ಬದುಕಿದರೆ ಏನನ್ನಾದರೂ ಮಾಡಬಹುದು ಆದರೆ, ನೀನು ಬದುಕಿರಬೇಕಷ್ಟೇ

1
254

ಧರ್ಮಕ್ಕೂ, ದೆವ್ವಕ್ಕೂ ದೇವರಿಗೂ ಅಂಜದ ಮಾನವ ಪ್ರಾಣಿ ಜೀವಕ್ಕೆ ಅಂಜುತ್ತಾನೆ ಎನ್ನುವುದು ಸಾಬೀತಾಯಿತು. ತನ್ನದೇ ಆದ ಕಲ್ಪನಾ ಲೋಕದಲ್ಲಿ ಜೀವಿಸುತ್ತಿದ್ದ ಮಾನವ ಜೀವಿ ಈಗ ಜೀವದ ಬೆಲೆ ಏನು ಎನ್ನುವುದನ್ನು ಕಂಡುಕೊಂಡ. ಬ್ಯಾಂಕಿನ ಖಾತೆಯಲ್ಲಿ ಎಷ್ಟು ದುಡ್ಡಿದ್ದರೂ ಕೆಲಸಕ್ಕೆ ಬರುವುದಿಲ್ಲ ಎನ್ನುವುದು ಖಾತ್ರಿಯಾಯಿತು. ದೇಹ ದುಡಿಯದ ಹೊರತು ವಿಶ್ರಾಂತಿ ಪಡೆಯುವುದಿಲ್ಲ ಅದರಂತೆ ಸಂಬಂಧಗಳನ್ನು ಲೆಕ್ಕಿಸದೆ ಬಾಳಿದರೇ ಉಳಿಗಾಲವಿಲ್ಲ ಎನ್ನುವುದನ್ನು ಅರಿತುಕೊಂಡ. ಧರ್ಮ ದೊಡ್ಡದಲ್ಲ ದಯೆ ದೊಡ್ಡದು, ಜಾತಿ ದೊಡ್ಡದಲ್ಲ ನೀತಿ ದೊಡ್ಡದು ಎನ್ನುವ ಮಾತನ್ನು ಮತ್ತೆ ಮತ್ತೆ ಪುಷ್ಠಿಕರಿಸಿದೆ.

ಕೊರೋನಾ ನೂರಾರು ಪಾಠಗಳನ್ನು ಕಲಿಸಿದೆ. ಸಮಯದ ಮಹತ್ವ ತಿಳಿಸಿಕೊಟ್ಟಿದೆ. ಬಂಧು ಬಳಗದವರ ಮೌಲ್ಯ ತಿಳಿಸಿದೆ. ಹಣ ಮಾಡಬೇಕೆಂಬ ಹಪಾಹಪಿತನದಲ್ಲಿ ತನ್ನದೇ ಸ್ವಂತ ಕುಟುಂಬವನ್ನು ನಿರ್ಲಕ್ಷಿಸಿದವರಿಗೆ ಕುಟುಂಬದ ಮಹತ್ವದ ಪಾಠ ಹೇಳಿದೆ. ಮಾನವ ಕೃತಕವಾಗಿ ನಿರ್ಮಿಸಿಕೊಂಡ ಬದುಕು ಶಾಶ್ವತವಲ್ಲ ಎಂಬ ಸತ್ಯವನ್ನು ಸಾರಿ ಹೇಳಿದೆ. ದುಡಿಯುವ ಶ್ರಮಿಕ ವರ್ಗದವರ ಮೌಲ್ಯ ಜೀವನಕ್ಕೆ ಅರ್ಥ ಹೇಳಿಕೊಟ್ಟಿದೆ. ಜಾತಿ, ಧರ್ಮ, ಕುಲ, ಗೋತ್ರ ನೋಡದೇ ಯಾರನ್ನು ಬೇಕಾದರೂ ಕೊರೋನಾ ಅಪ್ಪಿಕೊಳ್ಳಬಹುದು. ಅಪ್ಪಿ ಮುದ್ದಾಡಬಹುದು.

Contact Your\'s Advertisement; 9902492681

ಮರೆತು ಹೋದ ಗ್ರಾಮೀಣ ಆಟಗಳನ್ನು ಕೊರೋನಾ ಮತ್ತೆ ನೆನಪಿಸಿದೆ. ಹೊಲ ಗದ್ದೆಗಳತ್ತ ಮುಖ ಮಾಡದ ಜನರು ಹೊಲ ಗದ್ದೆಗಳಿಗೆ ಹೋಗಲು ಶುರು ಮಾಡಿದ್ದಾರೆ ಕೆಲಸಕ್ಕಾಗಿ ಅಲ್ಲದಿದ್ದರೂ ಪ್ರಶಾಂತ ವಾತಾವರಣಕ್ಕಾಗಿ. ಮರದ ಕೆಳಗಡೆ ಕುಳಿತು ಕುಟುಂಬಸ್ಥರ, ಸ್ನೇಹಿತರ ಜೊತೆ ಸಂತೃಪ್ತಿಯಾಗಿ ಊಟ ಮಾಡುತ್ತಿದ್ದಾರೆ. ಇಂತಹ ಊಟ ಮಾಡಿ ಎಷ್ಟು ವರ್ಷಗಳಾಗಿವೆಯೋ ಎಂದು ಮನಸ್ಸಿನಲ್ಲಿ ಮಮ್ಮಲ ಮರಗುತ್ತಿದ್ದಾರೆ. ಅವರೆಲ್ಲರಿಗೆ ಈಗ ನಿಜ ಜೀವನದ ಅರ್ಥ ಗೊತ್ತಾಗುತ್ತಿದೆ.

