ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯದಿಂದ ಮಾತ್ರ ಅಭಿವೃದ್ಧಿ ಸಾಧ್ಯ: ಲಕ್ಷ್ಮಣ ದಸ್ತಿ

0
127

ಕಲಬುರಗಿ: ಕರ್ನಾಟಕ ರಾಜ್ಯದಲ್ಲಿ ಅತ್ಯಂದ ಹಿಂದುಳಿದ ಸಂವಿಧಾನ ೩೭೧ನೇ ಜೆ ಕಲಂ ತಿದ್ದುಪಡಿ ಪಡೆದಿರುವ ಕಲ್ಯಾಣ ಕರ್ನಾಟಕ ಪ್ರದೇಶ ನಿರಂತರ ಅನ್ಯಾಯ ಮಲತಾಯಿ ಧೋರಣೆಗೆ ಬಲಿಯಾಗಿ, ಅಭಿವೃದ್ಧಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಪಾಲಿನ ಅಸ್ತಿತ್ವದಿಂದ ವಂಚಿತವಾಗಿ ಈ ರಾಜ್ಯದಲ್ಲಿ ನಮಗೆ ಭವಿಷ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸ್ಥಿತಿಯಲ್ಲಿ ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯದಿಂದ ಮಾತ್ರ ನಮ್ಮ ಪ್ರದೇಶದ ಅಭಿವೃದ್ಧಿ ಸಾಧ್ಯವೆಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಹೇಳಿದರು.

ಬೀದರ ನಗರದ ಶಿವನಗರದಲ್ಲಿ ಸಮಿತಿಯ ಕೋರ್ ಕಮಿಟಿಯ ಮಹತ್ವದ ಸಭೆಯಲ್ಲಿ ಮಾತನಾಡಿದ ಅವರು, ಏಕೀಕರಣ ಪೂರ್ವದಲ್ಲಿ ಆಯಾ ರಾಜ್ಯಗಳಲ್ಲಿ ಹಂಚಿ ಹೋಗಿದ್ದ ಕನ್ನಡ ಮಾತನಾಡುವ ಕಲ್ಯಾಣ ಕರ್ನಾಟಕ, ಹಳೆ ಮೈಸೂರು ಕರ್ನಾಟಕ, ಮುಂಬೈ ಕರ್ನಾಟಕ, ಕೊಡಗು-ಕರ್ನಾಟಕ, ಮದ್ರಾಸ್-ಕರ್ನಾಟಕದ ನಾವೆಲ್ಲ ಕನ್ನಡ ಮಾತನಾಡುವ ಜನರು ಒಂದೇ ರಾಜ್ಯದಲ್ಲಿದ್ದರೆ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯವೆಂಬ ಸದುದ್ದೇಶದಿಂದ ಫಜಲ್ ಅಲಿ ವರದಿಯಂತೆ ಅಖಂಡ ಕರ್ನಾಟಕದಲ್ಲಿ ಸೇರಿದ್ದೇವು (ಆಗಿನ ವಿಶಾಲ ಮೈಸೂರು ರಾಜ್ಯ). ಆದರೆ ಅಖಂಡ ಕರ್ನಾಟಕ ರಚನೆಯಾದ ಮೂಲ ಉದ್ದೇಶ ಈಡೇರದೇ, ಈಗ ಇದಕ್ಕೆ ವಿಪರೀತವಾಗಿ ಪ್ರಾದೇಶಿಕ ಅಸಮಾನತೆ ದಿನೇ ದಿನೇ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೇ ಸತತವಾಗಿ ಪ್ರಬಲ ನಾಯಕತ್ವ ಹೊಂದಿರುವ ಹಳೆ ಮೈಸೂರು ಮತ್ತು ಮುಂಬೈ ಕರ್ನಾಟಕದ ನಾಯಕರಿಂದ ನಮಗೆ ನಿರ್ಲಕ್ಷತನ, ಮಲತಾಯಿ ಧೋರಣೆ ರಾಜಾರೋಷವಾಗಿ ನಡೆದಿದೆ.

