‘ಬದುಕು’ ಬರೆದ ಬದುಕು ಮೌನಕ್ಕೆ ಜಾರಿದೆ…
ಮೊಬೈಲ್ ನಲ್ಲಿ ಮೆಸೇಜ್!
ಗೀತಾ ನಾಗಭೂಷಣ ಇನ್ನಿಲ್ಲ!!!
ನಂಬಲಾಗದಿದ್ದರೂ ನಂಬಲೇ ಬೇಕಾದ ಈ ಸಾವಿನ ಸುದ್ದಿ.
ಎಷ್ಟು ವಿಚಿತ್ರ! ಪ್ರತಿಯೊಬ್ಬ ಮನುಷ್ಯ ಸಾಯುತ್ತಾನೆ ಎಂದು ಗೊತ್ತಿದ್ದರೂ, ಈ ಸುದ್ದಿ ಕೇಳಿದಾಗ ಶಾಕ್ ಆಗಿದ್ದಂತೂ ಸತ್ಯ. ಏನೊ ಕಸಿವಿಸಿ. ಹೇಳಲಾಗದ ತಳಮಳ…
ರಾತ್ರಿ ಹನ್ನೊಂದು ಗಂಟೆಗೆ ಸರಿಯಾಗಿ ಪರಿಚಿತರೊಬ್ಬರು, ದಿನ ಪತ್ರಿಕೆಯೊಂದರ ತುಣುಕನ್ನು ಫೋಟೊ ತೆಗೆದು ಕಳಿಸಿದ್ದರು. ಓದಿ ಆಘಾತ. ಗೀತಾ ಮೇಡಮ್ ಅವರು ಇಹಲೋಕ ತ್ಯಜಿಸಿದ ವಿಷಯ ಆ ಪೇಪರ್ ನಲ್ಲಿ ಇತ್ತು.
‘ಇದು ನಿಜಾನಾ?’ ಎಂದು ಮೆಸೇಜ್ ಹಾಕಿದೆ.
ಇದು ಸುಳ್ಳಾಗಲೆಂದು ಮನ ಹಂಬಲಿಸಿತು. ಆದರೆ ಅದು ಹೇಗೆ ಸಾಧ್ಯ? ಕೆಲವೊಮ್ಮೆ ಮನಸು ಹೀಗೇ ಹಟ ಮಾಡುತ್ತದೆ. ನಮಗೆ ಬೇಡ ಎನಿಸಿದ್ದನ್ನು ಈ ಮನಸು ಒಪ್ಪಿಕೊಳ್ಳುವುದೇ ಇಲ್ಲ.
ಆದರೆ ವಾಸ್ತವ ಕಠೋರ ಅಲ್ಲವೆ?
ಇದನ್ನು ನಂಬಲು ಕಷ್ಟವಾಗಿದ್ದಕ್ಕೆ ಕಾರಣವೂ ಇದೆ. ಮೊನ್ನೆ ತಾನೆ ಅಂದರೆ 22-6-2020 ರಂದು ಮೇಡಮ್ ಅವರೊಂದಿಗೆ 8 ನಿಮಿಷ 56 ಸೆಕೆಂಡ್ ನಷ್ಟು ಸಮಯ ಮಾತನಾಡಿದ್ದೆ.
ಇತ್ತೀಚೆಗೆ ಚಂದ್ರಮ ವಾಹಿನಿಯವರು, ನನ್ನನ್ನು ಸಂಪರ್ಕಿಸಿ, ಗೀತಾ ನಾಗಭೂಷಣ ಅವರ ಸಂದರ್ಶನ ಮಾಡುವಂತೆ ತಿಳಿಸಿದ್ದರು.
ಅದಾದ ಎರಡು ದಿನಗಳ ನಂತರ ‘ಕಲ್ಯಾಣ ಕರ್ನಾಟಕದ ಪ್ರಾತಿನಿಧಿಕ ಕಥಾಸಂಕಲನ’ಕ್ಕಾಗಿ ಅವರದೊಂದು ಕತೆ ಆಯ್ಕೆ ಮಾಡುವುದಿತ್ತು.
ಹೀಗೆ ಎರಡು ಕಾರಣಗಳಿಂದಾಗಿ ಅವರಿಗೆ ಕರೆ ಮಾಡಿದೆ. ಅವರು ಸಿಕ್ಕಾಗಲೆಲ್ಲಾ ನನ್ನನ್ನು ಚೆನ್ನಾಗಿ ಗುರುತಿಸಿ ಮಾತನಾಡುತ್ತಿದ್ದರು. ಅದೇ ಖುಶಿ ಕೊಡುತ್ತಿತ್ತು. ನಮ್ಮ ಭಾಗದ ಹಿರಿಯ ಲೇಖಕಿ, ನನ್ನಂತಹ ಕಿರಿಯಳನ್ನು ಗುರುತಿಸುತ್ತಾರಲ್ಲ ಎನ್ನುವ ಖುಶಿ.
![](https://emedialine.com/wp-content/uploads/2020/06/Kavya-mahaganvakar.jpg)