ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮ ವಿಚಾರದಲ್ಲಿ ಬಂಧಿತವಾಗಿರುವ ಹಿರಿಯ ಪೊಲೀಸ್ ಅಧಿಕಾರಿಗಳ ಮಂಪರು ಪರೀಕ್ಷೆ ನಡೆಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಅಧಿಕಾರಿಗಳನ್ನು ಮಾತ್ರ ಬಂಧಿಸಿದರೆ ಸಾಕಾಗುವುದಿಲ್ಲ. ಈ ಪ್ರಕರಣದಲ್ಲಿ ಶಾಮಿಲ್ ಆಗಿರುವ ಪ್ರತಿಯೊಬ್ಬರನ್ನ ಬಂಧಿಸಬೇಕು. ಅಂದಾಗ ಮಾತ್ತ ಎಲ್ಲವೂ ಹೊರಗೆ ಬರಲು ಸಾಧ್ಯ ಎಂದರು.
ಈ ಪ್ರಕರಣದಲ್ಲಿ ತಾವು ಭಾಗಿಯಾಗಿದ್ದಾರೆಂದು ಸಚಿವ ಅಶ್ವತ್ ನಾರಾಯಣ ಹೇಳಿಕೆ ವಿರುದ್ಧ ತಿರುಗೇಟು ನೀಡಿದ ಅವರು, ನಾನು ಸಿಎಂ ಇದ್ದಾಗ ಅವರು ವಿರೋಧ ಪಕ್ಷದಲ್ಲಿದ್ದರು ತಾನೇ ?ಆಗ ಅಶ್ವತ್ ನಾರಾಯಣ ಕಡುಬು ತಿನ್ನುತ್ತಿದ್ದರೆ? ಎಂದು ಪ್ರಶ್ನಿಸಿದರು.
ನನ್ನ ೭೫ ನೇ ಹುಟ್ಟು ಹಬ್ಬ ನನ್ನ ಬೆಂಬಲಿಗರು ಮಾಡ್ತಿದ್ದಾರೆ. ನಮ್ಮ ಹುಟ್ಟು ಹಬ್ಬ ನಾವು ಮಾಡ್ಕೋತಿದ್ರೆ ಬಿಜೆಪಿಯವರಿಗೆ ಭಯ ಶುರುವಾಗಿದೆ. ಅದಕ್ಕಾಗಿಯೇ ನನ್ನ ಹುಟ್ಟು ಹಬ್ಬದ ಬಗ್ಗೆ ಮಾತಾಡ್ತಾ ಇದ್ದಾರೆ ಚುಚ್ಚಿದರು.
ರೈತರು ಸಂಕಷ್ಟಕ್ಕೆ ಸಿಲುಕಿದ ನಂತರ ಕ್ರಮಕ್ಕೆ ಮುಂದಾಗುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಿಗೆ ಬರುವುದಿಲ್ಲ. ೨೦೧೯ ರಲ್ಲಿ ಪ್ರವಾಹ ಪಡಿತರಿಗೆ ಪರಿಹಾರ ಕೊಟ್ಟಿಲ್ಲ. ಈಗ ಅದೆ ಗ್ರಾಮಗಳಿಗೆ ಪ್ರವಾಹ ಬರುತ್ತಿದೆ. ಸರ್ಕಾರ ಇವರಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ದೇವನೂರ್ ಮಹಾದೇವಪ್ಪ ಅವರ ಆರ್.ಎಸ್.ಎಸ್. ಆಳ-ಅಗಲ ಪುಸ್ತಕ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಾವರ್ಕರ್, ಆರ್ ಎಸ್ ಎಸ್ ಯಾವ ಕಾಲದಲ್ಲಿ ಏನ್ ಏನ್ ಹೇಳಿದ್ದಾರೆ ಅದನ್ನೆ ಅವರು ಬರೆದಿದ್ದಾರೆ. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಮೂಲಭೂತ ಹಕ್ಕಿಗೆ ನಿಬಂಧ ಹೇರುವವರು ಇವರು ಯಾರು? ಎಂದು ಪ್ರಶ್ನಿಸಿದರು.