ಶಹಾಬಾದ : ಚಿತ್ತಾಪೂರ ವಿಧಾನಸಭಾ ಮತಕ್ಷೇತ್ರಕ್ಕೆ ಒಳಪಡುವ ಶಹಾಬಾದ ತಾಲೂಕಿನ ಹೊನಗುಂಟಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 2022-23 ನೇ ಸಾಲಿನ 3054 ಸಿ.ಎಂ.ಜಿ.ಎಸ್.ವಾಯ್.ಮತ್ತು ಎಮ್.ಜಿ.ಎನ್. ಆರ್.ಇ.ಜಿ.ಎ ಒಗ್ಗುಡಿಸುವಿಕೆ ಯೋಜನೆ ಅಡಿಯಲ್ಲಿ ತಾಲೂಕಿನ ಹೊನಗುಂಟಾ ಗ್ರಾಮದಿಂದ ಗೋಳಾ(ಕೆ) ಗ್ರಾಮದವರೆಗಿನ ಸಿಸಿ ರಸ್ತೆ ನಿರ್ವಹಣೆ ಕಾಮಗಾರಿ ಮಾಡದೇ ಸರಕಾರದ ಹಣವನ್ನು ಅಧಿಕಾರಿಗಳು ಹಾಗೂ ಗುತ್ತೆಗೆದಾರ ಲಪಟಾಯಿಸಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಸಮಿತಿಯ ಅಧ್ಯಕ್ಷ ರಾಯಪ್ಪ ಹುರಮುಂಜಿ ಆರೋಪಿಸಿದ್ದಾರೆ.
ಸರಕಾರ ರೈತರ ಜಮೀನಿಗೆ ಹೋಗಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ರಸ್ತೆ ನಿರ್ಮಿಸಲು ಅನುದಾನ ನೀಡಿದರೇ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಶಾಮೀಲಾಗಿ ಸರಕಾರದ ಹಣವನ್ನು ದುರ್ಬಳಕೆ ಮಾಡಿರುವುದನ್ನು ನೋಡಿದರೇ ಇಂತಹ ಎಷ್ಟು ಕಾಮಗಾರಿಗಳನ್ನು ಮಾಡದೇ ಹಣವನ್ನು ಎತ್ತಿ ಹಾಕಿಬರಬಹುದು ಎನಿಸುತ್ತದೆ. ಈಗಾಗಲೇ ಕಾಮಗಾರಿ ಸ್ಥಳವನ್ನು ಪರಿಶೀಲಿಸಿದಾಗ ಅಲ್ಲಿ ಕಾಮಗಾರಿಯೂ ಆಗಿಲ್ಲ.ಅಲ್ಲದೇ 27-03-2023 ಕಾಮಗಾರಿಯ ಅನುಮೋದನೆ ಪಡೆಯಲಾಗಿದೆ.
ಆದರೆ ಅನುಮೋದನೆ ಪಡೆಯುವುದಕ್ಕಿಂತ ಮುಂಚೆ 23-03-2023 ರಂದು ಕಾಮಗಾರಿ ಮಾಡಿದ ಅಳತೆ ಮಾಪನ ಮಾಡಿದ ಬಗ್ಗೆ ನಮೂದಿಸಿದ್ದಾರೆÉ.ಅಲ್ಲದೇ 24-03-2023 ರಂದು ಬಿಲ್ ಕೂಡ ಪಾವತಿಸಲಾಗಿದೆ. ಕಾಮಗಾರಿ ಅನುಮೋದನೆ ಪಡೆಯುವುದಕ್ಕಿಂತ ನಾಲ್ಕು ದಿನಗಳ ಮುಂಚೆಯೇ ಅಳತೆ ಮಾಪನ ಮಾಡಿರುವುದು ಹಾಗೂ ಮೂರು ದಿನಗಳ ಮುಂಚೆಯೇ ಬಿಲ್ ಪಾವತಿ ಮಾಡಿರುವುದು ಕಂಡು ಬಂದಿದೆ. ಕಾಮಗಾರಿ ಮಾಡದೇ ಸಿ.ಎಂ.ಜಿ.ಎಸ್.ವಾಯ್ ಅಡಿಯಲ್ಲಿ ಅರ್ಧದಷ್ಟು 6,72,000 ರೂ. ಹಣ ಗುತ್ತಿಗೆದಾರನಿಗೆ ಪಾವತಿಸಲಾಗಿದೆ.
ಈ ರೀತಿಯಾಗಿ ಅಧಿಕಾರಿಗಳು ಹಾಗೂ ಗುತ್ತಿಗೆದಾರ ಸೇರಿಕೊಂಡು ಕಾಮಗಾರಿ ಮಾಡದೇ ಬಿಲ್ ಪಾವತಿ ಮಾಡಿ ಸರಕಾರದ ನಿಯಮಾವಳಿಯನ್ನು ಗಾಳಿಗೆ ತೂರಿದ್ದಾರೆ. ಅಲ್ಲದೇ ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಲ್ಲಿ ಮಾಹಿತಿ ಕೇಳಿದರೂ ಮಾಹಿತಿ ಒದಗಿಸಿರುವುದಿಲ್ಲ.ಅದಕ್ಕಾಗಿ ಈಗಾಗಲೇ ಮೇಲ್ಮನವಿ ಸಲ್ಲಿಸಿದ್ದೆನೆ.
ಈಗಾಗಲೇ ಸರಕಾರದ ಅನುದಾನ ದುರ್ಬಳಕೆ ಮಾಡಿರುವ ಅಧಿಕಾರಿ ಹಾಗೂ ಗುತ್ತಿಗೆದಾರನ ವಿರುದ್ಧ ಕ್ರಮಕೈಗೊಳ್ಳಲು ಕಲಬುರಗಿ ಕನೆಕ್ಟ್ ವೆಬ್ಸೈಟ್ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ದೂರು ಸಲ್ಲಿಸಿದ್ದು, ಅವರು ತನಿಖೆ ಕೈಗೊಳ್ಳುವಂತೆ ಜಿಪಂ ಸಿಎಸ್ ಅವರಿಗೆ ಸೂಚಿಸಿದ್ದಾರೆ. ಕೂಡಲೇ ಈ ಕಾಮಗಾರಿಗೆ ಸಂಬಂಧಿಸಿದಂತೆ ಸೂಕ್ತವಾದ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ರಾಯಪ್ಪಾ ಹುರಮುಂಜಿ ಒತ್ತಾಯಿಸಿದ್ದಾರೆ.