ಕಾರು ಕೊಳ್ಳಬೇಕು, ಬಂಗಲೆ ಕಟ್ಟಿಸಿಕೊಳ್ಳಬೇಕು ಎಂಬ ಜನರಿಗೆ ಈಗ ಜೀವ ಉಳಿದರೇ ಸಾಕು ಎಂಬ ಭಾವನೆ ವ್ಯಕ್ತವಾಗುತ್ತಿದೆ. ಅನುಮಾನದಿಂದ ನೋಡುತ್ತಿದ್ದವರ ಮೇಲೆ ಅನುಕಂಪ ಬರಲು ಪ್ರಾರಂಭವಾಗಿದೆ. ಜೀವನದ ಪ್ರತಿ ಕ್ಷಣದಲ್ಲಿ ಯಾರೂ ಕನಿಷ್ಟರಲ್ಲ, ಎಲ್ಲರೂ ಒಂದಲ್ಲ ಒಂದು ದಿನ ಕೆಲಸಕ್ಕೆ ಬರುತ್ತಾರೆ ಎಂಬ ಸತ್ಯದ ದರ್ಶನವಾಗಿದೆ.
ಮಾನವ ಜನ್ಮ ದೊಡ್ಡದು ಸಾರ್ಥಕ ಮಾಡಿಕೊಳ್ಳಿರಣ್ಣ ಎಂಬ ಹಿರಿಯರ ಮಾತು ಕಿವಿಯಲ್ಲಿ ಅನುರಣಿಸುತ್ತಿದೆ. ನನ್ನ ಮಟ್ಟಿಗಂತೂ ಕೊರೋನಾ ಒಂದು ಪಾಠದ ಖಣಿಯೇ ಆಗಿದೆ. ನೋಡದೇ ಉಳಿದ ಎಷ್ಟು ಕಲಾತ್ಮಕ ಚಿತ್ರಗಳನ್ನು ಸಾಧ್ಯವಾದಷ್ಟು ನೋಡಿದ್ದೆನೆ, ಓದದೇ ಉಳಿದಿದ್ದ ಹತ್ತಾರು ಪುಸ್ತಕಗಳನ್ನು ಓದಲು ಹಚ್ಚಿದೆ, ಮನೆಯಲ್ಲಿ ವರ್ಷಗಟ್ಟಲೇ ಮಾಡದೇ ಉಳಿದಿದ್ದ ಕೆಲಸಗಳನ್ನು ಮಾಡಲು ಹಚ್ಚಿದೆ. ಅಂತಿಮವಾಗಿ ಬದುಕಿದರೆ ಏನನ್ನಾದರೂ ಮಾಡಬಹುದು ಆದರೆ, ಜೀವವೇ ಹೋದ ಮೇಲೆ ಏನೂ ಮಾಡಲು ಸಾದ್ಯವಿಲ್ಲ ಎನ್ನುವುದನ್ನು ಕಲಿಸಿ ಕೊಟ್ಟಿದೆ. ಜನಜೀವನದ ಸಾಮಾಜಿಕ ವ್ಯವಸ್ಥೆಯಲ್ಲಿ ಒಬ್ಬ ವ್ಯಕ್ತಿಯಾಗಿ ತಾನು ಸ್ವಂತವಾಗಿ ಏನು ಮಾಡಬಲ್ಲೇ ಅದರ ಪರಿಣಾಮ ಏನಾದೀತು ಎಂಬ ಮಹತ್ತರ ಸಂದೇಶ ನೀಡಿದೆ.

ಕೊನೆಯದಾಗಿ ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ ಎನ್ನುವ ಮಾತಿನಂತೆ ಜೀವನದ ಬಂಡಿಯನ್ನು ಮುನ್ನಡೆಸಲು ಪುಣ್ಯ ಕಾರ್ಯಗಳು ನಮ್ಮನ್ನು ಸಾವಿನ ದವಡೆಯಿಂದ ಪಾರು ಮಾಡುತ್ತವೆ. ಆದರೆ, ನಮ್ಮ ಜೀವನದ ಅನೇಕ ನಮ್ಮ ಪಾಪ ಕರ್ಮಗಳು ನಾವು ಎಷ್ಟೇ ಕೊಸರಾಡಿದರೂ ನಮ್ಮನ್ನು ಸಾವಿನಿಂದ ಪಾರು ಮಾಡಲು ಸಾಧ್ಯವಿಲ್ಲ ಆದ್ದರಿಂದ ಇನ್ನೊಬ್ಬರ ಕಷ್ಟಗಳಿಗೆ ಹೆಗಲು ಕೊಡೊಣಾ. ನಮ್ಮ ಜೀವದಂತೆ ಇನ್ನೊಬ್ಬರ ಜೀವ ಎಂದು ಭಾವಿಸೋಣಾ. ಶರಣರ ವಚನದಂತೆ ಬಾರದು ಬಪ್ಪದು, ಬಪ್ಪದು ತಪ್ಪದು ಎಂಬಂತೆ ಬಂದಿದ್ದನ್ನು ಸ್ವೀಕಾರ ಮಾಡುವ ಮನೋಭಾವ ಬೆಳಸಿಕೊಳ್ಳೋನಾ ಏನಂತೀರಾ?.

ಹಣಮಂತ ಶೇರಿ, ಖಜೂರಿ
ಹವ್ಯಾಸಿ ಬರಹಗಾರ

1 ಕಾಮೆಂಟ್

  1. ಅದ್ಭುತ ಸಾಲುಗಳು ಸರ್. ಕರೋನಾ ನಮ್ಮ ಬದುಕು ಹಾಗೂ ಚಿಂತನೆಯ ದಿಕ್ಕನ್ನು ಬದಲಿಸಿದ ಪರಿಯನ್ನು ನಮ್ಮ ಮುಂದೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here