ಕಲಬುರಗಿ: ಹುಟ್ಟಿದವರೆಲ್ಲರೂ ಸಾಯುವ ತನಕ ಬದುಕಿರುತ್ತಾರೆ. ಈ ಹುಟ್ಟು ಸಾವಿನ ಮಧ್ಯೆ ಹೇಗೆ ಬದುಕಬೇಕು ಎಂಬುದನ್ನು ಪ್ರತಿಪಾದಿಸಿದ ಶರಣರು ಹುಟ್ಟು ಮತ್ತು ಸಾವಿಗೆ ಅಷ್ಟೊಂದು ಮಹತ್ವ ಕೊಡದೆ ವರ್ತಮಾನಕ್ಕೆ ಮಹತ್ವ ಕೊಟ್ಟಿದ್ದಾರೆ ಎಂದು ಪತ್ರಕರ್ತ- ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ಇಲ್ಲಿನ ಓಂ ನಗರದಲ್ಲಿರುವ ಶ್ರೀ ಅರವಿಂದೋ ಸೊಸೈಟಿಯಲ್ಲಿ ಶ್ರೀ ಅರವಿಂದರು ದೇಹ ತ್ಯಜಿಸಿದ ದಿನದ ಅಂಗವಾಗಿ ಮಂಗಳವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಶರಣರಿಗೆ ಮರಣವೇ ಮಹಾನವಮಿ’ ವಿಷಯ ಕುರಿತು ಮಾತನಾಡಿದ ಅವರು, ಎಮ್ಮವರಿಗೆ ಸಾವಿಲ್ಲ. ಎಮ್ಮವರು ಸಾವನಿರಿಯರು ಎಂಬಂತೆ ಶರಣರು ಸತ್ಯ, ಶುದ್ಧ ಕಾಯಕ ಮತ್ತು ಸಕಲ ಜೀವಾತ್ಮರಿಗೆ ಲೇಸ ಬಯಸಿದವರು ಎಂದು ತಿಳಿಸಿದರು.
ಪಕ್ಕಾ ವಾಸ್ತವವಾದಿಗಳಾಗಿದ್ದ ಶರಣರು, ಹುಟ್ಟು ಸಾವುಗಳು ಸಹಜ ಪ್ರಕ್ರಿಯೆ. ಹುಟ್ಟು ಆಕಸ್ಮಿಕ, ಸಾವು ನಿಶ್ವಿತ. ಅವುಗಳ ಬಗ್ಗೆ ತೀರಾ ಚಿಂತಿಸದೆ ಅವುಗಳ ನಡುವಿನ ಬದುಕನ್ನು ಸಾರ್ಥಕವಾಗಿಸಿಕೊಳ್ಳುವ ಸರಳ ಮತ್ತು ಸಹಜ ದಾರಿ ತೋರಿಸಿದರು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ನಿವೃತ್ತ ಪ್ರಾಚಾರ್ಯ ಡಾ. ಶ್ರೀಶೈಲ ನಾಗರಾಳ ಮಾತನಾಡಿ, ಶರಣರು ಮತ್ತು ಅರವಿಂದರು ಕಟ್ಟುವ ಕೆಲಸ ಮಾಡಿದರು. ಜಗತ್ತಿನ ಎಲ್ಲ ದಾರ್ಶನಿಕರ ಚಿಂತನೆಗಳು ಸೌಹಾರ್ದ ಭಾರತದ ನಿರ್ಮಾಣದ ಗುರಿ ಹೊಂದಿದ್ದು, ಅಧ್ಯಾತ್ಮ ಚಿಂತನೆ ಅಗತ್ಯ ಎಂದು ಪ್ರತಿಪಾದಿಸಿದರು.
ಅರವಿಂದರ ಜೀವನಾದರ್ಶ ಕುರಿತು ಮಾತನಾಡಿದ ಮಹಾಂತ ಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ಶಿವರಾಜ ಪಾಟೀಲ, ನರ-ನಾರಾಯಣ, ಜೀವ-ಶಿವ, ಮನುಷ್ಯ- ಮಹಾದೇವ, ಅಂಗ-ಲಿಂಗವಾಗುವ ಪರಿಪೂರ್ಣ ಯೋಗವನ್ನು ಅರವಿಂದರು ಬೋಧಿಸಿದರು ಎಂದು ವಿವರಿಸಿದರು.
ವಿವಿಎಸ್ ಮೀಡಿಯಾ ಸಂಸ್ಥಾಪಕ ಅಧ್ಯಕ್ಷ ಶಂಕರ ಕೋಡ್ಲಾ ಉಪಸ್ಥಿತರಿದ್ದರು. ಅರವಿಂದೊ ಸೊಸೈಟಿಯ ಅಧ್ಯಕ್ಷ ಡಾ. ಶ್ರೀಪಾದರಾವ ಘಂಟೋಜಿ ಅಧ್ಯಕ್ಷತೆ ವಹಿಸಿದ್ದರು.