ತತ್ವಪದ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ: ಸ್ವಾಗತ ಸಮಿತಿಗೆ ಸಂಗಾವಿ ಅಧ್ಯಕ್ಷ
ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏಪ್ರೀಲ್ ಮಾಸಾಂತ್ಯದಲ್ಲಿ ನಗರದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿರುವ ಜಿಲ್ಲಾ ಮಟ್ಟದ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಗೆ ಆಯ್ಕೆಗೊಂಡ ಸಹಕಾರಿ ಧುರೀಣ ಕಲ್ಯಾಣಕುಮಾರ ಸಂಗಾವಿ ಗಂವ್ಹಾರ ಅವರನ್ನು ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಅಧಿಕೃತ ಆಹ್ವಾನ ನೀಡಿ, ಸತ್ಕರಿಸಲಾಯಿತು. ಕಡಕೋಳ ಮಠದ ಶ್ರೀ ಡಾ. ರುದ್ರಮುನಿ ಶಿವಾಚಾರ್ಯರು ರವರ ಸರ್ವಾಧ್ಯಕ್ಷತೆಯಲ್ಲಿ ಈ ಸಮ್ಮೇಳನ ಜರುಗಲಿದೆ.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಜನರ ಬದುಕನ್ನು ತಿದ್ದಿ ತೀಡಿ ಹಸನಾಗಿಸಲು ತತ್ವಪದಗಳು ತುಂಬಾ ಪರಿಣಾಮ ಬೀರಿದ ಮೌಲ್ಯಗಳಾಗಿವೆ. ತತ್ವಪದಕಾರರು ಸಾಮಾಜಿಕ ಸುಧಾರಣೆಯ ಮೂಲಕ ಜನ ಸಾಮಾನ್ಯರ ಜೀವನ ಮಟ್ಟವನ್ನು ಶುದ್ಧಿಗೊಳಿಸಲು ಶ್ರಮಿಸಿದವರು. ಅವರ ತÀತ್ವಪದಗಳು ಇಂದಿಗೂ ಕೂಡ ಇಂದಿನ ನಮ್ಮ ಸಂಕೀರ್ಣ ವ್ಯವಸ್ಥೆಗೆ ಕನ್ನಡಿಯಂತಾಗಿವೆ. ಈ ದಿಸೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಅನೇಕ ತತ್ವಪದಕಾರರು ಬಾಳಿ ಹೋಗಿದ್ದಾರೆ. ಅವರ ಈ ಸಾಹಿತ್ಯ ಉಳಿಸಿ ಬೆಳೆಸಿಕೊಂಡು ಬರುವವರಲ್ಲಿ ತತ್ವಪದ ಕಲಾವಿದರು ಅಷ್ಟೇ ಪ್ರಮುಖರಾಗಿದ್ದಾರೆ. ಈ ನಿಟ್ಟಿನಲ್ಲಿ ಈ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಸ್ವಾಗತ ಸಮಿತಿಯ ಅಧ್ಯಕ್ಷರೂ ಆದ ಸಹಕಾರಿ ಧುರೀಣ ಕಲ್ಯಾಣಕುಮಾರ ಸಂಗಾವಿ ಮಾತನಾಡಿ, ತತ್ವಪದಗಳಿಲ್ಲದ ಜೀವನ ವ್ಯರ್ಥವಾಗಿದೆ. ಹಸನಾದ ಬದುಕನ್ನು ಕಟ್ಟಿಕೊಳ್ಳಲು ಕಡಕೋಳ ಮಡಿವಾಳಪ್ಪ ನವರು ಸೇರಿದಂತೆ ಅನೇಕ ತತ್ವಪದಕಾರರು ನಮಗೆ ನೀತಿ ಮಾರ್ಗ ತೋರಿಸಿಕೊಟ್ಟಿದ್ದಾರೆ. ಮತ್ತೊಮ್ಮೆ ನಮ್ಮ ಸಮಾಜಕ್ಕೆ ಬೆಳಕು ತರುವಕ್ಕಾಗಿ ಇಂಥ ಸಮ್ಮೇಳನಗಳು ಅವಶ್ಯಕವಾಗಿವೆ. ಬರುವ ದಿನಗಳಲ್ಲಿ ಈ ಸಮ್ಮೇಳನ ಎಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದರು.
ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಹೋರಾಟಗಾರ ರವಿ ಮದನಕರ್, ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ, ಸಾಹಿತಿ ಡಾ. ಸೂರ್ಯಕಾಂತ ಪಾಟೀಲ ಸರಸಂಬಾ, ಉಪನ್ಯಾಸಕ ಧರ್ಮರಾಜ ಜವಳಿ, ಪ್ರಮುಖರಾದ ಚನ್ನಮಲ್ಲಯ್ಯಾ ಜಿ ಹಿರೇಮಠ, ರವೀಂದ್ರಕುಮಾರ ಭಂಟನಳ್ಳಿ, ಗಣೇಶ ಚಿನ್ನಾಕಾರ, ಸುರೇಖಾ ಜೇವರ್ಗಿ, ಸಿದ್ಧಲಿಂಗ ಜಿ ಬಾಳಿ, ಶಿವಾನಂದ ಮಠಪತಿ, ವಿನೋದಕುಮಾರ ಜೇನವೇರಿ, ಎಸ್ ಕೆ ಬಿರಾದಾರ, ಶಾಂತಲಿಂಗ ಪಾಟೀಲ ಕೋಳಕೂರ, ಮಹೇಶ ಚಿಂತನಪಳ್ಳಿ, ರಾಜೇಂದ್ರ ಮಾಡಬೂಳ, ಎಂ ಎನ್ ಸುಗಂಧಿ, ವಿಶ್ವನಾಥ ತೊಟ್ನಳ್ಳಿ, ವಿಜಯಕುಮಾರ ಬಿರಾದಾರ, ಸಂತೋಷ ಕುಡಳ್ಳಿ, ಶಿವಶಂಕರ ವರ್ಮಾ, ಎಚ್ ಎಸ್ ಬರಗಾಲಿ, ಶಿವಾನಂದ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.