ಶಹಾಬಾದ: ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಪ್ರಜಾಪ್ರಭುತ್ವ ರಾಷ್ಟ್ರ .ಪ್ರಜಾಪ್ರಭುತ್ವದ ಘನತೆ ಎತ್ತಿ ಹಿಡಿಯುವ ಸಲುವಾಗಿ ಮತ ದಾನದ ಹಕ್ಕನ್ನು ಎಲ್ಲರೂ ಚಲಾಯಿಸಬೇಕು ಎಂದು ರಾವೂರ ಗ್ರಾಮದ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು ಹೇಳಿದರು.
ಅವರು ರಾವೂರ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ವಿಧ್ಯಾಭಿವೃದ್ಧಿ ಸಂಸ್ಥೆಯ ವಿವಿಧ ಪ್ರಕಲ್ಪಗಳ ಅಡಿಯಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಜಾಥಾವನ್ನು ಉದ್ದೇಶಿಸಿ ಮಾತನಾಡಿದರು.
ಜಗತ್ತಿನಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಯೇ ಪ್ರಭುವೆನಿಸಿದ್ದು, ದೇಶದ ಭವಿಷ್ಯ ನಿರ್ಣಯಕ್ಕೆ ಕಡ್ಡಾಯವಾಗಿ ಕೇವಲ ಒಂದು ಪ್ರಾಮಾಣಿಕ ಮತ ಚಲಾವಣೆಯಿಂದ ಮಾತ್ರ ಸಾಧ್ಯ. ಅಭಿವೃದ್ಧಿಯೊಂದಿಗೆ ದೇಶವನ್ನು ಪ್ರಗತಿಪಥದಲ್ಲಿ ಮುನ್ನಡೆಸುವ ನಾಯಕನ ಆಯ್ಕೆಯಲ್ಲಿ ಜವಾಬ್ದಾರಿ ಇದೆ. ಪ್ರತಿಯೊಬ್ಬರು ಕಡ್ಡಾಯ ಮತ ಚಲಾಯಿಸಿದರೆ ಮಾತ್ರ ಪ್ರಜಾಪ್ರಭತ್ವದ ವ್ಯವಸ್ಥೆಗೆ ನಿಜವಾದ ಅರ್ಥ ಬರಲಿದೆ ಎಂದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ಇಂತಹ ಚುನಾವಣೆಗಳಲ್ಲಿ ನಮ್ಮ ಅಮೂಲ್ಯ ಮತವನ್ನು ವಸ್ತು, ಹಣ, ಹೆಂಡಕ್ಕೆ ಮಾರಿಕೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ. ದಯವಿಟ್ಟು ಎಚ್ಚರಿಕೆಯಿಂದ ಕಡ್ಡಾಯವಾಗಿ ಮತ ಚಲಾಯಿಸಿ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ಧ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಸೇಡಂ ಮಾತನಾಡಿ ಹದಿನೆಂಟು ವರ್ಷ ತುಂಬಿದ ಅರ್ಹ ಮತದಾರರು ಚುನಾವಣಾ ಪ್ರಕ್ರೀಯೆಯಲ್ಲಿ ಪಾಲ್ಗೊಂಡು ಮತದಾನ ಮಾಡುವ ಮೂಲಕ ದೇಶದ ಋಣ ತೀರಿಸಬೇಕು. ಯುವ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವನ್ನು ನಿರ್ಮಿಸಬೇಕು. ಸುತ್ತ ಮುತ್ತಲಿನ ಜನರಿಗೂ ಮತದಾನದ ಮಹತ್ವ ತಿಳಿಸಿಕೊಡಬೇಕು ಎಂದು ಹೇಳಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಿಕ್ಷಕರು ಮಕ್ಕಳೊಂದಿಗೆ ಭಿತ್ತ ಫಲಕಗಳನ್ನು ಹಿಡಿದು ಮತದಾನ ಜಾಗೃತಿಯ ಘೋಷಣೆಗಳನ್ನು ಕೂಗುತ್ತಾ ಮತದಾರರಿಗೆ ಮತದಾನದ ಮಹತ್ವವನ್ನು ತಿಳಿಸುವ ಪ್ರಯತ್ನ ಮಾಡಿದರು.
ಈ ಸಂದರ್ಭದಲ್ಲಿ ಪ್ರೌಢ ವಿಭಾಗದ ಮುಖ್ಯಗುರು ವಿಧ್ಯಾಧರ ಖಂಡಾಳ, ಪ್ರಾಥಮಿಕ ವಿಭಾಗದ ಮುಖ್ಯಗುರು ಚನ್ನಬಸಪ್ಪ ಬಂಡೇರ, ಶಿಕ್ಷಕರಾದ ಭೀಮಾಶಂಕರ ಬಮ್ಮನಳ್ಳಿ, ಶಿವಕುಮಾರ ಸರಡಗಿ, ಗಂಗಪ್ಪ ಕಟ್ಟಿಮನಿ, ಸುಭಾಷ ಚವ್ಹಾಣ, ರಾಧಾ ರಾಠೋಡ, ಮಂಜುಳಾ ಪಾಟೀಲ, ಬಾಬು ಕಣ್ಣೂರ ಸೇರಿದಂತೆ ಮಕ್ಕಳು ಗ್ರಾಮಸ್ಥರು ಉಪಸ್ಥಿತರಿದ್ದರು.