ವಾಡಿಯಲ್ಲಿ ಮಿತಿಮೀರಿದ ಕುಡುಕರ ಹಾವಳಿ: ಆಕ್ರೋಶ

0
921

ವಾಡಿ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಶುರುವಾಗಿ ಕುಡುಕರ ಹಾವಳಿ ಹೆಚ್ಚಾಗಿದೆ. ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿಯಿದ್ದರೂ ಪೊಲೀಸರು ಕ್ರಮಕೈಗೊಳ್ಳುತ್ತಿಲ್ಲ ಎಂದು ಪುರಸಭೆ ಸದಸ್ಯ ದೇವಿಂದ್ರ ಕರದಳ್ಳಿ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕರದಳ್ಳಿ, ಕೂಲಿ ಕಾರ್ಮಿಕರಿರುವ ವಾಡಿ ಪಟ್ಟಣದ ಸ್ಲಂ ಬಡಾವಣೆಗಳಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ನಿರ್ಭಯವಾಗಿ ನಡೆಯುತ್ತಿದೆ. ಮನೆ ಮನೆಯಲ್ಲಿ ಸಾರಾಯಿ ಮಾರಾಟ ನಡೆಯುತ್ತಿರುವುದು ಕಾನೂನು ಬಾಹಿರ. ಇದನ್ನು ತಡೆಗಟ್ಟಬೇಕಾದ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಬಡಾವಣೆಗಳಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಬಹುತೇಕ ಕುಡುಕರು ಸಾರಾಯಿ ಮತ್ತಿನಲ್ಲಿ ಪುಂಡಾಟಿಕೆ ಮೆರೆಯುತ್ತಿದ್ದಾರೆ. ಬೀದಿ ರಂಪಾಟ ಮಾಡಿ ಅಶ್ಲೀಲ ಪದಗಳಿಂದ ಕಂಡ ಕಂಡವರೊಂದಿಗೆ ಜಗಳ ಕಾಯುತ್ತಿದ್ದಾರೆ.

Contact Your\'s Advertisement; 9902492681

ಇದು ಸಾರ್ವಜನಿಕರ ನೆಮ್ಮದಿಗೆ ಭಂಗ ತರುತ್ತಿದೆ. ಪೊಲೀಸರಿಗೆ ದೂರು ನೀಡಿದರೂ ಕ್ರಮಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕುಡುಕರನ್ನು ಬಂಧಿಸಲು ಸಾಧ್ಯವಿಲ್ಲ. ನಶೆ ಇಳಿದ ಮೇಲೆ ಠಾಣೆಗೆ ಕರೆತರುತ್ತೇವೆ ಎಂದು ಹೇಳುವ ಮೂಲಕ ದಿನ ದೂಡುತ್ತಿದ್ದಾರೆ. ಇದರಿಂದ ಪಟ್ಟಣದಲ್ಲಿ ವಿಶೇಷವಾಗಿ ಜಾಂಬವೀರ ಕಾಲೋನಿಯಲ್ಲಿ ಕುಡುಕರ ದುಂಡಾವರ್ತನೆ ಮತ್ತಷ್ಟು ಹೆಚ್ಚಾಗಿದೆ.

ಕುಟುಂಬ ಕಲಹಗಳು ಹೆಚ್ಚಾಗಿ ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದು ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಪ್ರಮುಖ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಬೇಕು. ಕುಡಿದು ಬಂದು ಜಗಳ ಕಾಯುವ ಕುಡುಕರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ದೇವಿಂದ್ರ ಕರದಳ್ಳಿ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here