ನ್ಯಾಯವಾದಿ ದಿ.ಸಾದತ ಹುಸೇನ ಉಸ್ತಾದರ 79ನೇ ಹುಟ್ಟು ಹಬ್ಬ
ಕಲಬುರಗಿ, ಜ.- ಇಲ್ಲಿನ ಕೇಂದ್ರ ಬಸ್ ನಿಲ್ದಾಣದ ಎದುರಿನ ಶಾಂತಿ ನಗರದಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಉಸ್ತಾದ ಕಡ್ನಿ ಕೆರ್ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ಶ್ರೀಶರಬಸವೇಶ್ವರ ಸಂಸ್ಥಾನದ ಪಿಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಹಾಗೂ ಹಜರತ ಖಾಜಾ ಬಂದಾನವಾಜ ದರ್ಗಾದ ಸಜ್ಜಾದಾ ನಶೀನರಾದ ಪೂಜ್ಯ ಡಾ.ಸೈಯದ ಶಾಹ ಗೇಸುದರಾಜ ಖುಸ್ರೋ ಹುಸೇನಿ ಅವರ ಸಾನಿದ್ಯದಲ್ಲಿ ಜ.20ರ ಬೆಳಿಗ್ಗೆ 11-45ಕ್ಕೆ ಜರುಗಲಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಂಸದರಾದ ಅಸಾದುದ್ದೀನ ಒಬೈಸಿ, ಡಾ.ಉಮೇಶ ಜಾಧವ, ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಸೇಡಂ, ಈಶ್ವರ ಖಂಡ್ರೆ, ರಹೀಮ ಖಾನ ಬೀದರ, ಶರಣಬಸಪ್ಪಗೌಡ ಪಾಟೀಲ ದರ್ಶನಾಪೂರ, ಕೆಕೆಆರ್ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಸೇರಿದಂತೆ ಶಾಸಕರು, ವಿಧಾನ ಪರಿಷತ್ತಿನ ಸದ್ಯರು, ಮಾಜಿ ಹಾಗೂ ಹಾಲಿ ಜನಪ್ರತಿನಿಧಿಗಳು ಗಣ್ಯಮಾನ್ಯರು ಮತ್ತು ವಿಶೇವಾಗಿ ಈ ಭಾಗದ ಮಠಾಧಿಶರು, ಪೂಜ್ಯ ಶರಣ ಸಂತರು ಪಾಲ್ಗೊಳ್ಳಲಿದ್ದಾರೆ ಎಂದು ರಾಜಕೀಯ ಧುರಿಣರಾದ ಉಸ್ತಾದ ನಾಸೀರ ಹುಸೇನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಆಸ್ಪತ್ರೆಯ ನೂತನ ಕಟ್ಟಡವನ್ನು ಅಂತರಾಷ್ಟ್ರೀಯ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಅತ್ಯಾಧುನಿಕ ಮತ್ತು ಹೈಟೆಕ್ ಮಾದರಿಯ ಯಂತ್ರೋಪಕರಣಗಳು, ನುರಿತ ವೈದ್ಯಕೀಯ ತಂಡ ಹಾಗೂ ಸಿಬ್ಬಂದಿಗಳು ದಿನದ 24 ತಾಸುಗಳ ಕಾಲ ತುರ್ತು ವಿಭಾಗ ಸೇರಿದಂತೆ ಎಲ್ಲ ಬಗೆಯ ರೋಗಗಳಿಗೆ ಚಿಕಿತ್ಸೆ, ಪರಿಹಾರ ಹಾಗೂ ಶಸ್ತ್ರ ಚಿಕಿತ್ಸೆ ಸೌಲಭ್ಯ ಒದಗಿಸಲಿದೆ.
ಎಲ್ಲ ಸಂಪತ್ತುಗಳಲ್ಲಿ ಆರೋಗ್ಯ ಸಂಪತ್ತು ಶ್ರೇಷ್ಠವಾಗಿದ್ದು, ಹಿಂದುಳಿದ ಈ ಭಾಗದ ಜನರಿಗೆ ಆರೋಗ್ಯ ಸೇವೆಯನ್ನು ನೀಡುವ ಉದ್ದೇಶದಿಂದ ಆಸ್ಪತ್ರೆಯೊಂದನ್ನು ಪ್ರಾರಂಭಿಸಲು ಹಿರಿಯ ನ್ಯಾಯವಾದಿ ದಿವಂಗತ ಸಾದತ ಹುಸೇನ ಉಸ್ತಾದರು ಸಂಕಲ್ಪ ಮಾಡಿದ್ದರು. ಅವರು ಕಂಡ ಕನಸು ನನಸಾಗುತ್ತಿದೆ. ಅವರ 79ನೇ ಜನ್ಮದಿನವಾದ ಜ.20ರಂದೇ ನೂತನ ಆಸ್ಪತ್ರೆ ಲೋಕಾರ್ಪಣೆ ಗೊಳ್ಳುತ್ತಿದೆ.
ಖ್ಯಾತ ಮೂತ್ರರೋಗ ತಜ್ಞರಾದ ಡಾ.ತನ್ವಿರ ಹುಸೇನ ಉಸ್ತಾದ ಮತ್ತು ಸೊಸೆ ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಸೈಯಿದಾ ಸುಬಿಯಾ ತನ್ವಿರ ಅವರು, ವಿದೇಶಕ್ಕೆ ಹೋಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಲಿಕ್ಕೆ ದಿ.ಸಾದತ್ ಹುಸೇನ ಉಸ್ತಾದ ತಡೆದಿದ್ದರು, ತಾಯಿ ನಾಡಿನ ಜನರ ಆರೋಗ್ಯ ರಕ್ಷಣೆಗಾಗಿ ತಮ್ಮ ಸೇವೆಯನ್ನು ಮೀಸಲಿಡುವಂತೆ ಇವರಿಬ್ಬರಿಂದ ಮಾತು ಪಡೆದಿದ್ದರು ಈ ಹಿನ್ನಲೆಯಲ್ಲಿ ಅವರು ಕಂಡ ಕನಸು ಮತ್ತು ಸಂಕಲ್ಪವನ್ನು ಅವರ ಹುಟ್ಟುಹಬ್ಬದ ದಿನದಂದೇ ಪೂರ್ಣಗೊಳ್ಳುತ್ತಿದೆ.
ಹೈಟೆಕ್ ಮಾದರಿಯ ಈ ಆಸ್ಪತ್ರೆ ಇಲ್ಲಿನ ಜನರ ಆರೋಗ್ಯ ಸೇವೆಯ ಜತೆಜತೆಗೆ ನೂರಾರು ಜನರಿಗೆ ಉದ್ಯೋಗ ನೀಡುವ ಮೂಲಕ ಅವರ ಕುಟುಂಬಗಳಿಗೆ ಆಶ್ರಯವನ್ನು ಕಲ್ಪಿಸಿದೆ.