ಕೋರೊನಾಕ್ಕಿಂತ ಮುಂಚೆ ನಿಲ್ಲುತ್ತಿದ್ದ ರೈಲು ನಿಲುಗಡೆಗೆ ಎಸ್‍ಯುಸಿಐ ಆಗ್ರಹ

0
18

ಶಹಾಬಾದ: ಕೋರೊನಾಕ್ಕಿಂತ ಮುಂಚೆ ನಿಲ್ಲಿಸುತ್ತಿದ್ದ ಎಲ್ಲಾ ರೈಲುಗಳನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಶಹಾಬಾದ ರೈಲು ನಿಲ್ದಾಣದ ಮುಂಭಾಗದಲ್ಲಿ ಸೋಮವಾರ ಎಸ್.ಯು.ಸಿ.ಐ (ಸಿ) ಯಿಂದ ಪ್ರತಿಭಟನೆ ನಡೆಸಲಾಯಿತು.

ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ರಾಮಣ್ಣ. ಎಸ್. ಇಬ್ರಾಹಿಂಪೂರ ಮಾತನಾಡಿ, ಕೇಂದ್ರ ರೈಲ್ವೆ ಇಲಾಖೆಯು ಶಹಾಬಾದನ ನಾಗರಿಕರಿಗೆ ರೈಲ್ವೇ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡಿದೆ. ಒಂದು ಕಾಲದಲ್ಲಿ ಶಹಾಬಾದ ನಗರದಲ್ಲಿ ನಿಲ್ಲುತ್ತಿದ್ದ ರೈಲುಗಳನ್ನು ಕೋರೊನಾ ನೆಪಯೊಡ್ಡಿ ತೆಗೆದುಹಾಕಿದ್ದಾರೆ. ಕೇಂದ್ರ ರೈಲ್ವೆ ಸಚಿವರು ಕೂಡಲೇ ರೈಲು ನಿಲುಗಡೆ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

Contact Your\'s Advertisement; 9902492681

ಸ್ಥಳೀಯ ಕಾರ್ಯದರ್ಶಿ ಗಣಪತರಾವ್.ಕೆ.ಮಾನೆ ಮಾತನಾಡಿ, ಶಹಾಬಾದ ನಗರವು ಒಂದು ತಾಲೂಕಾ ಕೇಂದ್ರವಾಗಿದ್ದು, ಶಹಾಬಾದನಿಂದ ದಿನಾಲು ವಿವಿಧ ಊರುಗಳಿಗೆ ಹಾಗೂ ಪ್ರಮುಖವಾಗಿ ಬೆಂಗಳೂರಿಗೆ ನೂರಾರು ಸಂಖ್ಯೆಯಲ್ಲಿ ನಾಗರಿಕರು ಪ್ರಯಾಣ ಮಾಡುತ್ತಾರೆ. ಸುಮಾರು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕಾಗಿ, ವ್ಯಾಪಾರಸ್ಥರು ತಮ್ಮ ವ್ಯಾಪಾರಕ್ಕಾಗಿ, ಉದ್ಯೋಗಸ್ಥರು ತಮ್ಮ ಕೆಲಸಕ್ಕಾಗಿ ಇಲ್ಲಿಂದ ಕಲಬುರಗಿ ಹಾಗೂ ಬಾಂಬೆ, ಬೆಂಗಳೂರಿಗೆ ಹೋಗುತ್ತಾರೆ. ಆದರೆ ಅವರಿಗೆ ಅವಶ್ಯಕತೆಗೆ ತಕ್ಕಂತೆ ರೈಲುಗಳು ಇಲ್ಲದಿರುವುದು ಒಂದು ದುರಂತವೇ ಸರಿ. ಶಹಾಬಾದ ನಗರವು ರಾಜ್ಯ ಸರಕಾರದಿಂದ ಹಾಗೂ ಕೇಂದ್ರ ಸರಕಾರದಿಂದ ಅತ್ಯಂತ ನಿರ್ಲಕ್ಷ್ಯತನಕ್ಕೆ ಒಳಗಾಗಿದೆ.

ಮುಂಚೆ ಶಹಾಬಾದ ರೈಲು ನಿಲ್ದಾಣದಲ್ಲಿ ಹಲವಾರು ರೈಲುಗಳು ನಿಲುಗಡೆಯಾಗುತ್ತಿತ್ತು ಆದರೆ ಈಗ ಶಹಾಬಾದ ರೈಲು ನಿಲ್ದಾಣ ರೈಲು ನಿಲುಗಡೆ ವ್ಯವಸ್ಥೆಯಿಲ್ಲದೆ ಬಿಕೋ ಎನ್ನುತ್ತಿದೆ. ಕೋರೋನಾ ನೆಪದಿಂದ ರದ್ದುಗೊಳಿಸಿರುವ ಎಲ್ಲಾ ರೈಲುಗಳನ್ನು ಪುನ: ಪ್ರಾರಂಭಿಸಬೇಕು. ಬೆಳಿಗ್ಗೆ ಬರುವ ರೈಲು ಸಂಖ್ಯೆ:07752 ಫಲಕನಾಮ ವಾಡಿ ಪ್ಯಾಸೆಂಜರ್‍ನ್ನು ಕಲಬುರಗಿವರೆಗೆ ವಿಸ್ತರಿಸಿ, ಶಹಾಬಾದಿಗೆ ನಿಲುಗಡೆ ಸೌಲಭ್ಯ ಒದಗಿಸಬೇಕು.

