ಶಹಾಬಾದ: ಇಂದಿನ ವೈಜ್ಞಾನಿಕ ಯುಗದಲ್ಲಿ ಅನೇಕ ಒತ್ತಡಗಳಿಂದ ಮನುಷ್ಯ ದುಶ್ಚಟಗಳ ದಾಸನಾಗುತ್ತಿದ್ದು, ಅದರಿಂದ ಹೊರಬಂದು ಶಾಂತಿ, ನೆಮ್ಮದಿಯಿಂದ ಜೀವನ ನಡೆಸಬೇಕಾದರೆ ಪುರಾಣ ಪ್ರವನಗಳು ಕೇಳುವುದು ಅವಶ್ಯ ಎಂದು ತೊನಸನಹಳ್ಳಿ(ಎಸ್)ನ ಸಂಗಮೇಶ್ವರ ಸಂಸ್ಥಾನ ಮಠದ ಪೂಜ್ಯರಾದ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರು ಹೇಳಿದರು.
ಅವರು ಗುರುವಾರ ತೊನಸನಹಳ್ಳಿ(ಎಸ್) ಗ್ರಾಮದ ಗುರು ಸಂಗಮೇಶ್ವರ ಸಂಸ್ಥಾನ ಮಠದ ಪೂಜ್ಯರಾದ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ಹಾಗೂ ಸಂಗಮೇಶ್ವರ ಸಂಸ್ಥಾನ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ಗುಡ್ಡಾಪೂರ ಧಾನಮ್ಮದೇವಿ ಪುರಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ದುಶ್ಚಟಗಳು ಮನುಷ್ಯನ ಚಿಂತನೆ ಮಾಡುವ ಶಕ್ತಿಯನ್ನು ಕುಂದಿಸುತ್ತದೆ. ತಾನು ಹಾಳಾಗುವುದಲ್ಲದೇ ಸಮಾಜಕ್ಕೂ ಕಂಟಕನಾಗಿ ಹೊರಹೊಮ್ಮುತ್ತಾನೆ. ಧಾರ್ಮಿಕ ಆಚರಣೆಗಳು ಮನುಷ್ಯರಲ್ಲಿ ಮಹತ್ತರವಾದ ಬದಲಾವಣೆ ತರುವುದರ ಜೊತೆಗೆ ಸದ್ಗುಣ,ಸನ್ನಡತೆಯನ್ನು ಬೆಳೆಸುತ್ತವೆ. ಅಲ್ಲದೇ ಮಾನಸಿಕ ನೆಮ್ಮದಿ ನೀಡುತ್ತವೆ.ಇದರಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರಲ್ಲದೇ ಮತದಾನ ಪ್ರತಿಯೊಬ್ಬರ ಹಕ್ಕು. ಆ ಹಕ್ಕನ್ನು ಪ್ರತಿಯೊಬ್ಬರೂ ಚಲಾಯಿಸುವ ಮೂಲಕ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂದು ತಿಳಿಸಿದರು.
ಯರಗೋಳ ಮಠದ ಸಂಗಮೇಶ್ವರ ದೇವರು ಮತ್ತು ಕೊಟ್ಟೂರೇಶ್ವರ ಕೊತ್ತಲಪ್ಪ ಶರಣರು ಮಾತನಾಡಿ,ಶರಣರ ಪುರಾಣಗಳನ್ನು ಕೇಳುವದರಿಂದ ಮನಸ್ಸಿನ ಮಲೀನತೆ ಕಳೆಯುತ್ತದೆ, ಒಳ್ಳೆಯ ಸಂಸ್ಕಾರ ಸಿಗುತ್ತದೆ. ಒಳ್ಳೆಯ ಸಂಸ್ಕಾರ ಒಳ್ಳೆಯ ಸಮಾಜ ಹಾಗೂ ದೇಶವನ್ನು ನಿರ್ಮಾಣ ಮಾಡುತ್ತದೆ.ಆದ್ದರಿಂದ ಪುರಾಣದ ಕೇಳುವುದರಿಂದ ಉತ್ತಮ ವಿಚಾರಗಳು, ಸದ್ಗುಣಗಳು ಬೆಳೆಯುತ್ತವೆ. ತಾಯಂದಿರು ಇದನ್ನು ತಮ್ಮ ಮಕ್ಕಳಿಗೆ ತಿಳಿಸುವ ಮೂಲಕ ಉತ್ತಮ ಸಂಸ್ಕಾರಯುತ ಮಕ್ಕಳನ್ನು ಬೆಳೆಸುವತ್ತ ಮುಂದಾಗಿ ಎಂದು ಹೇಳಿದರು.
ಮುಖಂಡರಾದ ನಿಂಗಣ್ಣಗೌಡ ಮಾಲಿ ಪಾಟೀಲ, ಸಂಗಣ್ಣಗೌಡ.ಎಸ್.ರಾಮಶೆಟ್ಟಿ, ಶಿವಲಿಂಗಪ್ಪ ಗೊಳೇದ, ಬಸವರಾಜ.ಎಸ್.ಬಮಶೆಟ್ಟಿ, ಶಿವಶರಣಪ್ಪ.ಎಸ್.ಮೆಡಗುದ್ಲಿ, ಬಸವರಾಜ.ಎಸ್.ಕುಂಬಾರ, ಅಯ್ಯಣ್ಣ ಬಂದಳ್ಳಿ ವೇದಿಕೆಯ ಮೇಲಿದ್ದರು.
ಶಿವಲಿಂಗಯ್ಯ ಶಾಸ್ತ್ರಿ ಗರೂರ ನಿರೂಪಿಸಿದರು. ಕಲ್ಲಯ್ಯಸ್ವಾಮಿ ಪಡದಳ್ಳಿ ಸಂಗೀತ ಸೇವೆ ಸಲ್ಲಿಸಿದರು, ಲೋಕನಾಥ ಚಾಂಗಲೆ ತಬಲಾ ಸಾಥ ನೀಡಿದರು. ಗ್ರಾಮದ ನೂರಾರು ಭಕ್ತರು ಪಾಲ್ಗೊಂಡಿದ್ದರು.