ಕಲಬುರಗಿ: ಜಿಲ್ಲೆ ಹಾಗೂ ಆಗಸ್ಟ್ ತಿಂಗಳಲ್ಲೇ ಅತಿವೃಷ್ಟಿ ಹಾಗೂ ಅನಾವೃಷ್ಟಿ ಎರಡನ್ನು ಎದುರಿಸಿದ್ದು ರೈತರೆಲ್ಲರೂ ಬೆಳೆ ಹಾಳಾಗಿ ಕಂಗಾಲಾಗಿದ್ದಾರೆ. ರಾಜ್ಯ ಸರಕಾರ ತಕ್ಷಣ ಬೆಳೆ ಹಾನಿ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ಒದಗಿಸಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮೀತಿ (ಕೆಪಿಸಿಸಿ) ಸದಸ್ಯ ಹಾಗೂ ಪ್ರಗತಿಪರ ರೈತರಾದ ಹಣಮಂತರಾವ ಭೂಸನೂರ್ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಕಳೆದ ಜುಲೈ ತಿಂಗಳಲ್ಲಿ ದಿ. 18 ರಿಂದ ದಿ. 24 ರ ವರೆಗೆ ಧಾರಾಕಾರ ಮಳೆ ಸುರಿದು ಅಪಾರ ಪ್ರಮಾಣದಲ್ಲಿ ಬೆಳೆ ಹಾಳಾಯ್ತು. ಸುರಿದ ಭಾರಿ ಮಳೆಯ ಪರಿಣಾಮ ಉಂಟಾದ ಪ್ರವಾಹಕ್ಕೆ ತುತ್ತಾದ ಪ್ರದೇಶಗಳ ಹಾಗೂ ಬೆಳೆಗಳ ಸಮೀಕ್ಷೆ ಶೀಘ್ರವೇ ನಡೆಸಿ ಪರಿಹಾರ ಕಾರ್ಯ ಚುರುಕುಗೊಳಿಸಬೇಕು. ಕೃಷಿ ಇಲಾಖೆಯವರು ನೀಡಿರುವ ಮಾಹಿತಿಯಂತೆ ಮಳೆಗೆ ಜಿಲ್ಲೆಯಲ್ಲಿ ಒಟ್ಟು 27 ಸಾವಿರ ಹೆಕ್ಟೇರ್ ಪ್ರದೇಶ ಹಾನಿಯಾಗಿದ್ದು, ಅದರಲ್ಲಿ ತೊಗರಿ 15 ಸಾವಿರ ಹೆಕ್ಟೇರ್, ಹೆಸರು 7 ಸಾವಿರ ಹೆಕ್ಟೇರ್, ಉದ್ದು 2 ಸಾವಿರ ಹೆಕ್ಟೇರ್, ಸೋಯಾಬಿನ್ 103 ಹೆಕ್ಟೇರ್, ಹತ್ತಿ 1345 ಹೆಕ್ಟೇರ್ ಹಾಗೂ ಸೂರ್ಯಕಾಂತಿ 22 ಹೆಕ್ಟೇರ್ ಪ್ರದೇಶಗಳಲ್ಲಿ ಮಳೆಗೆ ಹಾನಿಯಾಗಿದೆ. ಇನ್ನೂ ಅಲ್ಲಿ ಇಲ್ಲಿ ಸಮೀಕ್ಷೆ ನಡೆದಿಲ್ಲವೆಂದು ರೈತರ ತಕರಾರು ಇದೆ. ಇದಕ್ಕೆಲ್ಲ ಬೇಗ ಪರಿಹಾರ ನೀಡಬೇಕು.
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ಒಟ್ಟು ಇದುವರೆಗೂ ಜಿಲ್ಲೆಯ 76 ಸಾವಿರ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಈ ಯೋಜನೆಯಲ್ಲಿ ನೋಂದಣಿಯಾದ ರೈತರೆಲ್ಲರಿಗೂ 20 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. ಈ ವರ್ಷ ಸಮೀಕ್ಷೆ ಬಳಿಕ ಪರಿಹಾರ ನೀಡಲಾಗುವುದು ಎಂದು ಕೃಷಿ ಇಲಾಖೆ ಹೇಳುತ್ತಿದೆ. ಪರಿಹಾರ ಯಾವಾಗ ಬರಬೇಕು? ಸಮೀಕ್ಷೆ ಬೇಗ ನಡೆಸಬೇಕು. ಬೆನ್ನಲ್ಲೇ ಪರಿಹಾರ ನೀಡುವ ಕೆಲಸವಾಗಬೇಕು. ವಿಳಂಬವಾದಲ್ಲಿ ಕಷ್ಟದಲ್ಲಿದ್ದವರಿಗೆ ಯಾವುದೇ ಪ್ರಯೋಜನವಾಗದು ಎಂದು ಹಣಮಂತರಾವ ಅಭಿಪ್ರಾಯಪಟ್ಟಿದ್ದಾರೆ.
ಜುಲೈನಲ್ಲಿ ಭಾರಿ ಮಳೆಗೆ ಜಿಲ್ಲೆಯ ರೈತರು ಕಂಗಾಲು, ಆಗಸ್ಟ್ನಲ್ಲಿ ಮಳೆಯೇ ಇಲ್ಲ ಮತ್ತೆ ರೈತರೆಲ್ಲರೂ ಪರೇಶಾನ್. ಆಗಸ್ಟ್ 2 ರಿಂದ ಜಿಲ್ಲೆಯಲ್ಲಿ ಎಲ್ಲಿಯೂ ಹನಿ ಮಳೆಯೂ ಸುರಿದಿಲ್ಲ. ಆ. 15 ರ ವರೆಗೂ ಈ ವಾತಾವರಣ ಮುಂದುವರಿಯಲಿದೆ ಎಂಬುದು ತಜ್ಞರ ಅಭಿಪ್ರಾಯವಾಗುದೆ. ಈ ಒಣ ಹವೆ ವಾತಾವರಣವನ್ನ ನಾವು ಅನಾವೃಷ್ಟಿ ಎಂದು ಹೇಳಬಹುದು. ಈ ವಾತಾವರಣ ಹೆಸರು ರೈತರಿಗೆ ಅನುಕೂಲವಾದರೆ ತೊಗರಿ, ಸೂರ್ಯಕಾಂತಿ, ಹತ್ತಿ, ಅಲಸಂದಿ ಇತ್ಯಾದಿ ರೈತರಿಗೆ ಅನಾನುಕೂಲವಾಗಲಿದೆ. ಹೆಸರು ರೈತರು ರಾಶಿ ಮಾಡಿಕೊಳ್ಳಲು ಈ ಒಣ ಹವೆ ಅನುಕೂಲ. ಆದರೆ ಇತರೆ ಬೆಳೆಗಳ ತೇವಾಂಶ ಸಂಪೂರ್ಣ ಕೊರತೆ ಕಾಡಿ ಬೆಳೆಗಳೇ ಮುರುಟುವ ಆತಂಕ ಎದುರಾಗಿದೆ.
ಆಳಂದದಲ್ಲಂತೂ ಈಗಾಗಲೇ ರೈತರು ಕಂಗಾಲಾಗಿದ್ದಾರೆ. ಮಳೆಗೆ ತಾಲೂಕಿನ ಸಾವಿರಾರು ಹೆಕ್ಟರ್ ಬೆಳೆ ಹಾನಿ. ಈಗ ನೋಡಿದರೆ ಮಲೆ ಇಲ್ಲದ, ಒಣ ಹವೆಗೂ ಬೆಳೆ ಹಾನಿಯಾಗುವ ಆತಂಕ ಇದರಿಂದ ಹೊರ ಬರೋದು ಹೇಗೆಂದು ಗೊತ್ತಾಗುತ್ತಿಲ್ಲ. ಕಳೆದ 2 ವಾರದಿಂದ ಬಿಸಿಲು, ಸೆಕೆ, ಧಗೆಯೇ ಹೆಚ್ಚುತ್ತಿದೆ. ಇದು ತೊಗರಿ ಸೇರಿದಂತೆ ಮುಂಗಾರಿನ ಎಲ್ಲಾ ಬೆಳೆಗಳಿಗೂ ಮಾರಕವಾಗುತ್ತಿದೆ. ಹೀಗಾಗಿ ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಕಲಬುರಗಿ ರೈತರು ಬಲಿಯಾಗುತ್ತಿದ್ದಾರೆ. ತಕ್ಷಣ ಪ್ರಕೃತಿ ವಿಕೋಪದಡಿಯಲ್ಲಿ ರೈತರಿಗೆ ಹಾನಿಯನ್ನು ತುಂಬಿ ಕೊಡುವ ಕೆಲಸವಾಗಬೇಕು ಎಂದು ಹಣಮಂತರಾವ ಭೂಸನೂರ್ ಆಗ್ರಹಿಸಿದ್ದಾರೆ.