಡಿಸಿದ ಬಸವಣ್ಣನವರು ಜಾತಿಭೇದ, ವರ್ಣಭೇದ, ವರ್ಗಭೇದ, ಮೇಲ್ವರ್ಗ-ಕೆಳವರ್ಗ ಎಂಬ ತರತಮ ಭಾವನೆಯನ್ನು ಅಳಸಿ ಹಾಕಿ ಸಮಾನತೆಯನ್ನು ತಂದುಕೊಟ್ಟರು. ಎಂದು ಪತ್ರಕರ್ತ-ಸಾಹಿತಿ ಶಿವರಂಜನ್ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬಸವ ಕೇಂದ್ರದ ವತಿಯಿಂದ ಭುಧವಾರ ರಾತ್ರಿ ಆಯೋಜಿಸಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಬಸವ ಪ್ರಜ್ಞೆ ಎಂಬ ವಿಷಯ ಕುರಿತು ವಿಶೇಷ ಅನುಭಾವ ನೀಡಿದ ಅವರು, ಬಸವಣ್ಣನವರು ಏಕದೇವೋಪಾಸನೆ, ಕಾಯಕ-ದಾಸೋಹ ಎಂಬ ಹೊಸ ಪರಿಕಲ್ಪನೆಯನ್ನು ಹುಟ್ಟು ಹಾಕಿದರು ಮಾತ್ರವಲ್ಲ ಸಮಾಜೋದ್ಧಾರ್ಮಿಕ ಅನುಭವ ಮಂಟಪವನ್ನು ಸ್ಥಾಪಿಸಿದರು ಎಂದು ತಿಳಿಸಿದರು.

Contact Your\'s Advertisement; 9902492681

ಧರ್ಮದ ಹೆಸರಿನಲ್ಲಿ, ದೇವರ ಹೆಸರಿನಲ್ಲಿ ಕೋಮಿನ ಹೆಸರಿನಲ್ಲಿ ದೇಶ ಆಳುವ ಈ ಹೊತ್ತಿನಲ್ಲಿ ಹಿಂದೂ ರಾಷ್ಟ್ರಕಟ್ಟುವ ಭರದಲ್ಲಿ ಸಮಜದಲ್ಲಿ ತ್ವೇಷಮಯ ವಾತಾವರಣ ಉಂಟಾಗುತ್ತಿದ್ದು, ಇದೇವೇಳೆಗೆ ಇಸ್ಲಾಮಿಕ್ ರಾಷ್ಟ್ರ ಕಟ್ಟುವ ಹುಚ್ಚುತನಕ್ಕೆ ಬಸವಣ್ಣನವರ “ಇವನಾರವ ಇವನಾರವ ಎಂದೆನಿಸದೆ, ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯ” ಎಂಬ ವಚನ ಬಹಳ ಪ್ರಸ್ತುತವಾಗಿದೆ. ಹೀಗಾಗಿ ಸಮಾಜದಲ್ಲಿ ಬಸವ ಪಜ್ಞೆ ಬಿತ್ತುವುದು, ಬೆಳೆಸುವುದು ಬಹಳ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ದಂಡಾಧಿಕಾರಿ ಸಿದ್ದರಾಯ ಭೋಸಗಿ ಮಾತನಾಡಿ, ಬಸವಣ್ಣನವರ ನೇತೃತ್ವದಲ್ಲಿ ನಡೆದ ವಚನ ಚಳವಳಿ ಇಡೀ ಸಮುದಾಯದ ಚಳವಳಿಯಾಗಿತ್ತು. ಇದು ವಿಶ್ವದ ಮೊದಲ ಮಾನವೀಯ ಚಳವಳಿ ಎಂದು ಹೇಳಬಹುದಾಗಿದ್ದು, ಮಹಿಳೆಯರಿಗೆ, ದಲಿತರಿಗೆ, ಯುವಕರಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟ ವಚನಕಾರರು ಸಮಾಜಿಕ ನ್ಯಾಯದ ಹರಿಕಾರರಾಗಿದ್ದರು ಎಂದು ಅವರು ತಿಳಿಸಿದರು. ಬಸವ ಎಂಬುದು ಕೇವಲ ಹೆಸರಲ್ಲ. ಅದೊಂದು ಸಿದ್ಧಾಂತ. ಬಸವ ಎಂಬ ಮೂರಕ್ಷರ ನೆಲೆಗೊಂಡರೆ ಅಸಾಧ್ಯವೆಲ್ಲವೂ ಸಾಧ್ಯವಾಗಲು ಸಾಧ್ಯವಿದ್ದು ಬಸವ ಪ್ರಜ್ಞೆ ವಿಸ್ತರಿಸುವುದು ಇಂದು ಬಹಳ ಅಗತ್ಯವಾಗಿದೆ ಎಂದು ಅವರು ವಿವರಿಸಿದರು.

ಅಡತ್ ವ್ಯಾಪರಿ ಬಸವರಾಜ ಸಾಸಬಾಳ ಮುಖ್ಯ ಅತಿಥಿಯಾಗಿದ್ದರ. ಕಾರ್ಯಕ್ರಮ ದಾಸೋಹಿ ನಾನಾಗೌಡ ಪಾಟೀಲ, ಬಸವಕೇಂದ್ರದ ಶರಣಬಸವ ಕಲ್ಲಾ, ತಾಲ್ಲೂಕು ಕಸಾಪ ಅಧ್ಯಕ್ಷ ಶಿವನಗೌಡ ಹಂಗರಗಿ ಇದ್ದರು. ಪಂಡಿತ ಜಿ. ನೆಲ್ಲಗಿ ನಿರೂಪಿಸಿ ವಂದಿಸಿದರು.

ಇದೇವೇಳೆಯಲ್ಲಿ ಕಲಬುರಗಿ ಬಸವಸೇವಾ ಪ್ರತಿಷ್ಠಾನ ಹಾಗೂ ನೀಲಮ್ಮನ ಬಳಗದ ಸದಸ್ಯೆರಾದ ಡಾ. ಶಿವಲೀಲಾ ಚೆಟ್ನಳ್ಳಿ, ಜ್ಯೋತಿ ಕಾಡಾದಿ, ಕಮಲಾಬಾಯಿ ಮುಂತಾದವರು ಆಗಮಿಸಿ ಬೀದರ್‌ನ ಬಸವಗಿರಿಯ ಅಕ್ಕ ಅನ್ನಪೂರ್ಣ ತಾಯಿ ನೇತೃತ್ವದಲ್ಲಿ ಫೆಬ್ರವರಿ ೭,೮ ಮತ್ತು ೯ರಂದು ನಡೆಯಲಿರುವ ವಚನ ವಿಜಯೋತ್ಸವ ಕಾರ್ಯಕ್ರಮಕ್ಕೆ ಶರಣ ಬಂಧುಗಳನ್ನು ಆಹ್ವಾನಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here