ಸೇಡಂ: ಪಟ್ಟಣದ ನೀಲಗಂಗಮ್ಮ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಮಾ.19 ರಂದು ಬೆ. 11 ಕ್ಕೆ ಕೆರಳ್ಳಿ ಗುರುನಾಥರೆಡ್ಡಿ ಅವರ 26 ನೇ ಪುಣ್ಯಸ್ಮರಣೆ ನಿಮಿತ್ತ ಹಿರಿಯ ಸಾಹಿತಿ ಹಾಗೂ ಕರ್ನಾಟಕ ನಾಟಕ ಆಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರಭಾಕರ ಜೋಶಿ ಅವರ ಬದುಕು-ಬರಹ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದ ಕಾರ್ಯದರ್ಶಿ ಮಹಿಪಾಲರೆಡ್ಡಿ ಮುನ್ನೂರು ತಿಳಿಸಿದ್ದಾರೆ.
ಪ್ರಭಾಕರ ಜೋಶಿ ಅವರ ಬದುಕು ಕುರಿತು ದಿ ಡೈಲಿ ನ್ಯೂಸ್ ಕಲಬುರಗಿ ಸ್ಥಾನಿಕ ಸಂಪಾದಕ ಡಾ. ಶಿವರಂಜನ್ ಸತ್ಯಂಪೇಟೆ, ಸಾಹಿತ್ಯದ ಕುರಿತು ಕಲಬುರಗಿ ಸಾಹಿತಿ ಸಂಧ್ಯಾ ಹೊನಗುಂಟಿಕರ್, ರಂಗಭೂಮಿಯ ಕುರಿತು ಚಲನಚಿತ್ರ ಸೆನ್ಸಾರ್ ಮಂಡಳಿ ಸದಸ್ಯೆ ಡಾ.ಸುಜಾತ ಜಂಗಮಶೆಟ್ಟಿ, ಪತ್ರಿಕೋದ್ಯಮ ಕುರಿತು ಕನ್ನಡ ಪ್ರಭ ದಿನಪತ್ರಿಕೆ ಕಲಬುರಗಿ ಸ್ಥಾನಿಕ ಸಂಪಾದಕ ಶೇಷಮೂರ್ತಿ ಅವಧಾನಿ ಮಾತನಾಡಲಿದ್ದಾರೆ.
ಕಾರ್ಯಕ್ರಮದ ಸಾನ್ನಿದ್ಯವನ್ನು ಕೊತ್ತಲಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ ವಹಿಸಿಕೊಳ್ಳಲಿದ್ದಾರೆ. ಹಿರಿಯ ಸಾಹಿತಿ ಪ್ರಭಾಕರ ಜೋಶಿ ಉಪಸ್ಥಿತರಿರಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ ವಹಿಸಿಕೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೇಡಂ ತಾಲೂಕಿನ ಚಂದಾಪುರ ಗ್ರಾಮದ ತೆಲುಗು ಪರಿಸರದಲ್ಲಿ ಹುಟ್ಟಿ ಬೆಳೆದ ಪ್ರಭಾಕರ ಜೋಶಿ ಕನ್ನಡ ಸಾಹಿತ್ಯ, ರಂಗಭೂಮಿ, ಪತ್ರಿಕೋದ್ಯಮ, ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಕಲಬುರಗಿ ರಂಗಾಯಣ ನಿರ್ದೇಶಕರಾದ ನಂತರ ರಂಗಾಯಣಕ್ಕೆ ಹೊಸ ಕಾಯಕಲ್ಪ ಕಲ್ಪಿಸಿದ್ದಾರೆ.