ಕಲಬುರಗಿ: ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ, ಬಸವಪರ ಸಂಘಟನೆಗಳ ಹಾಗೂ ಕಾಯಕ ಶರಣರ ಒಕ್ಕೂಟದಿಂದ 890ನೇ ಬಸವ ಜಯಂತಿ ಉತ್ಸವ ನಿಮಿತ್ತ 24ರಿಂದ 28ವರೆಗೆ ನಾನಾ ಕಾರ್ಯಕ್ರಮ ನಡೆಯಲಿವೆ ಎಂದು ಜಯಂತ್ಯುತ್ಸವ ಸಮಿತಿ ಗೌರವಾಧ್ಯಕ್ಷ ಉಮಾಕಾಂತ ನಿಗ್ಗುಡಗಿ, ಸಮಿತಿ ಅಧ್ಯಕ್ಷ ರವಿಂದ್ರ ಶಾಬಾದಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣ ಅವರ ಮೂಲ ತತ್ವಗಳನ್ನು ಉಳಿಸಿ ಅವರ ಆಚಾರ ವಿಚಾರ ಜನರಿಗೆ ತಲುಪಿಸುವ ಮೂಲಕ ಈ ಬಾರಿ ಆಚರಣೆ ಮಾಡಲಾಗುತ್ತಿದೆ. ಜಯಂತ್ಯುತ್ಸವ ಯಶಸ್ಸಿಗೆ ನಾನಾ ಸಮಿತಿಗಳನ್ನು ರಚನೆ ಮಾಡಲಾಗಿದೆ. ನಿತ್ಯ ಸಂಜೆ ಅನುಭಾವ ಉಪನ್ಯಾಸ ನಡೆಯಲಿದೆ. ಏ.29ರಂದು ಸಾಂಸ್ಕøತಿಕ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಏ.24ರಂದು ಸಂಜೆ 6ಕ್ಕೆ ಬಸವಣ್ಣ ಅವರ ಮೂರ್ತಿ ಆವರಣದಲ್ಲಿ ನಡೆಯುವ ಕಾರ್ಯಕ್ರಮದ ಸಾನ್ನಿಧ್ವವನ್ನು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ಶ್ರೀಬಸವಲಿಂಗ ಪಟ್ಟದ್ದೇವರು ವಹಿಸಿಕೊಳ್ಳಲಿದ್ದಾರೆ. ಮುಕ್ತಂಪೂರ ಗದ್ದುಗೆ ಮಠದ ಚರಲಿಂಗ ಸ್ವಾಮೀಜಿ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಸಮಿತಿ ಗೌರಾವಾಧ್ಯಕ್ಷ ಉಮಾಕಾಂತ ನಿಗ್ಗುಡಗಿ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಅಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಎಸ್.ಜಿ.ಸಿದ್ರಾಮಯ್ಯ ಅನುಭಾವ ಹಂಚಿಕೊಳ್ಳಲಿದ್ದಾರೆ.
ಏ.25ರ ಕಾರ್ಯಕ್ರಮದಲ್ಲಿ ನೇಲೋಗಿಯ ಶ್ರೀಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿಕೊಳ್ಳಲಿದ್ದು, ರಾವೂರು ಶ್ರೀ ಶ್ರೀಸಿದ್ಧಲಿಂಗ ಸ್ವಾಮೀಜಿ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ ಅನುಭಾವ ಮಂಡನೆ ಮಾಡಲಿದ್ದಾರೆ.
ಏ.26ರ ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ಸಂಸ್ಥಾನದ ಮಾತೋಶ್ರೀ ದಾಕ್ಷಾಯಿಣಿ ಎಸ್.ಅಪ್ಪಾ ಸಾನ್ನಿಧ್ಯ ವಹಿಸಿಕೊಳ್ಳಲಿದ್ದಾರೆ. ಕಲಬುರಗಿ ಅಕ್ಕ ಮಹಾದೇವಿ ಆಶ್ರಮದ ಶ್ರೀಪ್ರಭು ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಅಕ್ಕಮಹಾದೇವಿ ವಿವಿ ಪೆÇ್ರ. ವಿಜಯಾದೇವಿ ಮಿಸೆ ಅನುಭಾವ ಮಂಡನೆ ಮಾಡಲಿದ್ದಾರೆ.