ಕಲಬುರಗಿಯಿಂದ ರಾಯಚೂರಿಗೆ ಹಾಗೂ ರಾಯಚೂರಿನಿಂದ ಕಲಬುರಗಿಗೆ ಹೊರಡುವ ಪ್ಯಾಸೆಂಜರ ಟ್ರೈನನ್ನು ಪ್ರಾರಂಭಿಸಬೇಕು. ರೈಲು ಸಂಖ್ಯೆ:18520 ವಿಶಾಖಪಟ್ಟಣಂ ಎಕ್ಸ್‍ಪ್ರೆಸ್ ಹಾಗೂ ರೈಲು ಸಂಖ್ಯೆ:18519 ಮುಂಬೈ ಎಲ್.ಟಿ.ಟಿ ಎಕ್ಸ್‍ಪ್ರೆಸ್ ನಿಲ್ಲಿಸಬೇಕು. ಕಲಬುರಗಿಯಿಂದ ಬೆಂಗಳೂರಿಗೆ ಒಂದು ಫಾಸ್ಟ್ ಪ್ಯಾಸೆಂಜರ್ ಟ್ರೇನ್ ಪ್ರಾರಂಭಿಸಬೇಕು.

ಕಲಬುರಗಿ ರೈಲ್ವೇ ವಿಭಾಗೀಯ ಕೇಂದ್ರದ ನನೆಗುದಿಗೆ ಬಿದ್ದಿರುವ ಕಾರ್ಯಗಳನ್ನು ಈ ಕೂಡಲೇ ಪ್ರಾರಂಭಿಸಬೇಕು. ಪ್ಯಾಸೆಂಜರ್ ರೈಲುಗಳಿಗೆ ಎಕ್ಸ್‍ಪ್ರೆಸ್ ರೈಲುಗಳ ದರ ತೆಗೆದುಕೊಳ್ಳುತ್ತಿರುವುದನ್ನು ತಕ್ಷಣವೇ ನಿಲ್ಲಿಸಬೇಕು. ಶಹಾಬಾದ ರೈಲು ನಿಲ್ದಾಣಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಉದ್ಯಾನ ಎಕ್ಸ್‍ಪ್ರೆಸ್, ಸೋಲಾಪುರ-ಹಾಸನ ಎಕ್ಸ್‍ಪ್ರೆಸ್, ಬಾಗಲಕೋಟ-ಯಶವಂತಪುರ ಬಸವ ಎಕ್ಸ್‍ಪ್ರೆಸ್ ಹಾಗೂ ಇನ್ನಿತರ ಎಕ್ಸ್‍ಪ್ರೆಸ್‍ಗಳಿಗೆ ಸ್ಲೀಪರ್ ಬೋಗಿಗಳು ಹಾಗೂ ಸಾಮಾನ್ಯ ಬೋಗಿಗಳನ್ನು ಹೆಚ್ಚಿಸಬೇಕು. ವಾರಕ್ಕೆ ಒಂದು ದಿನ ಬೀದರ್‍ನಿಂದ ಶಹಾಬಾದ ಮಾರ್ಗವಾಗಿ ಯಶವಂತಪೂರಕ್ಕೆ ಹೊರಡುವ ರೈಲನ್ನು ಪ್ರತಿದಿನ ಓಡಿಸಬೇಕು.

ರಾತ್ರೆ ಬರುವ ರೈಲು ಸಂಖ್ಯೆ:17030 ಹೈದ್ರಾಬಾದ ವಿಜಯಪುರ ಪ್ಯಾಸೆಂಜರ್ ಶಹಾಬಾದಗೆ ನಿಲುಗಡೆ ಸೌಲಭ್ಯ ಒದಗಿಸಬೇಕು. ಧಕ್ಕಾ ತಾಂಡಾ ಹಾಗೂ ಚುನ್ನಾಬಟ್ಟಿಗೆ ವಾಹನಗಳ ಸಮೇತ ಹೋಗಲು ರೈಲು ಮೇಲ್ಸೇತುವೆ ಅಥವಾ ಕೆಳ ಸೇತುವೆ ವ್ಯವಸ್ಥೆ ಮಾಡಬೇಕು. ರೈಲ್ವೇ ಖಾಸಗೀಕರಣವನ್ನು ನಿಲ್ಲಿಸಬೇಕು. ಈ ಎಲ್ಲಾ ಸಮಸ್ಯೆಗಳನ್ನು ಕೇಂದ್ರ ರೈಲ್ವೇ ಇಲಾಖೆಯು ಬಗೆಹರಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಗನ್ನಾಥ ಎಸ್.ಎಚ್, ಗುಂಡಮ್ಮ ಮಡಿವಾಳ, ರಾಘವೇಂದ್ರ.ಎಂ.ಜಿ ಮಾತನಾಡಿದರು. ಶಹಾಬಾದ ಸ್ಟೇಷನ್ ಮಾಸ್ಟರ್ ಕೆ. ರಾಜಶೇಖರ ಮೂಲಕ ಮಾನ್ಯ ಕೇಂದ್ರ ರೈಲ್ವೇ ಸಚಿವರಿಗೆ ಮನವಿಯನ್ನು ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಿದ್ದು ಚೌಧರಿ, ನೀಲಕಂಠ ಹುಲಿ, ಬಾಗಣ್ಣ ಬುಕ್ಕ, ತೇಜಸ್ ಆರ್, ಮಾರುತಿ, ತಿಪ್ಪಣ್ಣ ಜಾದವ, ಅಜಯ, ರಾಘು ಪವಾರ, ಆನಂದ, ದೇವರಾಜ ಸೇರಿದಂತೆ ಪಕ್ಷದ ಸದಸ್ಯರು, ನಾಗರಿಕರು, ಬೆಂಬಲಿಗರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here