ಶಹಾಬಾದ: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ನಗರದ ರೈತ ಸಂಘ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ವತಿಯಿಂದ ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ನಿಂಗಣ್ಣ ಪೂಜಾರಿ ಹಾಗೂ ಮಾಜಿ ತಾಲೂಕಾಧ್ಯಕ್ಷ ಮಲ್ಕಣ್ಣ ಮುದ್ದಾ ಅವರು ನಗರಸಭೆಯ ಪೌರಾಯುಕ್ತೆ ಪಂಕಜಾ ರಾವೂರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರೈತರು ಮಾರುಕಟ್ಟೆಗೆ ತಂದಿರುವ ದವಸ ಧಾನ್ಯಗಳನ್ನು ಮಾರಾಟ ಮಾಡಿ, ತದ ನಂತರ ತಮ್ಮ ಗ್ರಾಮಕ್ಕೆ ಹೋಗಲು ರಾತ್ರಿಯಾದಾಗ ದೇವಸ್ಥಾನಗಳಲ್ಲಿ, ಸರಕಾರಿ ಶಾಲೆಗಳ ಆವರಣಗಳಲ್ಲಿ ಮಲಗುವ ಪರಿಸ್ಥಿತಿಯಿದೆ. ಆದ್ದರಿಂದ ಗ್ರಾಮೀಣ ಭಾಗದ ರೈತರ ಹಿತ ದೃಷ್ಟಿಯಿಂದ ಇಂದಿನ ಸರಕಾರಗಳು ಎಪಿಎಂಸಿ ಆವರಣದಲ್ಲಿ ರೈತ ಭವನ ನಿರ್ಮಾಣ ಮಾಡಿದೆ.ಆದರೆ ಅಲ್ಲಿ ಯಾವುದೇ ಸೌಲಭ್ಯಗಳಿಲ್ಲ.ಆದ್ದರಿಂದ ರೈತರಿಗೆ ರಾತ್ರಿ ಉಳಿದುಕೊಳ್ಳಲು ಮಂಚ,ತಲೆದಿಂಬು,ಕುರ್ಚಿ, ಟೇಬಲ್, ಮೈಕ್ ಸೆಟ್ ಒದಗಿಸಬೇಕು.
ಸರ್ಕಾರಗಳು ಅನೇಕ ಮಹಾತ್ಮರ ಪುಣ್ಯ ಪುರುಷರ ಜಯಂತಿಗಳನ್ನು ಆಚರಿಸುತ್ತಿದ್ದು ನಗರಸಭೆಯಲ್ಲಿ ಜಾಗದ ತೊಂದರೆ ಇರುವ ಕಾರಣ ಶಹಾಬಾದ ನಗರದಲ್ಲಿ ಒಂದು ರಂಗಮಂದಿರ ನಿರ್ಮಾಣ ಮಾಡಬೇಕು.
ಕುರುಬ ಸಮಾಜಕ್ಕೆ ಸರ್ವೇ ನಂಬರ್ 169ರಲ್ಲಿ ಸಿ.ಎ.ಸೈಟ್ ಒದಗಿಸಿ ಕಂಪೌಂಡ್ ವಾಲ್ ನಿರ್ಮಾಣ ಮಾಡಿ ಕೊಡಬೇಕು. ಕನಕ ಮೂರ್ತಿ ಸಲುವಾಗಿ ಸುಮಾರು 25 ಲಕ್ಷ ರೂಪಾಯಿ ಹಣವನ್ನು ಮೀಸಲಿಡಬೇಕು. ಕನಕ ವೃತ್ತದಲ್ಲಿ ಮುಂದುವರೆದ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಕುರುಬ ಸಮಾಜಕ್ಕೆ ಒದಗಿಸಿರುವ ರುದ್ರ ಭೂಮಿಯನ್ನು ಅಭಿವೃದ್ಧಿಗೊಳಿಸಿ ಹಾಗೂ ಕಾಂಪೌಂಡ್ ಗೋಡೆ ನಿರ್ಮಿಸಬೇಕು. ಈ ಎಲ್ಲ ಕಾಮಗಾರಿಗಳಿಗೆ ನಗರಸಭೆಯಿಂದ ಹಣವನ್ನು ಮೀಸಲಿಟ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಪೌರಾಯುಕ್ತೆ ಪಂಕಜಾ ರಾವೂರ ಅವರಿಗೆ ಮನವಿ ಪತ್ರ ಸಲ್ಲಿಸಿದರು.