ಬಸವಣ್ಣ ಹಾಗೂ ಶರಣರ ಕುರಿತಾಗಿ ಕಥಾನಕ ಚರಿತ್ರೆ ಕಟ್ಟಿಕೊಟ್ಟ ತೆಲುಗು ಕವಿ ಪಾಲ್ಕುರಿಕೆ ಸೋಮನಾಥನ ಬಸವ ಪುರಾಣದಲ್ಲಿ ಜೇಡರ ದಾಸಿಮಯ್ಯ ಹಾಗೂ ಶಂಕರ ದಾಸಿಮಯ್ಯನವರ ಉಲ್ಲೇಖವಿದ್ದು, ಜೇಡರ ದಾಸಿಮಯ್ಯ ಹಾಗೂ ಶಂಕರ ದಾಸಿಮಯ್ಯ ಇಬ್ಬರೂ ಬೇರೆ, ಬೇರೆ ಊರಿನವರಾಗಿದ್ದರು ಎಂಬ ಕಥೆಯನ್ನು ಕಥೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಜೇಡರ ದಾಸಿಮಯ್ಯ ಶಂಕರ ದಾಸಿಮಯ್ಯನ ಶಿಷ್ಯ ಎಂಬುದನ್ನು ಸತ್ಯ ಸಂಶೋಧಕ ಡಾ. ಎಂ.ಎಂ. ಕಲ್ಬುರ್ಗಿಯವರು ದೃಢಪಡಿಸಿದ್ದಾರೆ.
ಹಾವೇರಿ ಜಿಲ್ಲೆಯ ಅಬಲೂರಿನ ಶಿಲ್ಪಚಿತ್ರ ಶಾಸನ, 1148ರ ಗೊಬ್ಬೂರು ಶಾಸನ, 1167ರ ಮುದನೂರು ಶಾಸನ, 1197ರ ಇಂಡಿ ಶಾಸನ, 1201ರ ಹಾಸನ ಜಿಲ್ಲೆಯ ಗೀಜಗನಹಳ್ಳಿ ಶಾಸನಗಳಲ್ಲಿ ಆರಂಭದ ವಚನಕಾರ ಜೇಡರ ದಾಸಿಮಯ್ಯನವರ ಚರಿತ್ರೆಗೆ ಸಂಬಂಧಿಸಿದ ಮಹತ್ವದ ಉಲ್ಲೇಖಗಳಿವೆ. ಮುದನೂರು ಕೂಡ ಆಗ ಪ್ರಮುಖ ಅಗ್ರಹಾರ ಕೇಂದ್ರವಾಗಿತ್ತು. ಇಲ್ಲಿ ರಾಮನಾಥ ದೇವಾಲಯವಿದ್ದು, ಒಳಗಡೆ ಶಿವಲಿಂಗವಿದೆ. ಅದರ ಎದುರಿಗೆ ಕಪ್ಪು ಶಿಲೆಯ ಜೇಡರ ದಾಸಿಮಯ್ಯನ ಮೂರ್ತಿ ಇದೆ. ಜೇಡರ ದಾಸಿಮಯ್ಯನವರಿಗೆ ಸಂಬಂಧಿಸಿದಂತೆ ಸಂಗಮೇಶ್ವರ ದೇವಾಲಯ, ಬಾವಿ, ಏಳು ತೀರ್ಥಗಳು, ಜೇಡರ ದಾಸಿಮಯ್ಯ ವಾಸಿಸುತ್ತಿದ್ದ ಎನ್ನಲಾಗುವ ಮನೆ ಇತ್ಯಾದಿ ಪಳಿಯುಳಿಕೆಗಳಿರುವುದನ್ನು ಇಂದಿಗೂ ಕಾಣಬಹುದು.
ಅದೇರೀತಿಯಾಗಿ ಶಂಕರ ದಾಸಿಮಯ್ಯನವರಿದ್ದ ವಿಜಯಪುರ ಜಿಲ್ಲೆಯ ಕಂದಗಲ್, ಬಾಗಲಕೋಟೆ ಜಿಲ್ಲೆಯ ಇಲಕಲ್. ರಾಯಚೂರು ಜಿಲ್ಲೆಯ ನವಿಲೆ ಸೇರಿದಂತೆ ಶಂಕರ ದಾಸಿಮಯ್ಯನವರು ಸುತ್ತಾಡಿದ ಸ್ಥಳಗಳಲ್ಲಿ ಸ್ಮಾರಕ ಹಾಗೂ ಜನಪದ ಕಥೆಗಳು ಉಳಿದುಕೊಂಡು ಬಂದಿವೆ.
ಶಿವನಿಂದ ತವನಿಧಿ ಪಡೆದ ಮೂದನೂರಿನ ಜೇಡರ ದಾಸಿಮಯ್ಯ ಹಾಗೂ ಶಿವನಿಂದ ಮೂರನೇ ಕಣ್ಣು ಪಡೆದ ಕಂದಗಲ್ನ ಶಂಕರ ದಾಸಿಮಯ್ಯ ಈ ಇಬ್ಬರೂ ಸೇರಿ ಕಲ್ಯಾಣದ ಕಡೆ ನಡೆದು ಬಂದರು ಎಂಬುದಕ್ಕೆ ವಿಜಯಪುರದ ಅಡವಿ ಶಂಕರಲಿಂಗ ದೇವಾಲಯ, ಊರೊಳಗಿನ ಶಂಕರಲಿಂಗ ದೇವಾಲಯ ಜಂಬಗಿಯಲ್ಲಿನ ದೇವಾಲಯ, ಕಲಬುರಗಿ ಹೊರವಲಯದ ರಾಜಾಪುರದ ಶಂಕರಲಿಂಗ ದೇವಸ್ಥಾನ, ಸರಾಫ್ ಬಜಾರ್ನಲ್ಲಿರುವ ಶಂಕರಲಿಂಗ ದೇವಸ್ಥಾನಗಳನ್ನು ಕಾಣಬಹುದು. ಕಮಲಾಪುರ, ಹುಮನಾಬಾದ ತಾಲ್ಲೂಕಿನ ಘಾಟ್ ಬೋರಾಳ್, ದುಬಲಗುಂಡಿ ಹಾಗೂ ಬಸವಕಲ್ಯಾಣದಲ್ಲಿ ಕೂಡ ಶಂಕರ ದಾಸಿಮಯ್ಯ ಜೇಡರ ದಾಸಿಮಯ್ಯನ ದೇವಸ್ಥಾನಗಳಿವೆ. ಕೆಲವು ಕಡೆ ಇಬ್ಬರ ತೋರು ಗದ್ದುಗೆಗಳಿವೆ.
ಜೇಡರ ದಾಸಿಮಯ್ಯನವರ ಸತಿ ದುಗ್ಗಳೆ ಹಾಗೂ ಶಂಕರ ದಾಸಿಮಯ್ಯನವರ ವಚನಗಳಲ್ಲಿ ಬಸವಾದಿ ಪ್ರಮಥರ ಸ್ಮರಣೆಯನ್ನು ಕಾಣಬಹುದು. ಜೇಡರ ಹಾಗೂ ಶಂಕರ ದಾಸಿಮಯ್ಯ ಬಸವಣ್ಣನವರಿಗಿಂತ ವಯಸ್ಸಿನಲ್ಲಿ ಹಿರಿಯರು. ಆದರೆ ಇಬ್ಬರೂ ಸಮಕಾಲೀನರಾಗಿದ್ದರು.