ವಾಡಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿವಿಧ ಬಡಾವಣೆಗಳ ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಒಟ್ಟು ೧೦೫ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಯಿತು.
ಶನಿವಾರ ಮಕ್ಕಳೊಂದಿಗೆ ಆಸ್ಪತ್ರೆಗೆ ಆಗಮಿಸಿದ ಪೋಷಕರು, ಮಕ್ಕಳ ಅನಾರೋಗ್ಯ ಕುರಿತು ಚರ್ಚಿಸಿ ವೈದ್ಯರ ಸಲಹೆ ಪಡೆದುಕೊಂಡರು. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆಯಡಿ ಏರ್ಪಡಿಸಲಾಗಿದ್ದ ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಉದ್ದೇಶಿಸಿ ಮಾತನಾಡಿದ ಅಂಗನವಾಡಿ ಮೇಲ್ವಿಚಾರಕಿ ನಾಗಮ್ಮ ಸಂಗಶೆಟ್ಟಿ, ಬಡ ಕುಟುಂಬದ ಮಕ್ಕಳಿಗೆ ಪೌಷ್ಟಿಕತೆ ಕೊರತೆ ಕಾಡಬಾರದು ಎಂಬ ಕಾರಣಕ್ಕೆ ಗರ್ಭಿಣಿಯರ ಮತ್ತು ಮಕ್ಕಳ ಆರೋಗ್ಯ ತಪಾಸಣೆ ಕಡ್ಡಾಯವಾಗಿ ಮಾಡಲಾಗುತ್ತದೆ. ಹಾಲಿನ ಪೌಡರ್, ಮೊಟ್ಟೆ, ತರಕಾರಿ, ಹಣ್ಣು, ಕಾಳು ಸೇರಿದಂತೆ ಇತರ ಪೌಷ್ಟಿಕ ಆಹಾರ ನೀಡುವುದರಿಂದ ಮಕ್ಕಳು ಆರೋಗ್ಯವಾಗಿರಲು ಸಾಧ್ಯವಾಗುತ್ತದೆ. ಅಪೌಷ್ಠಿಕತೆ ಕಾರಣಕ್ಕೆ ಮಕ್ಕಳು ಅಸ್ವಸ್ಥಗೊಳ್ಳುವುದು ಹಾಗೂ ಮರಣ ಹೊಂದುವುದನ್ನು ತಪ್ಪಿಸಲು ಶಿಶು ಅಭಿವೃದ್ಧಿ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸುತ್ತಿದೆ ಎಂದರು.
ಆರು ವರ್ಷದೊಳಗಿನ ಮಕ್ಕಳಿಗೆ ಸರಿಯಾದ ಸಮಯದಲ್ಲಿ ಸೂಕ್ತ ಪ್ರಮಾಣದಲ್ಲಿ ಪೌಷ್ಟಿಕ ಆಹಾರ ನೀಡುವುದರ ಜತೆಗೆ ಉತ್ತಮ ಪರಿಸರದಲ್ಲಿ ಬೆಳೆಸಿದಲ್ಲಿ ಅವರನ್ನು ರೋಗ ಮುಕ್ತರನ್ನಾಗಿ ಮಾಡಲು ಸಾಧ್ಯವಾಗುತ್ತದೆ. ತಾಯಿ ಗರ್ಭಿಣಿಯಿದ್ದಾಗಲೆ ಒಳ್ಳೆಯ ಆಹಾರ, ಸಕಾಲದಲ್ಲಿ ತಪಾಸಣೆ, ನುರಿತ ವೈದ್ಯ ಹಾಗೂ ದಾದಿಯರಿಂದ ಹೆರಿಗೆ ನಂತರ ಮಗುವಿನ ಲಾಲನೆ ಪಾಲನೆಯ ಮುತುವರ್ಜಿ ಹಾಗೂ ಮಿದುಳು ಮತ್ತು ಮನಸ್ಸು ಬೆಳೆಯಲು ಸೂಕ್ತ ವಾತಾವರಣ ನಿರ್ಮಾಣ ಮಾಡುವಂತೆ ನಾಗಮ್ಮ ಸಲಹೆ ನೀಡಿದರು.
ಈ ವೇಳೆ ಸಾಧಾರಣ ಕಡಿಮೆ ತೂಕದ ಒಟ್ಟು ನೂರು ಮಕ್ಕಳು ಹಾಗೂ ಐದು ತೀರಾ ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಯಿತು. ಡಾ.ಗಿಯಾಸೂದ್ದೀನ್ ಮತ್ತು ಡಾ.ಜುನೈದ್ ಖಾನ್ ಅವರು ಮಕ್ಕಳ ಆರೋಗ್ಯ ತಪಾಸಣೆ ಮಾಡಿದರು. ವಿವಿಧ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಗರ್ಭಿಣಿಯರು, ಪೋಷಕರು ಮತ್ತು ಅಪೌಷ್ಟಿಕ ಮಕ್ಕಳೊಂದಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದರು.