ಶಹಾಬಾದ: ಮನುಷ್ಯ ಜೀವನದಲ್ಲಿ ಹುಟ್ಟಿದ ಮೇಲೆ ಏನನ್ನಾದರೂ ಸಾಧಿಸಬೇಕು.ಅಂದಾಗ ಬದುಕು ಸಾರ್ಥಕವಾಗುತ್ತದೆ.ಅಂತಹ ಸಾರ್ಥಕ ಬದುಕು ಸಾಗಿಸಿದವರು ಸಂತೋಷಕುಮಾರ ಇಂಗಿನಶೆಟ್ಟಿ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಅವರು ಬುಧವಾರ ಇಂಗಿನಶೆಟ್ಟಿ ಅಭಿಮಾನಿ ಬಳಗದ ವತಿಯಿಂದ ನಗರದ ಶ್ರೀರಾಮ ವೃತ್ತದಲ್ಲಿ ಸಂತೋಷಕುಮಾರ ಇಂಗಿನಶೆಟ್ಟಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವೀರಶೈವ ಸಮಾಜದ ಅಧ್ಯಕ್ಷರಾಗಿ ಯಾವುದೆ ಜವಾಬ್ದಾರಿಯನ್ನು ಕೊಟ್ಟರೂ, ಅದನ್ನು ಸಮರ್ಪಕವಾಗಿ ನಿಭಾಯಿಸುವ ಶಕ್ತಿ ಅವರಿಗೆ ಇತ್ತು. ತಮ್ಮ ಸಂಘಟನಾ ಚಾತುರ್ಯದಿಂದ ಸ್ವಲ್ಪ ದಿನದಲ್ಲಿ ಪಕ್ಷದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದರು. ಸಮಾಜದ ಹಿತಕ್ಕಾಗಿ ತಮ್ಮ ತನು,ಮನ,ಧನವನ್ನು ಶ್ರೀಗಂಧದಂತೆ ಸವೆಸಿದವರು.
ತಮ್ಮ ಜೀವಿತಾವಧಿಯಲ್ಲಿ ಬಡವರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಮುಂದಾಗುತ್ತಿದ್ದರು.ಎಲ್ಲಾ ಸಮುದಾಯದವರನ್ನು ಅಪ್ಪಿಕೊಳ್ಳುವ ವಿಶಾಲ ಮನೋಭಾವ ಹೊಂದಿದ್ದರು. ಮನೆತನದಿಂದ ಎಷ್ಟೇ ಶ್ರೀಮಂತರಾದರೂ ಯಾವುದೇ ಅಹಂ ಭಾವನೆ ತೋರದೇ ಸರಳ ಸಜ್ಜನಿಕೆ ವ್ಯಕ್ತಿತ್ವವವನ್ನು ಬೆಳೆಸಿಕೊಂಡಿದ್ದರು.ಅವರನ್ನು ಕಳೆದುಕೊಂಡ ನಗರದ ಈಡೀ ಸಮಾಜಕ್ಕೆ ಇಂದಿಗೂ ಭಾರಿ ನಷ್ಟ ಕಾಡುತ್ತಿದೆ ಎಂದು ಹೇಳಿದರು.
ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ,ಡಾ.ರಶೀದ್ ಮರ್ಚಂಟ್, ಮಾಜಿ ತಾಪಂ ಸದಸ್ಯ ನಿಂಗಣ್ಣ ಹುಳಗೋಳಕರ್, ಬಿಜೆಪಿ ಹಿರಿಯ ಮುಖಂಡ ಕನಕಪ್ಪ ದಂಡಗುಲಕರ್, ವೀರಶೈವ ಸಮಾಜದ ಅಧ್ಯಕ್ಷ ಸೂರ್ಯಕಾಂತ ಕೋಬಾಳ, ಮಾಜಿ ಅಧ್ಯಕ್ಷ ವಿಜಯಕುಮಾರ ಮುತ್ತಟ್ಟಿ, ನಗರಸಭೆ ಸದಸ್ಯ ರವಿ ರಾಠೋಡ, ಅಣ್ಣಪ್ಪ ದಸ್ತಾಪೂರ, ನಾಗರಾಜ ಮೇಲಗಿರಿ, ಮಲ್ಲಿಕಾರ್ಜುನ ವಾಲಿ,ಬಸವರಾಜ ಮದ್ರಿಕಿ, ಬಸವರಾಜ ಗೊಳೇದ್, ಮೀರ ಅಲಿ ನಾಗೂರೆ,ಪ್ರಕಾಶ ರೆಡ್ಡಿ, ಶರಣು ಜೇರಟಗಿ,ಡಾ.ಅಹ್ಮದ್ ಪಟೇಲ್,ಮೃತ್ಯುಂಜಯ್ ಹಿರೇಮಠ, ದಿಲೀಪ ನಾಯಕ ಇತರರು ಇದ್ದರು.