ಕಲಬುರಗಿ: ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಕಳೆದ ಐದು ವರ್ಷದಲ್ಲಿ ಮಾಡಿರುವ ಕೆಲಸ ತೃಪ್ತಿ ತಂದಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹೆಚ್. ಮಲಾಜಿ ಅವರು ತಿಳಿಸಿದ್ದಾರೆ.
ಕಳೆದ ದಿ.07-05-2016 ರಿಂದ ದಿ.06-05-2021 ವರೆಗೆ ಪೂರ್ಣ 5 ವರ್ಷಗಳ ಕಾಲ ಕಲಬುರಗಿ ಜಿಲ್ಲಾ ಪಂಚಾಯತ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಪಂಚಾಯತ್ ರಾಜ್ ಅಧಿನಿಯಮ-2016ರಂತೆÉ ಗುರುವಾರಕ್ಕೆ ತಮ್ಮ ಅವಧಿ ಮುಕ್ತಾಯಗೊಂಡಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನನ್ನ ಆಡಳಿತದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳು ಮಾಡಲಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಆಸ್ಪತ್ರೆ, ಶಾಲೆ, ಪಶು ಚಿಕಿತ್ಸಾಲಯ, ಅಂಗನವಾಡಿ ಕಟ್ಟಡ, ಶೌಚಾಲಯಗಳು ಹಾಗೂ ಇನ್ನಿತರ ಕಟ್ಟಡಗಳ ನಿರ್ಮಾಣ ಹಾಗೂ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಇದಲ್ಲದೆ ಗ್ರಾಮೀಣ ಭಾಗದಲ್ಲಿ ರಸ್ತೆಗಳ ನಿರ್ವಹಣೆ ಮತ್ತು ಕುಡಿಯುವ ನೀರಿನ ಕಾಮಗಾರಿಗಳು, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗಿದೆ. ಗ್ರಾಮೀಣ ಕುಡಿಯುವ ನೀರು ಇಲಾಖೆಯ ನೂತನ ಕಛೇರಿ ಕಟ್ಟಡ, ಪಂ.ರಾಜ್. ಇಂ.ವಿಭಾಗ ಇಲಾಖೆಯ ಸಭಾಂಗಣ ಕಟ್ಟಡ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ವಸತಿಗೃಹ ಕಟ್ಟಡ ನಿರ್ಮಾಣ ಸಹ ಮಾಡಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
2016ರಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಅಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿದ್ದ ಪ್ರಸ್ತುತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಆಯುಕ್ತರಾಗಿರುವ ಅನಿರುದ್ಧ ಪಿ. ಶ್ರವಣ್ ರವರ ಪರಿಶ್ರಮದಿಂದ ನರೇಗಾದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಕಲಬುರಗಿ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸಿದ್ದು, ನಮ್ಮೆಲ್ಲರಿಗೆ ಹೆಮ್ಮೆಯ ವಿಷಯವಾಗಿದೆ.
ಈ ಅವಧಿಯಲ್ಲಿ ವಿಶೇಷವಾಗಿ ರೈತರ ಜಮೀನಿನಲ್ಲಿ ಕಲ್ಲುಗಳು ಆಯ್ದು ಬದುಗಳಿಗೆ ಹಾಕುವ ಯೋಜನೆ ವಿಶಿಷ್ಟವಾಗಿತ್ತು. ಗ್ರಾಮೀಣ ಭಾಗದ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸಂತೆ ಕಟ್ಟೆಗಳ ನಿರ್ಮಾಣ, ಆಹಾರ ಧಾನ್ಯ ಶೇಖರಣೆಗೆ ಸಾಕಷ್ಟು ಗೋದಾಮುಗಳ ನಿರ್ಮಾಣ ಸಹ ಮಾಡಲಾಗಿದೆ ಎಂದು ಸುವರ್ಣಾ ಹೆಚ್. ಮಲಾಜಿ ಅವರು ತಮ್ಮ ಕಾರ್ಯನಿರ್ವಹಣೆ ಬಗ್ಗೆ ಹೇಳಿಕೊಂಡಿದ್ದಾರೆ.
ಕೊರೋನಾ ವಾರಿಯರಸ್ಸ್ಗಳಿಗೆ ಧನ್ಯವಾದ: ಇನ್ನು ಕಳೆದ ವರ್ಷದಿಂದ ನಮಗೆಲ್ಲರಿಗೂ ಪಿಡುಗಾಗಿ ಕಾಡುತ್ತಿರುವ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಹಗಲಿರುಳು ಕಾರ್ಯನಿರ್ವಹಿಸುತ್ತಿರುವ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಕಂದಾಯ, ಪೋಲಿಸ್ ಇಲಾಖೆ, ಪಂಚಾಯತ ರಾಜ್ ಇಲಾಖೆ ಹಾಗೂ ಇತರೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸುವರ್ಣಾ ಹೆಚ್. ಮಲಾಜಿ ಅವರು ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಇದಲ್ಲದೆ ನನ್ನನ್ನು ಕಲಬುರಗಿ ಜಿಲ್ಲಾ ಪಂಚಾಯತ ಅಧ್ಯಕ್ಷರಾಗಿ ಆಯ್ಕೆ ಮಾಡಲು ಕಾರಣಿಭೂತರಾದ ಮುಖ್ಯಮಮತ್ರಿಗಳಿಗೂ, ಸಚಿವರಿಗೂ, ಎಲ್ಲಾ ಚುನಾಯಿತ ಪ್ರತಿನಿಧಿಗಳಿಗೂ, ಸರ್ವ ಪಕ್ಷದ ಮುಖಂಡರಿಗೂ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.