ಕೇವಲ ಒಂದು ವರ್ಷದಲ್ಲಿ ಲಕ್ಷ ಲಕ್ಷ ಓದುಗರ ಗಡಿ ದಾಟಿದ ನಿಮ್ಮ ‘ಇ- ಮೀಡಿಯಾ ಲೈನ್’

1
220

ಕಲಬುರಗಿ: ಕಳೆದ ವರ್ಷ ಇದೇ ಮಾರ್ಚ್ ತಿಂಗಳು. ಆನ್ ಲೈನ್ ಮಿಡಿಯಾ ಶುರು ಮಾಡಬೇಕೆಂದುಕೊಂಡು ಕಾರ್ಯಪ್ರವೃತ್ತವಾದಾಗ ಟೈಟಲ್ ಹಾಗೂ ಅದಕ್ಕೆ ಸಂಬಂಧಿಸಿದ ಲೋಗೋ ರೆಡಿ ಮಾಡುವುದಕ್ಕಾಗಿ ಸಾಕಷ್ಟು ಯೋಜನೆ ಮತ್ತು ಯೋಚನೆ ಮಾಡಲಾಯಿತು.

ಓದುಗರ, ನೋಡುಗರ, ಸಹೃದಯರ ಸಹಕಾರದಿಂದಾಗಿ ‘ಇ-ಮೀಡಿಯಾ ಲೈನ್’ ಎಂಬ ವಿಭಿನ್ನ ಟೈಟಲ್ ಪಡೆದುಕೊಂಡು ಶುರು ಮಾಡಿ ಲೋಗೋಕ್ಕಾಗಿ ಜನರ ಅಭಿಪ್ರಾಯ ಪಡೆಯಲಾಯಿತು. ಆ ವೇಳೆಯಲ್ಲಿ ಸಾಕಷ್ಟು ಜನರು ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸಿದರು. ಕೊನೆಗೊಂದು ಲೋಗೋ ಫೈನಲ್ ಮಾಡಿ ಕಾರ್ಯಾರಂಭ ಮಾಡಿದೆವು.

Contact Your\'s Advertisement; 9902492681

ಹೀಗೆ ಶುರುವಾದ ನಮ್ಮ ಸುದ್ದಿ ಸಂಸ್ಥೆಗೆ ಜನರು ಸಾಕಷ್ಟು ಪ್ರೋತ್ಸಾಹ ನೀಡಿದರು. ನಿಮ್ಮೂರಿನ ಸುದ್ದಿಗೆ ನೀವೇ ವರದಿಗಾರರು, ಸುದ್ದಿಗೆ ರೊಕ್ಕ ಕೊಡಬೇಕಾಗಿಲ್ಲ, ವಾಟ್ಸ್ ಆಪ್ ಇದ್ದವರೇ ವರದಿಗಾರರು, ಪರ್ಯಾಯ ಮಾಧ್ಯಮಕ್ಕೆ ಕೈ ಜೋಡಿಸಿ ಎಂಬಿತ್ಯಾದಿ ಸ್ಲೋಗನ್ (ಘೋಷ ವಾಕ್ಯ) ಗಳಿಗೆ ಓದುಗರು ತೀವ್ರವಾಗಿ ಸ್ಪಂದಿಸಿ ಉತ್ತಮ ಪ್ರೋತ್ಸಾಹ, ಸಹಕಾರ ನೀಡಿದರು.

ಆರಂಭದಲ್ಲಿ ಸಾಕಷ್ಟು ಎಡರು ತೊಡರುಗಳು, ಆರ್ಥಿಕ ಮುಗ್ಗಟ್ಟು, ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡವು. ಅಂದ ಮಾತ್ರಕ್ಕೆ ಈಗ ಸಾಕಷ್ಟು ಹಣ ಬರುತ್ತಿದೆ ಎಂಬುದು ಇದರ್ಥವಲ್ಲ.‌ ಈ ವೇಳೆಯಲ್ಲಿ ಖಾಸಗಿ ವಲಯದ ಅನೇಕರು ಜಾಹೀರಾತು ನೀಡಿ ಜೀವ ಹಿಡಿಯುವಂತೆ ಮಾಡಿದರು.

