ಕಲಬುರಗಿ: ವೈಯಕ್ತಿಕ ಹಿತಾಸಕ್ತಿಗಿಂತ ಸಮಾಜದ ಹಿತವನ್ನೇ ಸದಾ ಬಯಸಿ, ಪರೋಪಕಾರಿಯಾಗಿದ್ದ ಜಿಲ್ಲಾ ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷ ಲಿಂಗೈಕ್ಯ ಡಿ.ವಿ.ಪಾಟೀಲ ಸ್ಮರಣಾರ್ಥ ಇಲ್ಲಿನ ವಿಶ್ವಜ್ಯೋತಿ ಪ್ರತಿಷ್ಠಾನದ ವತಿಯಿಂದ ರವಿವಾರ (ಜೂನ್-೨೦) ಬೆಳಗ್ಗೆ ೯.೩೦ ಕ್ಕೆ ಜಗತ್ ಬಡಾವಣೆಯಲ್ಲಿ ಬಸವೇಶ್ವರ ಸಹಕಾರ ಬ್ಯಾಂಕಿನ ನಿರ್ದೇಶಕಿ ಸುಶೀಲಾಬಾಯಿ ಡಿ.ವಿ.ಪಾಟೀಲ ನೇತೃತ್ವದಲ್ಲಿ ‘ಆಶಾಕಾರ್ಯಕರ್ತ’ರಿಗೆ ಕೊಡೆ (ಛತ್ರಿ) ಗಳು ಮತ್ತು ಟಾರ್ಚ್ಗಳು ವಿತರಿಸಲಾಗುತ್ತಿದೆ ಎಂದು ಪ್ರತಿಷ್ಠಾನ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ತಿಳಿಸಿದ್ದಾರೆ.
ನುಡಿ ಪ್ರಾಧಾನ್ಯತೆಗಿಂತ ನಡತೆಗೆ ಆದ್ಯತೆಯನ್ನು ನೀಡಿ, ಸಮಾಜ ಸೇವೆಯಲ್ಲೇ ದೇವರನ್ನು ಕಾಣುತ್ತಿದ್ದ ಡಿ.ವಿ.ಪಾಟೀಲ ಅವರನ್ನು ಶಾಶ್ವತವಾಗಿ ನೆನಪಿಡುವ ನಿಟ್ಟಿನಲ್ಲಿ ಪ್ರತಿ ವರ್ಷ ಈ ರೀತಿಯ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಮಾಜಿ ಎಂಎಲ್ಸಿ ಅಲ್ಲಮಪ್ರಭು ಪಾಟೀಲ, ಹೆಚ್ಕೆಸಿಸಿಐ ಅಧ್ಯಕ್ಷ ಪ್ರಶಾಂತ ಮಾನಕರ್, ಪ್ರಧಾನ ಕಾರ್ಯದರ್ಶಿ ಶರಣು ಪಪ್ಪಾ, ಜಿಲ್ಲಾ ವೀರಶೈವ ಸಮಾಜ ಅಧ್ಯಕ್ಷ ಅರುಣಕುಮಾರ ಪಾಟೀಲ, ಉಪಾಧ್ಯಕ್ಷ ಕಲ್ಯಾಣಪ್ಪ ಪಾಟೀಲ ಮಳಖೇಡ, ಬಸವೇಶ್ವರ ಸಹಕಾರ ಬ್ಯಾಂಕಿನ ನಿರ್ದೇಶಕಿ ಸುಶೀಲಾಬಾಯಿ ಡಿ.ವಿ.ಪಾಟೀಲ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು.
ಕೊರೊನಾದ ಸಂಕಷ್ಟದ ಸಂದರ್ಭದಲ್ಲಿ ಬಡವರು, ನಿರ್ಗತಿಕರಿಗೆ ನೆರವು ನೀಡಿ ಮಾನವೀಯತೆ ಮೆರೆಯುವ ಕಾರ್ಯ ಮಾಡಿದ ಅನೇಕ ಸಮಾಜ ಸೇವಕರನ್ನೂ ಸಹ ಇದೇ ಸಂದರ್ಭದಲ್ಲಿ ಗೌರವಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.