Contact Your\'s Advertisement; 9902492681

ಅಪಾರ ಭೂಸಂಪತ್ತು, ಜಲಸಂಪತ್ತು, ಖನಿಜ ಸಂಪತ್ತು, ಮಾನವ ಸಂಪತ್ತು ಹೊಂದಿರುವ ತನ್ನದೇಯಾದ ಶ್ರೀಮಂತ ಇತಿಹಾಸದಿಂದ ಮೆರೆದ ಕಲ್ಯಾಣ ಕರ್ನಾಟಕ ಪ್ರದೇಶ ಪ್ರತ್ಯೇಕ ರಾಜ್ಯ ಸ್ಥಾನಮಾನ ಪಡೆದು, ಅಭಿವೃದ್ಧಿಯಾಗಲು ಎಲ್ಲಾ ರೀತಿಯಿಂದಲೂ ಅರ್ಹತೆ ಪಡೆದಿದೆ. ಇಂತಹ ಸ್ಥಿತಿಯಲ್ಲಿ ನಾವು ಪ್ರತಿಯೊಂದಕ್ಕೂ ಈಗಿರುವ ಕರ್ನಾಟಕ ರಾಜ್ಯದಲ್ಲಿ ಭಿಕ್ಷೆ ಬೇಡುವುದು ಬಿಟ್ಟು, ಪ್ರತ್ಯೇಕ ರಾಜ್ಯ ರಚನೆಗೆ ಮುಂದಾಗಬೇಕು, ಇದರಿಂದ ಮಾತ್ರ ನಮ್ಮ ಪ್ರಗತಿಗೆ ಅಂತಿಮ ಪರಿಹಾರ ಮಾರ್ಗವಾಗಿದೆ ಎಂದರು. ಇದಕ್ಕೆ ಸಂಬಂಧಿಸಿದಂತೆ, ಕಲ್ಯಾಣ ಕರ್ನಾಟಕದ ೭ ಜಿಲ್ಲೆಗಳಲ್ಲಿ ಚಿಂತನ-ಮಂತನ, ವಿಚಾರ ಸಂಕಿರಣಗಳು, ಚರ್ಚೆಗಳು, ನಡೆಸಿ, ಬಲವಾದ ಸಂಘಟನೆ ಮಾಡುವುದು ಪ್ರಸ್ತುತ ಅವಶ್ಯವಾಗಿದೆ ಎಂದು ಸಭೆಯಲ್ಲಿ ತಮ್ಮ ವಿಚಾರವನ್ನು ಮಂಡಿಸಿದರು.

ಈ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡಂತೆ ನಮ್ಮ ಪ್ರದೇಶಕ್ಕೆ ಪ್ರಗತಿ ಮಾಡಿ ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ ಎಂಬ ಬೇಡಿಕೆಯಂತೆ ಮೊದಲನೇ ಹಂತವಾಗಿ ಬರುವ ಅಗಸ್ಟ್ ೧೭ ರಂದು ಬೀದರ ನಗರದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಯ ಬಗ್ಗೆ ವಿಚಾರ ಸಂಕಿರಣ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಣಯಿಸಲಾಯಿತು. ಈ ಮಹತ್ವದ ವಿಚಾರ ಸಂಕೀರ್ಣ ಕಾರ್ಯಕ್ರಮಕ್ಕೆ ಜಿಲ್ಲೆಯ ಜನಪ್ರತಿನಿಧಿಗಳಿಗೆ, ಬುದ್ಧಿ ಜೀವಿಗಳಿಗೆ, ಚಿಂತಕರಿಗೆ, ಅಭಿವೃದ್ಧಿಪರ ಮುಖಂಡರಿಗೆ, ಆಯಾ ಕ್ಷೇತ್ರದ ಗಣ್ಯರಿಗೆ, ಹೋರಾಟಗಾರರಿಗೆ ಆಹ್ವಾನಿಸಲು ನಿರ್ಧರಿಸಲಾಯಿತು.

ಈ ಕೋರ್ ಕಮಿಟಿಯ ಸಭೆಯಲ್ಲಿ ಬೀದರ ಜಿಲ್ಲಾ ಘಟಕದ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಮುಖಂಡರುಗಳಾದ ಅನಂತರೆಡ್ಡಿ, ಗುರುಸಿದ್ದಪ್ಪಾ ಬಿರಾದಾರ, ಇಸ್ಮಾಯಿಲ, ಚಂದ್ರಶೇಖರ ಪಾಟೀಲ, ವಿನಯ ಮಾಳಗೆ, ಶಿವಕುಮಾರ ಬೆಲ್ದಾಳ, ಸಂತೋಷ ಬೋರೆ, ಉದಯಕುಮಾರ ಅಷ್ಟೂರೆ, ಬಕ್ಕಪ್ಪಾ ನಾಗೂರಾ, ವಿಶಾಲ ಪಂಚಾಳ, ಸಂತೋಷ ಚೆಟ್ಟಿ, ವಿಜಯರೆಡ್ಡಿ, ದಿಲಿಪ ಪಾಟೀಲ, ರೋಹನಕುಮಾರ ಸೇರಿದಂತೆ ಸಮಿತಿಯ ಅನೇಕ ಜನ ಸಕ್ರೀಯ ಸದಸ್ಯರು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here