ಸುರಪುರ: ಹುಣಸಗಿ ತಾಲೂಕಿನ ಹಜರತ್ ಟಿಪ್ಪು ಸುಲ್ತಾನ್ ಸಂಯುಕ್ತ ರಂಗ ಸಂಘಟನೆ ಅಧ್ಯಕ್ಷ ರಸೂಲ್ ಬೆಣ್ಣೂರ್ ಮೇಲೆ ಹಲ್ಲೆ ಮಾಡಿದವರ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯಿಸಿ ನಗರದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿದೆ.
ಹಜರತ್ ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಜಿಲ್ಲಾ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಮಿತಿ ಜಿಲ್ಲಾಧ್ಯಕ್ಷ ಮಹ್ಮದ್ ಮೌಲಾ ಸೌದಾಗರ್ ಮಾತನಾಡಿ, ನಮ್ಮ ಸಮಿತಿಯ ಹುಣಸಗಿ ತಾಲೂಕು ಅಧ್ಯಕ್ಷ ರಸೂಲ್ ಬೆಣ್ಣೂರ ಮೇಲೆ ಸ್ಥಳಿಯ ಕೆಲ ಪ್ರಭಾವಿ ವ್ಯಕ್ತಿಗಳು ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ.
ಇದರ ಕುರಿತು ಇದೇ ಆಗಸ್ಟ್ ೩ನೇ ತಾರೀಖು ಹುಣಸಗಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.ಆದರೆ ಇದುವರೆಗೂ ದೂರು ದಾಖಲಿಸಿಕೊಂಡಿಲ್ಲ,ಆದ್ದರಿಂದ ಹಲ್ಲೆಗೊಳಗಾದ ವ್ಯಕ್ತಿಗೆ ನ್ಯಾಯ ಸಿಗುವುರು ಹೇಗೆ?ಒಬ್ಬ ಮುಖಂಡನಿಗೆ ಇಂತಹ ಗತಿಯಾದರೆ ಇನ್ನು ಉಳಿದವರ ಪಾಡೇನು ಎಂದು ಜನರು ಯೋಚಿಸುವಂತಾಗಿದೆ.ಆದ್ದರಿಂದ ಕೂಡಲೇ ದೂರು ದಾಖಲಿಸಿಕೊಂಡು ಹಲ್ಲೆಗೆ ಕಾರಣರಾದ ೭ ಜನರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು,ಮತ್ತು ರಸೂಲ್ ಬೆಣ್ಣುರ್ ಕುಟುಂಬಕ್ಕೆ ರಕ್ಷಣೆ ನೀಡಬೇಕು.ಈ ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ತಿಳಿಸಿ ತಹಸೀಲ್ದಾರರಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ್ ಸೂಫಿಯಾ ಸುಲ್ತಾನರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ತಾಲೂಕು ಅಧ್ಯಕ್ಷ ರತ್ನರಾಜ ಸಾಲಿಮನಿ,ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿ.ಜಿ ಸಾಗರ ಬಣದ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ,ಟಿಪ್ಪು ಸುಲ್ತಾನ ಸಂಯುಕ್ತ ರಂಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಖ್ ಅಮ್ಜದ್ ಹುಸೇನ್,ಕೆಎಮ್ಸಿ ತಾಲೂಕು ಅಧ್ಯಕ್ಷ ಖಾಜಾ ಅಜ್ಮೀರ್,ಮುಖಂಡ ಅಬೀದ್ ಹುಸೇನ್ ಪಗಡಿ ಸೇರಿದಂತೆ ಅನೇಕರಿದ್ದರು.