ವಿಶ್ವಪ್ರಸಿದ್ಧ ಹಂಪಿಗೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಕುಟುಂಬ ಸಮೇತ ಭೇಟಿ

0
18

ಹೊಸಪೇಟೆ(ವಿಜಯನಗರ): ವಿಶ್ವಪಾರಂಪರಿಕ ತಾಣ ಹಂಪಿಗೆ ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಹಾಗೂ ಅವರ ಧರ್ಮಪತ್ನಿ ಎಂ.ಉಷಾ ಅವರು ಸೇರಿದಂತೆ ಇಡೀ ಕುಟುಂಬ ಸಮೇತ ಶನಿವಾರ ಭೇಟಿ ನೀಡಿದರು.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಕುಟುಂಬದವರು ಮೊದಲಿಗೆ ವಿರೂಪಾಕ್ಷೇಶ್ವರನ ದರುಶನ ಪಡೆದರು.ಉಪರಾಷ್ಟ್ರಪತಿ ಮತ್ತು ಅವರ ಕುಟುಂಬದವರಿಗೆ ವಿದ್ಯಾರಣ್ಯ ಶ್ರೀಗಳು ಶಾಲು ಹೋದಿಸಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು ಹಾಗೂ ಈ ಸಂದರ್ಭದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಅವರು ತಾಯಿ ಪಂಪಾಂಬಿಕೆ ಹಾಗೂ ನಾಡದೇವತೆ ಭುವನೇಶ್ವರಿಯ ದರುಶನ ಪಡೆದರು.

Contact Your\'s Advertisement; 9902492681

ನಂತರ ಅವರು ವಿರೂಪಾಕ್ಷೇಶ್ವರ ದೇವಸ್ಥಾನದ ಮುಂಭಾಗದ ಮಂಟಪ ಹಾಗೂ ಸುತ್ತಮುತ್ತಲಿನ ಮಂಟಪಗಳು ಹಾಗೂ ಅಲ್ಲಿನ ಶಿಲ್ಪಕಲಾ ವೈಭವವನ್ನು ಕಣ್ತುಂಬಿಕೊಂಡರು. ಅನುಭವಿ ಗೈಡ್ ಕೇಶವ್ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಡೈರೆಕ್ಟರ್ ಜನರಲ್ ವಿದ್ಯಾವತಿ ಅವರು ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿರುವ ಸ್ಮಾರಕಗಳ ಬಗ್ಗೆ ವಿವರಣೆ ನೀಡಿದರು.

ದೇವಸ್ಥಾನದ ಆವಣದಲ್ಲಿರುವ ವಿಶಾಲ ಹಂಪಿಯ ಪ್ರದೇಶದ ನಕ್ಷೆಯನ್ನು ಉಪರಾಷ್ಟ್ರಪತಿಗಳು ಕುತೂಹಲದಿಂದ ವೀಕ್ಷಿಸಿದರು.

ಇದಕ್ಕೂ ಮುಂಚೆ ವಿರೂಪಾಕ್ಷೇಶ್ವರ ದೇವಸ್ಥಾನ ಆವರಣದಲ್ಲಿ ಪ್ರವೇಶವಾಗುತ್ತಲೇ ಆನೆ ಲಕ್ಷ್ಮೀ ಉಪರಾಷ್ಟ್ರಪತಿಗಳು ಮತ್ತು ಅವರ ಕುಟುಂಬದವರಿಗೆ ಹೂವಿನಹಾರ ಹಾಕಿ ಸನ್ಮಾನಿಸಿತು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ನಮಿಸಿತು.

ನಂತರ ಅವರು ಕಮಲ್ ಮಹಲ್(ಲೋಟಸ್ ಮಹಲ್) ವೀಕ್ಷಣೆಗೆ ತೆರಳಿದರು. ರಾಜ್ಯ ಪುರಾತತ್ವ ಇಲಾಖೆಯ ಕಚೇರಿಯ ಮುಂಭಾಗದಿಂದ ತಮ್ಮ ಕಾರು ಬಿಟ್ಟು ಬ್ಯಾಟರಿ ಚಾಲಿತ ವಾಹನಗಳಲ್ಲಿ ಕುಳಿತು ಲೋಟಸ್ ಮಹಲ್ ವೀಕ್ಷಣೆಗೆ ತೆರಳಿದರು.ಕ್ವೀನ್ಸ್ ಮಹಲ್‍ನ ಬುನಾದಿ ಮತ್ತು ಅದರಲ್ಲಿನ ವಿವಿಧ ಸೂಕ್ಷ್ಮಶಿಲ್ಪಕಲಾ ಕೆತ್ತನೆಗಳನ್ನು ಅತ್ಯಂತ ಕುತೂಹಲದಿಂದ ವೀಕ್ಷಿಸಿದರು. ನಂತರ ಅವರು ಶ್ರೀಮಂತ ಶಿಲ್ಪಕಲೆಯನ್ನು ಮಡಿಲಲ್ಲಿಟ್ಟುಕೊಂಡಿರುವ ಕಮಲ್ ಮಹಲ್‍ನ್ನು ವೀಕ್ಷಿಸಿ ಸಂತಸಪಟ್ಟರು ಮತ್ತು ಅದರ ಇತಿಹಾಸವನ್ನು ಗೈಡ್‍ನಿಂದ ಕೇಳಿ ತಿಳಿದುಕೊಂಡರು ಹಾಗೂ ತಮ್ಮ ಕುಟುಂಬದವರಿಗೂ ಇದರ ಬಗ್ಗೆ ತಮ್ಮ ಮಾತೃಭಾಷೆಯಾಗಿರುವ ತೆಲುಗಿನಲ್ಲಿ ವಿವರಿಸಿದರು.