ಸಮಾಜದಲ್ಲಿ ನಡೆಯುವ ವಿದ್ಯಮಾನಗಳನ್ನು ಆಗಿಂದಾಗಲೇ, ಕ್ಷಣಾರ್ಧದಲ್ಲಿಯೇ ನಿಮ್ಮ ಕೈಗಿಡುವ ‘ಇ-ಮೀಡಿಯಾ ಲೈನ್ ‘ ಸುದ್ದಿ ಕೊಡುವ ವಿಷಯದಲ್ಲಿ ಯಾವೊತ್ತೂ ಹಿಂದೆ ಬಿದ್ದಿಲ್ಲ.
ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಅಷ್ಟೇ ಏಕೆ? ಮೈಸೂರು, ಮಂಡ್ಯ, ಬೆಂಗಳೂರುಗಳಿಂದಲೂ ನಮ್ಮ ವರದಿಗಾರರು ಸುದ್ದಿಗಳನ್ನು ನೀಡತೊಡಗಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದ ಫಲಿತಾಂಶವನ್ನು ಕ್ಷಣ ಕ್ಷಣಕ್ಕೆ ನೀಡುವುದು ಸೇರಿದಂತೆ ಖರ್ಗೆ ಸೋಲಿನ ಕಾರಣಗಳು ಮುಂತಾದ ಸುದ್ದಿಗಳು ಸಾಕಷ್ಟು ಸದ್ದು ಮಾಡಿದವು.

ದನಿ ಇಲ್ಲದವರಿಗೆ ದನಿಯಾದ ಇ ಮೀಡಿಯಾ ಲೈನ್ ಯಾವೊತ್ತೂ ರಾಜಕಾರಣಿಗಳನ್ನು ಓಲೈಸದೆ ಇದ್ದದ್ದನ್ನು ಇದ್ದಂತೆಯೇ ಹೇಳುವ ಮೂಲಕ ಓದುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಜಾತಿ ಪದ್ಧತಿ, ಅಸ್ಪೃಶ್ಯತೆ ನಿವಾರಣೆ, ಮೂಢನಂಬಿಕೆ ನಿವಾರಣೆ ದಿಸೆಯಲ್ಲಿ ಸಾಕಷ್ಟು ವರದಿಗಳನ್ನು ಪ್ರಕಟಿಸುವ ಮೂಲಕ ಸಂಬಂಧಿಸಿದವರ ಗಮನಕ್ಕೆ ತಂದು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗಿದೆ.

ಇದೆಲ್ಲದಕ್ಕೂ ಮಿಗಿಲಾಗಿ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಅನೇಕ ಗಣ್ಯ ವ್ಯಕ್ತಿಗಳಿಂದ ಲೇಖನ ಬರೆಯಿಸಿ ಪ್ರಕಟಿಸಲಾಯಿತು.‌ ಇ- ಮೀಡಿಯಾದಲ್ಲಿ ಧಾರಾವಾಹಿ ರೀತಿಯಲ್ಲಿ ಅನೇಕ ಕಂತುಗಳಲ್ಲಿ ಪ್ರಕಟವಾದ ಮಲ್ಲಿಕಾರ್ಜುನ ಕಡಕೋಳ ಅವರ ಯಡ್ರಾಮಿ ಸೀಮೆಯ ಕಥೆಗಳು ಗ್ರಂಥ ರೂಪದಲ್ಲಿ ಹೊರ ಬಂದಿರುವುದು ನಮ್ಮ ಸಂಸ್ಥೆಗೆ ಕೋಡು ಮೂಡಿಸಿದೆ.

ಹೀಗೆ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ, ರಾಜಕೀಯ, ಸಾಮಾಜಿಕ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಯುವಕರಿಂದ ಲೇಖನಗಳನ್ನು ಬರೆಯಿಸುವ ಮೂಲಕ ಅವರಿಗೂ ವೇದಿಕೆ ಕಲ್ಪಿಸಲಾಗಿದೆ.

ಓದುಗರ ಸಹ ಸ್ಪಂದನೆ: ಕಳೆದ ಒಂದು ವರ್ಷದಿಂದ ಓದುಗರು ಸಾಕಷ್ಟು ಸಹ ಸ್ಪಂದನ ನೀಡುತ್ತಿದ್ದಾರೆ. ಕೆಲ ಸುದ್ದಿಗಳಂತೂ ಅಪ್ ಲೋಡ್ ಮಾಡಿದ ಕೆಲವೇ ಕ್ಷಣಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ವೀಕ್ಷಿಸಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಇಂತಹ ಅನೇಕ ಉದಾಹರಣೆಗಳನ್ನು ನೀಡಬಹುದು.

