ಸಂಗಣ್ಣ ಹೊಸಮನಿ ಸಾಹಿತ್ಯದಲ್ಲಿ ದುಡಿವ ಜನರ ಕಂಬನಿ

0
51

ವಾಡಿ: ಬಂಡಾಯ ಕವಿ ಸಂಗಣ್ಣ ಹೊಸಮನಿ ಅವರ ಸಾಹಿತ್ಯದ ಪ್ರತಿಯೊಂದು ಸಾಲಿನಲ್ಲಿ ಕೆಂಬಾವುಟದ ಕನವರಿಕೆ ಎದ್ದುಕಾಣುತ್ತದೆ. ದುಡಿಯುವ ಜನಗಳ ಕಷ್ಟದ ಕಂಬನಿಯೇ ಅವರ ಸಾಹಿತ್ಯವಾಗಿತ್ತು ಎಂದು ಸ್ಥಳೀಯ ಬರಹಗಾರ, ಪುರಸಭೆ ಸದಸ್ಯ ದೇವಿಂದ್ರ ಕರದಳ್ಳಿ ಹೇಳಿದರು.

ಸಂಚಲನ ಸಾಹಿತ್ಯ ವೇದಿಕೆ, ಆವಿಷ್ಕಾರ ಪ್ರಗತಿಪರ ಸಾಂಸ್ಕøತಿಕ ವೇದಿಕೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ವಲಯ ಘಟಕಗಳು ಜಂಟಿಯಾಗಿ ಪಟ್ಟಣದ ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಗಲಿದ ಹಿರಿಯ ಬಂಡಾಯ ಕವಿ ಸಂಗಣ್ಣ ಹೊಸಮನಿ ಅವರ ನುಡಿ ನಮನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಎಡವಾದಿ ಚಿಂತನೆಗಳ ಹೋರಾಟಗಳಿಗೆ ಧನಸಹಾಯ ನೀಡುತ್ತಿದ್ದರು. ಹೋರಾಟ ನಿಲ್ಲದಿರಲಿ ಎಂದು ಎಚ್ಚರಿಸುತ್ತಿದ್ದರು. ‘ಚೀಲ ಹೊತ್ತ ಕತ್ತೆ’ ಮತ್ತು ‘ಅನಕ್ಷರತೆ ಅಳಿಯಲಿ’ ಎಂಬ ಸಾಮಾಜಿಕ ನಾಟಕ ಕೃತಿಗಳನ್ನು ಪ್ರಕಟಿಸಿ ರಂಗದ ಮೇಲೆ ಪ್ರದರ್ಶನಗೊಳ್ಳಲು ಶ್ರಮಿಸಿದ್ದರು. ಕ್ರಾಂತಿಯ ಕಿಡಿ, ಕ್ರಾಂತಿಯ ಕಹಳೆ, ಕವನ ಸಂಕಲನಗಳನ್ನು ನಾಡಿಗೆ ಅರ್ಪಿಸಿದ್ದಾರೆ. ಜೀವನದುದ್ದಕ್ಕೂ ದುಡಿಯುವ ವರ್ಗಕ್ಕಾಗಿ ಮರುಗಿದ ಸಾಹಿತಿ ಸಂಗಣ್ಣ ಹೊಸಮನಿ ಅವರು ಮಾಕ್ರ್ಸ್, ಲೆನಿನ್ ಹಾಗೂ ಕಾಮ್ರೇಡ್ ಶ್ರೀನಿವಾಸ ಗುಡಿ ಅವರನ್ನು ಆದರ್ಶವಾಗಿ ಸ್ವೀಕರಿಸಿದ್ದರು. ಅವರ ಅಗಲಿಕೆಯಿಂದ ಬಂಡಾಯ ಸಾಹಿತ್ಯ ಮತ್ತಷ್ಟು ಬಡವಾಯಿತು ಎಂದು ದೇವಿಂದ್ರ ಕರದಳ್ಳಿ ಭಾವುಕರಾದರು.

ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷದ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ ಮಾತನಾಡಿ, ಪ್ರಗತಿಪರ ಸಾಹಿತ್ಯದ ಕೊಂಡಿಗಳು ಒಂದೊಂದೇ ಕಳಚುತ್ತಿರುವುದು ಪ್ರಜಾತಾಂತ್ರಿಕ ನೆಲೆಗಟ್ಟಿನ ಜನಪರ ಚಳುವಳಿಗಳಿಗೆ ಆಗುವ ನಷ್ಟವೇ ಸರಿ. ಸಮಾಜವಾದದ ಕನಸು ಹೊತ್ತು ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದ ಸಾಹಿತಿ ಸಂಗಣ್ಣ ಹೊಸಮನಿ ಅವರು ಎಸ್‍ಯುಸಿಐ ಹೋರಾಟಗಳ ಬೆಂಬಲಿಗರಾಗಿದ್ದರು.

ದುಡಿಯುವ ಜನತೆ ಸಂಘಟಿತರಾಗಬೇಕು. ಮಾಲೀಕರ ಶೋಷಣೆ ಹಾಗೂ ದೌರ್ಜನ್ಯಗಳ ವಿರುದ್ಧ ಸಿಡಿದೇಳಬೇಕು ಎಂಬುದು ಅವರ ಹಂಬಲವಾಗಿತ್ತು ಎಂದು ಸ್ಮರಿಸಿದರು.
ಸಂಚಲನ ಸಾಹಿತ್ಯ ವೇದಿಗೆ ಅಧ್ಯಕ್ಷ ವಿಕ್ರಮ ನಿಂಬರ್ಗಾ ಹಾಗೂ ಆವಿಷ್ಕಾರ ಪ್ರಗತಿಪರ ಸಾಂಸ್ಕøತಿಕ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಮಡಿವಾಳಪ್ಪ ಹೇರೂರ ಮಾತನಾಡಿದರು.

ಕಸಾಪ ಅಧ್ಯಕ್ಷ ಖೇಮಲಿಂಗ ಬೆಳಮಗಿ ಮತ್ತು ಹರಿಶ್ಚಂದ್ರ ಕರಣಿಕ ಅವರು ಕವಿ ಸಂಗಣ್ಣ ಹೊಸಮನಿ ಅವರ ಸ್ವರಚಿತ ಕವಿತೆಗಳನ್ನು ವಾಚಿಸಿದರು. ಮಲ್ಲೇಶ ನಾಟೀಕಾರ, ಸಿದ್ದಯ್ಯಶಾಸ್ತ್ರೀ ನಂದೂರಮಠ, ದಯಾನಂದ ಖರ್ಜಗಿ, ವೀರಣ್ಣ ಯಾರಿ, ರವಿ ಕೋಳಕೂರ, ಬಸವರಾಜ ಜೋಗೂರ, ಮಹಾದೇವ ಕೌದಿ, ಶ್ರೀಕಂತ ಬಿರಾಳ, ಮಲಿಕಪಾಶಾ ಮೌಜನ್ ಪಾಲ್ಗೊಂಡಿದ್ದರು. ಶ್ರವಣಕುಮಾರ ಮೌಸಲಗಿ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here