ಕಲಬುರಗಿ: ಚುನಾವಣೆ ಮುಗಿದ ನಂತರ ಚಿತ್ತಾಪುರದ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರ ಮೇಲೆ ಒಂದಲ್ಲೊಂದು ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ನಿರಂತರ ಕಿರುಕುಳ ಕೊಡಲಾಗುತ್ತಿದೆ. ವಿಚಾರಣೆ ನೆಪದಲ್ಲಿ ದಿನವಿಡಿ ಠಾಣೆಯಲ್ಲಿ ಕೂಡಿಸಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಎಚ್ಚರಿಸಿದರು.
ಪತ್ರಿಕಾ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ನಿರಂತರ ಅನ್ಯಾಯ ಮುಂದುವರೆದಿದ್ದು, ಅದರಲ್ಲೂ ಜಿಲ್ಲೆಯಲ್ಲಿ ನಡೆಸುತ್ತಿರುವ ದ್ವೇಷದ ರಾಜಕಾರಣ ನಿಲ್ಲಿಸದಿದ್ದಲ್ಲಿ ಬಿಜೆಪಿ ಸುಮ್ಮನೆ ಕೂಡುವುದಿಲ್ಲ. ಪಕ್ಷದ ಮುಖಂಡ ಮಣಿಕಂಠ ರಾಠೋಡ್ ಗೆ ಯಾವ ಕಾರಣಕ್ಕಾಗಿ ಬಂಧಿಸಲಾಗಿದೆ ಎಂದು ಕೇಳಿದ್ದಕ್ಕೆ ಕರ್ತವ್ಯಕ್ಕೆ ಅಡ್ಡಿ ಎಂದು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿತ್ತಾಪುರ ಕ್ಷೇತ್ರದ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ದ್ವೇಷದ ರಾಜಕಾರಣ ನೀತಿ ಅನುಸರಿಸುವ ಮುಖಾಂತರ ಆಡಳಿತ ಯಂತ್ರ ದುರುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ರದ್ದೇವಾಡಗಿ ಗಂಭೀರ ಆರೋಪ ಮಾಡಿದರು.
ಅಭದ್ರತೆ ಹಿನ್ನೆಲೆಯಲ್ಲಿ ಮಣಿಕಂಠ ರಾಠೋಡ ಅವರನ್ನು ಹತ್ತಿಕ್ಕುವ ಯತ್ನ ನಿರಂತರವಾಗ ನಡೆಯುತ್ತಿದೆ. ಒಂದು ವೇಳೆ ಅನ್ಯಾಯ, ದೌರ್ಜನ್ಯ, ದ್ವೇಷದ ರಾಜಕಾರಣ ನಿಲ್ಲಿಸದಿದ್ದರೆ ಬಿಜೆಪಿ ಪ್ರತಿಭಟನೆ ಮಾಡಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ್ ಪಾಟೀಲ್, ನೀಲಕಂಠ ಪಾಟೀಲ್, ಸಂತೋಷ ಹಾದಿಮನಿ,ಸೂಗುರ ಸೇರಿದಂತೆ ಇತರರು ಉಪಸ್ಥಿತರಿದ್ದರು.