ಶಹಾಬಾದ:ನಗರಸಭೆಯಲ್ಲಿ ಡಿಸೆಂಬರ್ 19 ರಂದು ನಡೆಯುವ ಸಾಮನ್ಯ ಸಭೆಯಲ್ಲಿ ವಿವಿಧ ಬೇಡಿಕೆಗಳನ್ನು ಚರ್ಚಿಸಬೇಕೆಂದು ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ ಪೌರಾಯುಕ್ತರನ್ನು ಆಗ್ರಹಿಸಿದ್ದಾರೆ.
ನಗರಸಭೆಯಲ್ಲಿ ಆಸ್ತಿ ವರ್ಗಾವಣೆ ಶುಲ್ಕವನ್ನು ಶೇ.8ರಷ್ಟು ಪಡೆದುಕೊಳ್ಳುತ್ತಿದ್ದಾರೆ.ಇದರಿಂದ ಸಾರ್ವಜನಿಕರಿಗೆ ಎಲ್ಲಿಲ್ಲದ ತೊಂದರೆ ಅನುಭವಿಸಬೇಕಾಗಿ ಬಂದಿದೆ.ಆದ್ದರಿಂದ ಪೌರನಿಗಮಗಳ ಅಧಿನಿಯಮ 1964 ರ ಕಾಯ್ದೆ ಅನುಸಾರ ಪರಿಶೀಲಿಸಿ ಶೇ.4 ರಷ್ಟು ತೆರಿಗೆ ವಿಧಿಸಬೇಕು. ಶಹಾಬಾದ ಹೊಸ ತಾಲೂಕಾ ರಚನೆಯಾಗಿದ್ದು, ಆಯುಕ್ತರ ಉಪವಿಭಾಗವನ್ನು ಘೋಷಿಸಿ, ಮಂಜೂರು ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.
ಅಲ್ಲದೇ ನಗರಸಭೆಯ ಪ್ರಸ್ತುತ ಕಟ್ಟಡ ಹಳೆಯದಾಗಿದ್ದು, ಅದನ್ನು ಕೆಕೆಆರ್ಡಿಬಿ ಅನುದಾನದಲ್ಲಿ ಹಳೆಯದನ್ನು ತೆಗೆದು ಹೊಸ ಕಟ್ಟಡ ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸಬೇಕು. ಅಲ್ಲದೇ ನಗರದಲ್ಲಿ ಹಳೆ ಪುರಕಲ್ ಮನೆಗಳಲ್ಲಿರುವ ಬಡಜನರು ಬಹಳ ದಿನಗಳಿಂದ ತೆರಿಗೆ ಪಾವತಿಸಿಲ್ಲ.ಅವರಿಗೆ ಬಡ್ಡಿಯಿಂದ ವಿನಾಯಿತಿ ನೀಡಿ, ತೆರಿಗೆಯನ್ನು ಕಟ್ಟಿಸಿಕೊಳ್ಳುವತ್ತ ಸಾಮನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಬೇಕೆಂದು ಡಾ.ರಶೀದ್ ಪೌರಾಯುಕ್ತರನ್ನು ಒತ್ತಾಯಿಸಿದ್ದಾರೆ.