ಗ್ರಾಮದಲ್ಲಿ ಶೀಘ್ರದಲ್ಲಿಯೇ ಶೌಚಾಲಯ ನಿರ್ಮಾಣಗೊಳಿಸಿ; ಗರೀಮಾ ಪನ್ವಾರ
ಸುರಪುರ: ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ದೊರೆಯಲು ಕೂಡಲೇ ಕ್ರಮ ಕೈಗೊಳ್ಳಬೇಕು ಮತ್ತು ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ಹಾಗೂ ಶಾಲೆಯ ಬಳಿಯೂ ಮಕ್ಕಳಿಗಾಗಿ ಶೌಚಾಲಯ ನಿರ್ಮಾಣಗೊಳಿಸುವಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಣಾಧಿಕಾರಿ ಗರೀಮಾ ಪನ್ವಾರ ತಿಳಿಸಿದರು.
ಗ್ರಾಮದಲ್ಲಿ 34 ಜನರಿಗೆ ವಾಂತಿ ಭೇದಿಯಿಂದ ಚಿಕಿತ್ಸೆ ಪಡೆಯುತ್ತಿದ್ದ ಕುರಿತು ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ ಅವರು ಮಾತನಾಡಿ,ಅಸ್ವಸ್ಥಗೊಂಡಿದ್ದ ಎಲ್ಲಾ ಮಕ್ಕಳು ಈಗ ಗುಣಮುಖರಾಗುತ್ತಿದ್ದಾರೆ.ಗ್ರಾಮದ ಶಾಲೆಯಲ್ಲಿ ಚಿಕಿತ್ಸೆ ಪಡೆದ ಮಕ್ಕಳು ಈಗ ಮನೆಗೆ ತೆರಳಿದ್ದಾರೆ.ಅಲ್ಲದೆ ವಿಷಪೂರಿತ ಆಹಾರ ಸೇವಿಸಿ ಅಸ್ವಸ್ಥರಾಗಿದ್ದ ಕಾರ್ಮಿಕರು ಈಗ ಗುಣಮುಖರಾಗಿದ್ದು ಎಲ್ಲರನ್ನು ಆಸ್ಪತ್ರೆಯಿಂದ ತೆರಳಿದ್ದಾರೆ.ಆದರೆ ರಾಯಚೂರಿನ ಆಸ್ಪತ್ರೆಗೆ ಹೋಗಿದ್ದವರು ಗುಣಮುಖರಾಗುತ್ತಿದ್ದು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.ಮಂಗಳವಾರ ಬೆಳಿಗ್ಗೆ ಹತ್ತು ಜನ ಶಾಲಾ ಮಕ್ಕಳಿಗೆ ಶಾಲೆಯಲ್ಲಿಯೇ ಚಿಕಿತ್ಸೆ ನೀಡಿ ಆರೋಗ್ಯ ಪರೀಕ್ಷಿಸಿ ಮನೆಗೆ ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಕಾಣಿಸಿಕೊಂಡಿರುವ ವಾಂತಿ ಭೇದಿ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ,ಗ್ರಾಮದ ಶಾಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳ ಆರೋಗ್ಯ ವಿಚಾರಿಸಿ ನಂತರ ಮಾತನಾಡಿ,ಶಾಲೆಯಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಿ ಹಾಗೂ ಶಾಲೆಗೆ ಕಂಪೌಂಡ್ ನಿರ್ಮಾಣವನ್ನು ಮಾಡುವಂತೆ ತಿಳಿಸಿದರು.ಅಲ್ಲದೆ ಗ್ರಾಮದಲ್ಲಿ ಚರಂಡಿ ಸ್ವಚ್ಛತೆ ಮತ್ತು ಶುದ್ಧ ನೀರು ಸರಬರಾಜಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಹಿರೇಗೌಡರ್,ಕುಡಿಯುವ ನೀರು ಸರಬರಾಜು ಇಲಾಖೆಯ ಇಂಜಿನಿಯರ್ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ,ತಾಲೂಕು ಪಂಚಾಯತ ಇ.ಓ ಬಸವರಾಜ ಸಜ್ಜನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.