ಏ.27ರ ಕಾರ್ಯಕ್ರಮದಲ್ಲಿ ಧುತ್ತರಗಾಂವ್ ಉಸ್ತುರಿ ಮಠದ ಶ್ರೀವಿಶ್ವನಾಥ ಕೋರಣೆಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿಕೊಳ್ಳಲಿದ್ದಾರೆ. ಚಿಗರಳ್ಳಿಯ ಶ್ರೀಸಿದ್ಧಬಸವ ಕಬೀರ ಸ್ವಾಮೀಜಿ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಶರಣ ಸಾಹಿತಿ ಜೆ.ಎಸ್.ಪಾಟೀಲ್ ಅನುಭಾವ ಮಂಡನೆ ಮಾಡಲಿದ್ದಾರೆ. ಏ.28ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಚಿತ್ತರಗಿಯ ಶ್ರೀಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿಕೊಳ್ಳಲಿದ್ದಾರೆ. ಲಿಂಗಸೂಗುರಿನ ಶ್ರೀಸಿದ್ಧಲಿಂಗ ಸ್ವಾಮೀಜಿ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ನಿವೃತ್ತ ಪ್ರಾಚಾರ್ಯ ವಿ.ಚಂದ್ರಶೇಖರ ನಂಗಲಿ ಅವರು ಅನುಭಾವ ಮಂಡನೆ ಮಾಡಲಿದ್ದಾರೆ. ನಿತ್ಯ ಷಟಸ್ಥಲ ಧ್ವಜಾರೋಹಣ, ವಿಶೇಷ ಸನ್ಮಾನ, ವಚನ ನೃತ್ಯ ನಡೆಯಲಿದೆ. ಜಯಂತಿ ನಿಮಿತ್ತ ವಿದ್ಯಾರ್ಥಿನಿಯರಿಗೆ ಮೂರು ವಿಭಾಗದಲ್ಲಿ ಹಾಗೂ ಮಹಿಳೆಯರಿಗೆ ವಸನ ಕಂಠಪಾಠ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಗಾಂವಕರ್, ಉತ್ಸವ ಪ್ರಧಾನ ಸಂಚಾಲಕ ಆರ್.ಜಿ.ಶೆಟಗಾರ,
ಪ್ರಧಾನ ಕಾರ್ಯದರ್ಶಿ ಶಿವಕುಮಾರ ಬಿದರಿ, ಬಸವರಾಜ ಧೂಳಾಗುಂಡಿ, ಸಂಗಮೇಶ ಗುಡ್ಡೆವಾಡ, ಅಶೋಕ ಘೂಳಿ, ಶಿವಶರಣಪ್ಪ ದೇಗಾಂವ, ಹಣಮಂತರಾವ ಪಾಟೀಲ, ಶಶಿಕಾಂತ ಪಸಾರ ಇತರರಿದ್ದರು.
ಚುನಾವಣಾ ತರಬೇತಿ ಬೇಡ; ಬಸವ ಜಯಂತಿ ದಿನ ಕಲಬುರಗಿ ಜಿಲ್ಲಾದಿಕಾರಿ ಚುನಾವಣಾ ತರಬೇತಿ ಕಾರ್ಯಕ್ರಮ ಇಟ್ಟುಕೊಂಡಿದ್ದು, ಸರ್ಕಾರಿ ರಜೆ ಮೇಲಾಗಿ ಮಹಾತ್ಮರ ಜಯಂತ್ಯುತ್ಸವ ಇರುವುದರಿಂದ ಆ ದಿನ ತರಬೇತಿ ಬೇಡ. ನೆರೆಯ ಯಾದಗಿರಿ ಹಾಗೂ ಬೀದರ್ ಜಿಲ್ಲಾಧಿಕಾರಿಗಳು ತರಬೇತಿ ಮುಂದೂಡಿರುವಾಗ ಕಲಬುರಗಿ ಜಿಲ್ಲಾಧಿಕಾರಿ ಯಾಕೆ ಅದೇ ದಿನ ಎಂದು ಹಠ ಹಿಡಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.