ನಂತರ ಕೆಲಹೊತ್ತು ಕಲ್ಲಿನ ಆಸನದ ಮೇಲೆ ಕುಳಿತು ಎಳೆನೀರು ಸೇವಿಸಿದ ಉಪರಾಷ್ಟ್ರಪತಿ ದಂಪತಿ ಅಲ್ಲಿಂದ ಹಜಾರರಾಮ ದೇವಾಲಯಕ್ಕೆ ತೆರಳಿದರು. ಹಜಾರರಾಮ ದೇವಾಲಯದಲ್ಲಿ ಕೆತ್ತಲಾಗಿರುವ ರಾಮಾಯಣ ಹಾಗೂ ಇನ್ನೀತಿರ ಹಿಂದೂ ಧಾರ್ಮಿಕ ಸಂಸ್ಕøತಿ ಸಾರುವ ವಿವಿಧ ಸೂಕ್ಷ್ಮಶಿಲ್ಪಕಲಾ ಕೆತ್ತನೆಗಳನ್ನು ತದೇಕಚಿತ್ತದಿಂದ ವೀಕ್ಷಿಸಿ ಅದರ ಬಗ್ಗೆಯೂ ಸಂಪೂರ್ಣ ಮಾಹಿತಿ ಪಡೆದುಕೊಂಡರು ಮತ್ತು ತಮ್ಮ ಕುಟುಂಬದವರೊಂದಿಗೆ ಗ್ರೂಪ್ ಫೋಟೊ ಕೂಡ ತೆಗೆಯಿಸಿಕೊಂಡು ಖುಷಿಪಟ್ಟರು.

ಸಂಗೀತ ಮಂಟಪ,ಕಲ್ಲಿನ ರಥಕ್ಕೆ ಫೀದಾ ಆದ ಉಪರಾಷ್ಟ್ರಪತಿ ಕುಟುಂಬ: ವಿಜಯ ವಿಠ್ಠಲ ಮಂದಿರದಲ್ಲಿನ ಸಂಗೀತ ಮಂಟಪ ಮತ್ತು ಕಲ್ಲಿನ ರಥದ ಶಿಲ್ಪಕಲಾ ಸೌಂದರ್ಯವನ್ನು ವೀಕ್ಷಿಸಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಅವರ ಕುಟುಂಬದವರು ಬೆರಗಾದರು.
ಸಂಗೀತ ಮಂಟಪದ ಕಂಬಗಳಲ್ಲಿ ಹೊರಡುವ ಸ್ವರಗಳ ನಾದವನ್ನು ಉಪರಾಷ್ಟ್ರಪತಿ ದಂಪತಿ ಕಂಬಕ್ಕೆ ಕಿವಿಗೊಟ್ಟು ಕೇಳಿ ಖುಷಿಪಟ್ಟರು.

ಕಲ್ಲಿನ ರಥವನ್ನು ವೀಕ್ಷಿಸಿದರು ಮತ್ತು ತಮ್ಮ ಕುಟುಂಬದವರೊಂದಿಗೆ ಗ್ರೂಪ್ ಫೋಟೊ ತೆಗೆಯಿಸಿಕೊಂಡರು. ವಿಜಯವಿಠ್ಠಲ ಮಂದಿರದಲ್ಲಿರುವ ಕಲ್ಯಾಣ ಮಂಟಪ ಸೇರಿದಂತೆ ಎಲ್ಲ ಮಂಟಪಗಳು ಮತ್ತು ಅಲ್ಲಿರುವ ವೈಭವದ ಶಿಲ್ಪಕಲಾ ಕೆತ್ತನೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ವಿಜಯನಗರ ಸಾಮ್ರಾಜ್ಯದ ಇತಿಹಾಸ ಹಾಗೂ ವಿವಿಧ ಸ್ಮಾರಕಗಳ ಇತಿಹಾಸವನ್ನು ಸಹ ಈ ಸಂದರ್ಭದಲ್ಲಿ ಗೈಡ್‍ಗಳಿಂದ ಕೇಳಿ ತಿಳಿದುಕೊಂಡರು.

ನಂತರ ಅವರು ಪುರಾತತ್ವ ಸರ್ವೇಕ್ಷಣಾ ಇಲಾಖೆ,ಕಂದಾಯ,ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಹಂಪಿಯ ಸ್ಮಾರಕಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳೊಂದಿಗೆ ಫೋಟೊ ತೆಗೆಸಿಕೊಂಡು ಖುಷಿಪಟ್ಟರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಅಪರ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ, ಎಎಸ್‍ಐ ಅಧೀಕ್ಷಕ ಕಾಳಿಮುತ್ತು ಮತ್ತಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here