ಶಹಾಬಾದ: ಕೇಂದ್ರ ಸರಕಾರದ ರೈತ ವಿರೋಧಿ ಮತ್ತು ಕಾರ್ಪೋರೇಟ ಪರ ನೀತಿಗಳನ್ನು ಧಿಕ್ಕರಿಸಿ ದೆಹಲಿ ಚಲೋ ಹೋರಾಟಕ್ಕೆ ಒಂದು ತಿಂಗಳು ತುಂಬಿದ್ದು, ರೈತ-ಕೃಷಿಕಾರ್ಮಿಕರ ಸಂಘಟನೆಯ ತಾಲೂಕಾ ಸಮಿತಿ ವತಿಯಿಂದ ಹೊನಗುಂಟಾ ಗ್ರಾಮದಲ್ಲಿ ಈ ದಿನವನ್ನು ದಿಕ್ಕಾರ ದಿನ ಚಳುವಳಿಯಾಗಿ ಆಚರಿಸಿದರು.
ರೈತ ಕೃಷಿ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷ ಗಣಪತ್ರಾವ್.ಕೆ.ಮಾನೆ ಮಾತನಾಡಿ, ಕೇಂದ್ರ ಬಿ.ಜೆ.ಪಿ. ಸರಕಾರದ ರೈತವಿರೋಧಿ, ಕಾರ್ಮಿಕರ ವಿರೋಧಿ ಮಸೂದೆ ಹಾಗೂ ರಾಜ್ಯದಲ್ಲಿ ಎ.ಪಿ.ಎಂ.ಸಿ. ತಿದ್ದುಪಡಿ ಕಾಯ್ದೆ, ಭೂ ಸ್ವಾಧೀನ ತಿದ್ದುಪಡಿ ಕಾಯ್ದೆಗಳುಕಾಪೋರೇಟ್ ಮನೆತನಗಳಿಗಾಗಿ ಜಾರಿಗೊಳಿಸುತ್ತಿರುವುದನ್ನು ವಿರೋಧಿಸಿ ಇವುಗಳನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಲಾಗಿದೆ.ಈ ಹೊಸ ಕೃಷಿ ಕಾಯ್ದೆಗಳ ವಿರುದ್ಧ ದೇಶದಾದ್ಯಂತ ರೈತ ಸಂಘಟನೆಗಳು ನಡೆಸುತ್ತಿರುವ ಬೃಹತ್ ಆಂದೋಲನಕ್ಕೆ ಒಂದು ತಿಂಗಳಾದರು ಕೇಂದ್ರ ಸರಕಾರ ರೈತರಿಗೆ ಸ್ಪಂದನೆ ನೀಡದೇ ಬಂಡವಾಳಶಾಹಿಗಳ ಏಜಂಟರಾಗಿ ಕೆಲಸ ಮಾಡುತ್ತಿದೆ ಎಂದರು.
ದೆಹಲಿಯ ಕೊರೆಯುವ ಚಳಿಯಲ್ಲಿ 30 ದಿನಗಳಿಂದ ಬಿಡಾರ ಹೂಡಿರುವ ಉತ್ತರ ಭಾರತದ ಸುಮಾರು ಎರಡು ಕೋಟಿಗೂ ಅಧಿಕ ರೈತರು ಕೇಂದ್ರ ಸರಕಾರದ ಕರಾಳ ರೈತ ವಿರೋಧಿ ಮಸೂದೆಗಳ ವಿರುದ್ಧ ಧಿರೋದಾತ್ತವಾಗಿ ಹೋರಾಡುತ್ತಿದ್ದಾರೆ. ಈ ಹೋರಾಟವನ್ನು ಮುರಿಯಲು ಒಂದೆಡೆ ಕೇಂದ್ರ ಸರಕಾರವು ಹರಸಾಹಸವನ್ನು ಮಾಡುತ್ತಾ ಎಲ್ಲಾ ಪ್ರಜಾತಾಂತ್ರಿಕ ರೂಢಿಗಳನ್ನು ಮಣ್ಣು ಮಾಡಿ ರೈತರ ಮೇಲೆ ದೌರ್ಜನ್ಯವೆಸುತ್ತಿದ್ದಾರೆ. ಇನ್ನೊಂದೆಡೆ ಮೊನ್ನೆ ಸುಪ್ರಿಂ ಕೋರ್ಟ ರೈತರ ಹೋರಾಟದ ಕುರಿತು ತನ್ನ ಅನುಕಂಪವನ್ನು ವ್ಯಕ್ತಪಡಿಸಿ ರೈತರ ಹೋರಾಟದ ಹಕ್ಕನ್ನು ಎತ್ತಿಹಿಡಿದಿದೆ. ಸರಕಾರವು ರೈತ ನಾಯಕರೊಂದಿಗೆ6 – 7 ಸುತ್ತಿನ ಮಾತುಕತೆಯ ನಂತರ ತನ್ನ ಬಂಡವಾಳಶಾಹಿಗಳ ಪರವಾದ ನಿಷ್ಠೆಯನ್ನು ಮುಂದುವರೆಸುತ್ತಾ ರೈತರೊಂದಿಗಿನ ಮೊಂಡುತನವನ್ನು ಪ್ರದರ್ಶಸಿದೆ. ಅಲ್ಲದೆ ದೇಶಪ್ರೇಮಿ ರೈತರಿಗೆ ಕಳಂಕ ಹಚ್ಚುವ ಅನೈತಿಕ ಕೆಲಸವನ್ನು ಮಾಡುತ್ತಿದೆ. ‘ಈ ಕರಾಳ ಕಾನೂನುಗಳನ್ನು ಕೇಂದ್ರ ಸರ್ಕಾರ ರದ್ದುಪಡಿಸುವವರೆಗೂ ನಾವು ಯಾವ ಬೆಲೆಯನ್ನು ಕೊಟ್ಟಾದರೂ ಹೋರಾಡುತ್ತೇವೆ. ಸಾವನ್ನೂ ಎದುರಿಸುತ್ತೇವೆ’ಎಂದು ದೆಹಲಿಯಲ್ಲಿ ರೈತರು ತಮ್ಮ ದೃಢಸಂಕಲ್ಪವನ್ನು ಎತ್ತಿ ಹಿಡಿದಿದ್ದು ನಾವು ಅವರಿಗೆ ಸಂಪೂರ್ಣ ಬೆಂಬಲ ನೀಡಬೇಕೆಂದರು.
ಕಾರ್ಯಕ್ರಮದಲ್ಲಿ ಜಗನ್ನಾಥ.ಎಸ್.ಹೆಚ್,ಗುಂಡಮ್ಮ ಮಡಿವಾಳ, ತಿಮ್ಮಯ್ಯ.ಬಿ.ಮಾನೆ, ನೀಲಕಂಠ.ಎಮ್.ಹುಲಿ, ತುಳಜರಾಮ.ಎನ್.ಕೆ, ರಮೇಶ ದೇವಕರ, ಪ್ರವೀಣ್, ಕಿರಣ್,ರಾಜೇಂದ್ರ ಅತನೂರ ಸೇರಿ ಹಲವಾರು ರೈತರು ಭಾಗವಹಿಸಿದರು.