ಹೆಚ್.ಕೆ.ಆರ್.ಡಿ.ಬಿ. ಕಾಮಗಾರಿಗಳು ಜೂನ್ ಅಂತ್ಯಕ್ಕೆ ಪೂರ್ಣಗೊಳಿಸಲು ಗಡುವು

0
62

ಕಲಬುರಗಿ: ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 2013-2014ನೇ ಸಾಲಿನಿಂದ 2017-2018ನೇ ಸಾಲಿನ ವರೆಗೆ ಅನುಮೋದನೆ ನೀಡಿರುವ ಎಲ್ಲಾ ಕಾಮಗಾರಿಗಳನ್ನು ಬರುವ ಜೂನ್-2019ರ ಅಂತ್ಯದವರೆಗೆ ಪೂರ್ಣಗೊಳಿಸುವಂತೆ ಅನುಷ್ಠಾನ ಏಜೆನ್ಸಿಗಳಿಗೆ ಮಂಡಳಿಯ ಕಾರ್ಯದರ್ಶಿ ಸುಬೋಧ ಯಾದವ ಗಡುವು ನೀಡಿದ್ದಾರೆ.

ಗುರುವಾರ ಕಲಬುರಗಿಯ ಪ್ರಾದೇಶಿಕ ಆಯುಕ್ತರ ಸಭಾಂಗಣದಲ್ಲಿ ಹೈ.ಕ.ಭಾಗದ ಕಲಬುರಗಿ, ಬೀದರ, ಯಾದಗಿರಿ, ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಮಂಡಳಿಯ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿರುವ ವಿವಿಧ ಅನುಷ್ಠಾನ ಏಜೆನ್ಸಿ ಅಧಿಕಾರಿಗಳ ಸಭೆ ನಡೆಸಿದ ಅವರು, ಯಾವುದೇ ಕಾರಣಕ್ಕೂ ನಿಧಾನಗತಿ ಪ್ರಗತಿ ಸಹಿಸುವುದಿಲ್ಲ. ಇನ್ನು ೨೦೧೮-೧೯ನೇ ಸಾಲಿನಲ್ಲಿ ಪ್ರಾಯೋಜನೆ ಮಾಡಿಕೊಂಡಿರುವ ಕಾಮಗಾರಿಗಳಲ್ಲಿ ಪ್ರಗತಿ ಹಂತದಲ್ಲಿರುವ ಎಲ್ಲಾ ಕಾಮಗಾರಿಗಳು ಸಹ ಜೂನ್ ಅಂತ್ಯಕ್ಕೆ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

Contact Your\'s Advertisement; 9902492681

ಮಂಡಳಿಯು ಪ್ರತಿ ಕಾಮಗಾರಿಗೆ ಪ್ರತ್ಯೇಕವಾಗಿ ಅನುದಾನವನ್ನು ಆಯಾ ಅನುಷ್ಠಾನ ಏಜೆನ್ಸಿಗಳಿಗೆ ಬಿಡುಗಡೆ ಮಾಡಿದೆ. ಆದರೆ ಅನುಷ್ಠಾನ ಏಜೆನ್ಸಿಗಳು ಒಂದು ಕಾಮಗಾರಿಗೆ ಬಿಡುಗಡೆ ಮಾಡಿದ ಮೊತ್ತ ಇನ್ನೊಂದು ಕಾಮಗಾರಿಗಳಿಗೆ ಬಳಸುತ್ತಿರುವುದು ಮಂಡಳಿಯ ಗಮನಕ್ಕೆ ಬಂದಿದ್ದು, ಇದು ಸರಿಯಾದ ಕ್ರಮವಲ್ಲ. ಇಂತಹ ನಿಗದಿಪಡಿಸಿದ ಕಾಮಗಾರಿಗಳ ಬದಲಾಗಿ ಬೇರೊಂದು ಕಾಮಗಾರಿಯ ಮೊತ್ತ ಬಳಸುತ್ತಿರುವುದಕ್ಕೆ ಸೂಕ್ತ ಕಾರಣದೊಂದಿಗೆ ಪ್ರತಿ ಕಾಮಗಾರಿವಾರು ವರದಿಯನ್ನು ಮೇ ೧೩ರೊಳಗೆ ಮಂಡಳಿಗೆ ಸಲ್ಲಿಸಬೇಕು. ಒಂದೇ ಹಂತದಲ್ಲಿ ಈ ಎಲ್ಲಾ ಕಾಮಗಾರಿಗಳ ಆರ್ಥಿಕ ಲೆಕ್ಕವನ್ನು ಕ್ರಮಬದ್ಧಗೊಳಿಸಲಾಗುವುದು. ಇನ್ನು ಮುಂದೆ ಆಯಾ ಕಾಮಗಾರಿಗಳಿಗೆ ಹಂಚಿಕೆ ಮಾಡಲಾದ ಅನುದಾನವನ್ನು ಅವುಗಳಿಗೆ ಮಾತ್ರ ಬಳಸಬೇಕು ಇಲ್ಲದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಹಿಂದೆ ಮಂಡಳಿಯ ಕಾಮಗಾರಿಗಳ ಆರ್ಥಿಕ ವೆಚ್ಚದ ಮಾಹಿತಿಯನ್ನು ಮಂಡಳಿಯ ಅಂತರ್ಜಾಲದಲ್ಲಿ ಅಪಲೋಡ್ ಮಾಡಲು ಅವಕಾಶ ನೀಡಲಾಗಿತ್ತು. ಲೆಕ್ಕಕ್ಕೆ ಹೊಂದಾಣಿಕೆಯಾದಂತೆ ಅನುಷ್ಠಾನ ಏಜೆನ್ಸಿಗಳು ತಪ್ಪಾಗಿ ಮಾಹಿತಿ ಒದಗಿಸುತ್ತಿರುವುದರಿಂದ ಆರ್ಥಿಕ ವೆಚ್ಚದ ಮಾಹಿತಿಯನ್ನು ಅಪ್‌ಲೋಡ್ ಮಾಡುವ ವ್ಯವಸ್ಥೆಯನ್ನು ತೆಗದುಹಾಕಲಾಗಿದೆ. ಇನ್ನು ಮುಂದೆ ಅನುಷ್ಟಾನ ಏಜೆನ್ಸಿಗಳು ಕೇವಲ ಭೌತಿಕ ಪ್ರಗತಿ ಮಾತ್ರ ಅಪಲೋಡ್ ಮಾಡಬಹುದಾಗಿದೆ. ಕಲಬುರಗಿಯಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಪ್ರಗತಿ ಅರಿಯಲು ಇತ್ತೀಚೆಗೆ ಮಂಡಳಿ ಸಿಬ್ಬಂದಿಯಿಂದ ಪರಿಶೀಲನೆ ಮಾಡಲಾಗಿದ್ದು, ಮಂಡಳಿ ಸಿಬ್ಬಂದಿ ಒದಗಿಸಿರುವ ಮಾಹಿತಿ ಹಾಗೂ ಅನುಷ್ಠಾನ ಏಜೆನ್ಸಿಗಳು ನೀಡುವ ಮಾಹಿತಿ ಒಂದಕ್ಕೊಂದು ತಾಳೆಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಕೂಡಲೆ ಅಂತರ್ಜಾಲದಲ್ಲಿ ಇದನ್ನು ಸರಿಪಡಿಸಬೇಕು ಎಂದು ಅನುಷ್ಠಾನ ಏಜೆನ್ಸಿಗಳಿಗೆ ನಿರ್ದೇಶನ ನೀಡಿದರು.

