ವಾಡಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಜಗಜ್ಯೋತಿ ಅಣ್ಣ ಬಸವಣ್ಣನವರ ಮೂರ್ತಿಗಳನ್ನೇ ಗುರಿಯಾಗಿಸಿ ಕಿಡಿಗೇಡಿಗಳು ದುಷ್ಕøತ್ಯ ಎಸಗುತ್ತಿದ್ದಾರೆ. ಪೊಲೀಸರು ಕೇವಲ ಆರೋಪಿಗಳನ್ನು ಬಂಧಿಸಿ ಪ್ರತಿಭಟನೆಗಳನ್ನು ತಣ್ಣಗಾಗಿಸಿದರೆ ಇಂತಹ ಘಟನೆಗಳಿಗೆ ಶಾಸ್ವತ ಕಡಿವಾಣ ಬೀಳುವುದಿಲ್ಲ. ಅಪರಾಧಿಗಳನ್ನು ಸಾರ್ವಜನಿಕವಾಗಿ ಕಠಿಣ ಶಿಕ್ಷೆಗೆ ಗುರಿಪಡಿಸಿದ್ದಾದರೆ ಭವಿಷ್ಯದಲ್ಲಿ ಇತರರು ಮೂರ್ತಿಗಳನ್ನು ಮುಟ್ಟಲು ಹೆದರುತ್ತಾರೆ ಎಂದು ಪಟ್ಟಣದ ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡ, ಪುರಸಭೆ ವಿರೋಧ ಪಕ್ಷದ ಮಾಜಿ ನಾಯಕ ಭೀಮಶಾ ಜಿರೊಳ್ಳಿ ಪ್ರತಿಕ್ರೀಯಿಸಿದ್ದಾರೆ.
ಕಲಬುರಗಿ ನಗರದ ಕೋಟನೂರ (ಡಿ) ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಮೂರ್ತಿ ಅವಮಾನ ಘಟನೆ ಖಂಡಿಸಿ ಪತ್ರಿಕಾ ಹೇಳಿಕೆ ನೀಡಿರುವ ಅವರು ಪದೇಪದೆ ಮಹಾನ್ ನಾಯಕರ ಮೂರ್ತಿಗಳು, ಪ್ರತಿಮೆಗಳು ಮತ್ತು ಭಾವಚಿತ್ರಗಳು ಅಪಮಾನಕ್ಕೀಡಾಗುತ್ತಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಬಾಬಾಸಾಹೇಬರು ಯಾರಿಗೂ ಅನ್ಯಾಯ ಮಾಡಿಲ್ಲ. ಎಲ್ಲ ಜಾತಿ ಜನರಿಗೆ ಸಿಗಬೇಕಾದ ಸಂವಿಧಾನದ ಸೌಲತ್ತುಗಳನ್ನು ಮೀಸಲಾತಿಗಳ ಮೂಲಕ ಒದಗಿಸಿಕೊಟ್ಟಿದ್ದಾರೆ. ಜಾತರಿ ಸಮಾನತೆ ಕಾಪಾಡಿಕೊಂಡು ಕೋಮು ಸೌಹಾರ್ಧತೆಯಿಂದ ಬದುಕಲು ಎಲ್ಲಾ ರೀತಿಯ ಅವಕಾಶಗಳನ್ನು ದೊರಕಿಸಿದ್ದಾರೆ.
ಬಸವಣ್ಣನವರು ವಚನ ಚಳುವಳಿಯ ಮೂಲಕ ಸಮಾನತೆಗಾಗಿ ಹೋರಾಡಿದ್ದಾರೆ. ಜಾತಿಯತೆಯನ್ನು ನಾಶಪಡಿಸಲು ಕ್ರಾಂತಿಕಾರಕ ಚಿಂತನೆಗಳನ್ನು ಕೊಟ್ಟಿದ್ದಾರೆ. ಅಂಬೇಡ್ಕರರು ಬಸವ ಚಿಂತನೆಗಳನ್ನು ಸಂವಿಧಾನದಲ್ಲಿ ಅಳವಡಿಸಿ ಶ್ರೇಷ್ಠತೆ ಮೆರೆದಿದ್ದಾರೆ. ಇಂತಹ ಒಬ್ಬ ಶ್ರೇಷ್ಠ ನಾಯಕನ ಮೂರ್ತಿಗಳು ಕೆಲ ಜಾತಿವಾದಿಗಳ ದುಷ್ಕøತ್ಯಕ್ಕೆ ಅಪಮಾನಕ್ಕೀಡಾಗುತ್ತಿರುವುದು ಕ್ಷಿಮಿಸಲಾರದ ಅಪರಾಧವಾಗಿದೆ. ಘಟನೆಗೆ ಕಾರಣರಾದವರು ಯಾವುದೇ ಜಾತಿಗೆ ಸೇರಿದವರಾಗಿರಲಿ ಅವರು ಕಾನೂನು ಶಿಕ್ಷೆಯಿಂದ ತಪ್ಪಿಸಿಕೊಳ್ಳಬಾರದು. ಅತ್ಯಂತ ಕಠಿಣ ಶಿಕ್ಷೆಗೆ ಅವರು ಗುರಿಯಾಗಬೇಕು ಎಂದು ಭೀಮಶಾ ಜಿರೊಳ್ಳಿ ಆಗ್ರಹಿಸಿದ್ದಾರೆ.