ತೀರಾ ಇತ್ತೀಚಿನ ಉದಾಹರಣೆ ಹೇಳಬೇಕಾದರೆ ಕರೋನಾ ವೈರಸ್ ಕುರಿತು ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿದ್ದ ಸುದ್ದಿಯನ್ನು ಅಲ್ಲಗಳೆದು ಕಲಬುರಗಿ ಡಿಸಿ ಬಿ. ಶರತ್ ಅವರ ಸ್ಪಷ್ಟನೆ ಸುದ್ದಿ ಅಪ್ಲೋಡ್ ಮಾಡಿದಾಕ್ಷಣವೇ ಓದುಗರು ಇದನ್ನು ವೈರಸ್ ನಂತೆ ವೈರಲ್ ಮಾಡಿದರು. ಅಂತೆಯೇ ಸ್ವತಃ ಡಿಸಿ ಕೂಡ ನಮ್ಮ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.

ಈ ಹಿಂದೆ ಗುರುಶಾಂತ ಪಟ್ಟೇದಾರ ಅವರ ಪತ್ರಿಕಾಗೋಷ್ಠಿಯ ಸುದ್ದಿ ಕೂಡ ಹಾಗೆಯೇ ಸುದ್ದಿ ಮಾಡಿತ್ತು. ಅಂತೆಯೇ ಸ್ವತಃ ಅವರೇ ಫೋನ್ ಮಾಡಿ ” ಇದೇನ್ರೀ ನೀವು ನಮಗೆ ಏನ್ ಮಾಡಿ ಬಿಟ್ರಿ, ಬೆಂಗಳೂರು, ಕೋಲಾರ, ಮಂಡ್ಯ, ಮೈಸೂರು, ಬಾಗಲಕೋಟೆ, ವಿಜಯಪುರ ಎಲ್ಲೆಲ್ಲಿಂದ ಫೋನ್ ಬರ್ತಿವೆ. ನನಗೆ ಅಷ್ಟೇ ಹೊಗಳಿದ್ದಾರೆ. ಬೈದವರೂ ಅಷ್ಟೇ ಇದ್ದಾರೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದರು.

ಇಂತಹ ಸಾಕಷ್ಟು ಉದಾಹರಣೆಗಳನ್ನು ನಾವು ನಿಮಗೆ ನೀಡಬಹುದು.‌ ಒಟ್ಟಾರೆಯಾಗಿ ನಿಮ್ಮೆಲ್ಲರ ಸಹಕಾರ ನಮಗೆ ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ವಿಶ್ವಾಸ, ಪ್ರೀತಿ, ಸಹಾಯ, ಸಹಕಾರ ನಮ್ಮ ಮೇಲಿರಲಿ. ನಾವು ಕೂಡ ನಮ್ಮ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕ ಮತ್ತು ಅಷ್ಟೇ ಕಾಳಜಿಪೂರ್ವಕವಾಗಿ ಮಾಡುತ್ತೇವೆ ಎಂದು ಈ ಮೂಲಕ ಭರವಸೆ ನೀಡುತ್ತೇವೆ.

-ಶಿವರಂಜನ್ ಸತ್ಯಂಪೇಟೆ
ಸಾಜಿದ್ ಅಲಿ

1 ಕಾಮೆಂಟ್

  1. ಆತ್ಮೀಯರೇ…ಇ- ಮೀಡಿಯಾ ಮೂಲಕ ತಮ್ಮ ಸಾಮಾಜಿಕ ಕಳಕಳಿ ಹಾಗೂ ಜವಾಬ್ದಾರಿ, ಬದ್ಧತೆಯನ್ನು ಹಂಚಿ ಕೊಳ್ಳಲು ಪೂರಕವಾಗಿದೆ… ಇದು ಸಮಾಜ ಮುಖಿ ಕಾಯಕ ವಾಗಿದ್ದರಿಂದ ಎಲ್ಲವನ್ನು ಅನುಭವಿಸಬೇಕು… ನಿಮ್ಮ ನೇರ, ನಿಷ್ಪಕ್ಷಪಾತ ದೋರಣಿಗಳು ಮುಂದು ವರಿಯಲಿ ಸಕಲ ಕನ್ನಡಿಗರು ಇ-ಮೀಡಿಯಾ ಲಾಭ ಪಡೆಯುವಂತಾಗಲಿ.. ಶುಭಾಶಯಗಳು ಹಾಗೂ ಅಭಿ ನಂದನೆಗಳು…ಡಾ.ಗಂಗಾಧರಯ್ಯ ಹಿರೇಮಠ.ದಾವಣಗೆರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here