ಕಲಬುರಗಿ: ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಫೆ.14 ರಂದು ರಾತ್ರಿ 8 ಗಂಟೆ ಸುಮಾರಿಗೆ ಧಾರ್ಮಿಕ ಧ್ವಜದ ಕಂಬಕ್ಕೆ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ವಾಡಿ ಪಟ್ಟಣದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು ಪೊಲೀಸರ ಮಧ್ಯಪ್ರವೇಶದಿಂದ ಸಂಘರ್ಷ ತಪ್ಪಿದ್ದು, ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿದ್ದ ವಿಷಯ ಅರಿತ ಪೊಲೀಸರು ಲಘು ಲಾಠಿ ಪ್ರಹಾರ ಮಾಡುವ ಮೂಲಕ ಗುಂಪುಗಳನ್ನು ಚದುರಿಸಿದ್ದಾರೆ.
ವಾಡಿ ಪಟ್ಟಣದಲ್ಲಿ ಫೆ.15ರಂದು ಸಂತ ಸೇವಾಲಾಲ್ ಜಯಂತಿ ಪ್ರಯುಕ್ತ ಮೆರವಣಿಗೆ ಕಾರಣಕ್ಕೆ ಬಂಜಾರಾ ಸಮುದಾಯದ ಯುವಕರು ಮೌಲಾನಾ ಅಬ್ದುಲ್ ಕಲಾಂ ಆಜಾದ್ ವೃತ್ತದಲ್ಲಿರುವ ಆಜಾದ್ ಧ್ವಜ ಸ್ತಂಭಕ್ಕೆ ಸೇವಾಲಾಲ್ ಬಾವುಟ ಕಟ್ಟಲು ಮುಂದಾದಾಗ ಕೆಲ ಮುಸ್ಲಿಂ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಸ್ಥಳದಲ್ಲಿದ್ದ ಎರಡು ಗುಂಪಿನ ಯುವಕರ ನಡುವೆ ವಾಗ್ವಾದ ಉಂಟಾಗಿದೆ. ಆಗ ಪೊಲೀಸರು ಕ್ರೈಂ ಪಿಎಸ್ಐ ದಿವ್ಯಾ ಮಹಾದೇವ ನೇತೃತ್ವದಲ್ಲಿ ಲಘು ಲಾಠಿ ಪ್ರಹಾರ ನಡೆಸಿದ್ದಾರೆ.