ಕೋಟ್ಯಾಂತರ ಹಣ ಖರ್ಚು ಮಾಡುತ್ತಿದೆ, ಬದ್ಧತೆಯಿಂದ ಕಾರ್ಯನಿರ್ವಹಿಸಿ:- ಹೈ.ಕ.ಭಾಗದ ಅಭಿವೃದ್ಧಿಗೆ ಇಲ್ಲಿನ ಜನರ ಬದುಕು ಹಸನಗೊಳಿಸಲು ಸರ್ಕಾರವು ಮಂಡಳಿಯಿಂದ ಕೋಟ್ಯಾಂತರ ಹಣ ಇಲ್ಲಿ ಖರ್ಚು ಮಾಡಲಾಗುತ್ತಿದೆ. ಈ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕಾಗಿದೆ. ಸಣ್ಣ-ಪುಟ್ಟ ಸಮಸ್ಯೆಗಳಿಗೂ ಅಧಿಕಾರಿಗಳು ಮಂಡಳಿಯತ್ತ ಮುಖ ಮಾಡುವುದು ಸರಿಯಲ್ಲ. ಮಂಡಳಿಯು ಅನುದಾನ ಒದಗಿಸುತ್ತದೆ ಹೊರತು ಎಲ್ಲವನ್ನು ಮೇಲ್ವಿಚಾರಣೆ ಮಾಡಲು ಸಾಧ್ಯವಿಲ್ಲ. ಕಾಮಗಾರಿ ಅನುಷ್ಠಾನ ಸಂಬಂಧ ಸ್ಥಳೀಯವಾಗಿ ಸಮಸ್ಯೆಗಳು ತಲೆದೋರಿದಲ್ಲ್ಲಿ ಸ್ಥಳೀಯ ಆಡಳಿತದ ಸಹಯೋಗದೊಂದಿಗೆ ಬಗೆಹರಿಸಿಕೊಂಡು ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಅವಕಾಶ ಮಾಡಿಕೊಟ್ಟಲ್ಲಿ ಮಾತ್ರ ಸಾರ್ವಜನಿಕರ ಹಣ ವ್ಯಯಕ್ಕೆ ಅರ್ಥ ಬರುತ್ತದೆ ಎಂದರು.

ಸಭೆಯಲ್ಲಿ ಮಂಡಳಿಯ ಉಪ ಕಾರ್ಯದರ್ಶಿ ಡಾ.ಬಿ.ಸುಶೀಲಾ, ಅಧೀಕ್ಷಕ ಅಭಿಯಂತ ತಿಪ್ಪೇಶ, ಹೈ.ಕ.ಭಾಗದ ಎಲ್ಲಾ ಜಿಲ್ಲೆಯ ಕೆ.ಆರ್.ಐ.ಡಿ.ಎಲ್. ನಿರ್ಮಿತಿ ಕೇಂದ್ರ ಹಾಗೂ ಇನ್ನೀತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here