ಶಹಾಪುರ: ಇಲ್ಲಿನ ನ್ಯಾಯಾಲಯದಲ್ಲಿ ಮಂಗಳವಾರ ಸಂಜೆ ನಡೆಯುತ್ತಿದ್ದ ಕ್ರಿಮಿನಲ್ ಪ್ರಕರಣದ ವಿಚಾರಣೆಯನ್ನು ಜೋರು ಮಳೆ ಹಾಗೂ ಗುಡುಗಿನ ವಿಪರೀತ ಸಪ್ಪಳದಿಂದ ಮುಂದೂಡಿದ ಪ್ರಸಂಗ ನಡೆಯಿತು.
ನ್ಯಾಯಾಲಯದ ಪ್ರಕರಣಗಳನ್ನು ನಡೆಸಲು ಅನುಕೂಲವಾಗುವಂತೆ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕೋರ್ಟ್ ಆವರಣದ ಮುಂದೆ ಕಕ್ಷಿದಾರರು ಹಾಗೂ ಸಾಕ್ಷಿದಾರರಿಗೆ ಕೋವಿಡ್ ಪರೀಕ್ಷೆ ಕೂಡ ನಡೆಸಲಾಗುತ್ತಿದೆ.
ಆದರೆ, ಮಂಗಳವಾರ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಅಬ್ಬರದ ಮಳೆಯ ಜೊತೆಯಲ್ಲಿ ಸಿಡಿಲು ಹಾಗೂ ಗುಡುಗಿನ ಸಪ್ಪಳ ಹೆಚ್ಚಾಯಿತು. ಅಲ್ಲದೆ, ಸಾಕ್ಷಿದಾರರ ಕಟಕಟೆಯ ಸುತ್ತಲೂ ಪ್ಲಾಸ್ಟಿಕ್ ಹೊದಿಕೆ ಇರುವುದರಿಂದ ಸರಿಯಾಗಿ ಕೇಳಿಸಲಿಲ್ಲ. ಆಗ ಕ್ರಿಮಿನಲ್ ಪ್ರಕರಣದ ವಾದ ಮಾಡುತ್ತಿದ್ದ ವಕೀಲರೊಬ್ಬರು, ‘ಗುಡುಗಿನ ಸಪ್ಪಳ ಹೆಚ್ಚಾಗಿದೆ. ಸಾಕ್ಷಿದಾರ ಏನು ಹೇಳುತ್ತಿದ್ದಾರೆ ಕೇಳಿಸುತ್ತಿಲ್ಲ. ಕಾಲಾವಕಾಶ ಕೊಡಿ’ ಎಂದು ನ್ಯಾಯಾಧೀಶರನ್ನು ವಿನಂತಿಸಿದರು. ಆಗ ನ್ಯಾಯಾಧೀಶರು ಪ್ರಕರಣವನ್ನು ಮುಂದೂಡಿದರು.